ನಲ್ಲೆಯ ಮೋಸದಾಟಕ್ಕೆ ಜೀವ ಚೆಲ್ಲಿದ ರಾಷ್ಟ್ರಮಟ್ಟದ ಕಬಡ್ಡಿ ಆಟಗಾರ –
ನಾಲ್ಕು ವರ್ಷದ ಪ್ರೀತಿ, ಮದ್ವೆಯಾಗಿ 15 ದಿನಕ್ಕೆ ಉಲ್ಟಾ ಹೊಡೆದ ಪ್ರಿಯತಮೆ
ಚಿಕ್ಕಮಗಳೂರು ಜಿಲ್ಲೆಯ ರಾಷ್ಟ್ರಮಟ್ಟದ ಕಬಡ್ಡಿ ಆಟಗಾರ, ಅವಳು ಪಿಯುಸಿ ವಿದ್ಯಾರ್ಥಿನಿ, ಇಬ್ಬರ ನಡುವೆ ಹುಚ್ಚು ಪ್ರೇಮ. ಪ್ರೊ ಕಬಡ್ಡಿಯಲ್ಲಿ ಆಟವಾಡುವ ಕನಸು ಕಂಡವ ಪ್ರೀತಿಯ ಹುಚ್ಚಿಗೆ ಬಿದ್ದಿದ್ದ. ಹುಡುಗಿ ಮನೆಯವರ ವಿರೋಧದ ನಡೆವೆ ಪ್ರೀತಿ ಉಳಿಸಿಕೊಳ್ಳುವ ಸವಾಲಿಗೆ ಬಿದ್ದು ಅವಳನ್ನೇ ಮದುವೆಯಾಗಿದ್ದ.ಪ್ರೀತಿಯಿಂದ ಆರಂಭವಾಗಿ ವಿವಾಹ ಬಂಧನಕ್ಕೆ ಬಿದ್ದವನು ಕಟ್ಟಿಕೊಂಡವಳ ಚೆಲ್ಲಾಟಕ್ಕೆ ಜೀವ ಚೆಲ್ಲಿದ್ದಾನೆ.
ಆತ ತೊಡೆ ತಟ್ಟಿ ಕಬಡ್ಡಿ ಅಲಾಡಕ್ಕೆ ಇಳಿದರೆ ಅವನದೇ ಕೂಗು, ಅವನಿದ್ದ ಟೀಮ್ ಗೆಲ್ಲೋದು ಪಕ್ಕಾ ಎನ್ನುವ ಮಟ್ಟಿಗೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ಹೆಸರು ಮಾಡಿದ್ದ ವಿನೋದ್ ರಾಜ್, ತನ್ನ ಮನೆಯಲ್ಲೇ ನೇಣು ಬಿಗಿದು ಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ. ಅಯ್ಯೋ ವಿನೋದ್ಗೆ ಏನಾಯ್ತು, ನೇಣಿಗೆ ಶರಣಾಗಿ ಈ ವಯಸ್ಸಿನಲ್ಲಿ ಜೀವ ಬಿಡುವಂಥದ್ದು ಏನಾಗಿತ್ತು. ಪ್ರೊ ಕಬಡ್ಡಿ ಆಡಬೇಕು, ಹೆಸರು ಮಾಡಬೇಕು ಅಂತಿದ್ದವನು ಯಾಕೀಗೆ ಮಾಡಿಕೊಂಡ ಎಂದು ಮೃತ ವಿನೋದ್ ಸ್ನೇಹಿತರು, ಊರಿನವರು ಕಣ್ಣೀರು ಹಾಕುತ್ತಿದ್ದರು. ಅಷ್ಟಕ್ಕೂ ಕೆಲ ದಿನಗಳ ಹಿಂದೆ ಪ್ರೀತಿಸಿದ ಹುಡುಗಿಯನ್ನೇ ಮದುವೆಯಾಗಿದ್ದ ನ್ಯಾಷನಲ್ ಲೆವೆಲ್ ಕಬಡ್ಡಿ ಆಟಗಾರ ವಿನೋದ್ ರಾಜ್ ಬದುಕಿನ ದುರಂತಕ್ಕೆ ಅವಳು ಹಾಗೂ ಅವಳ ಮೇಲಿನ ಹುಚ್ಚು ಪ್ರೇಮ ಕಾರಣವಾಗಿದೆ.
ಚಿಕ್ಕಮಗಳೂರು ನಗರದ ಹೊರವಲಯದಲ್ಲಿರುವ ತೇಗೂರು, ಇದೆ ಗ್ರಾಮದ ಪರಮೇಶ್ ಅರಸ್ ಅವರ ಮಗ ವಿನೋದ್ ರಾಜ್ ಕಳೆದ ಶುಕ್ರವಾರ(ಫೆ.2) ತೇಗೂರಿನ ಮನೆಯಲ್ಲೇ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ. ಮನೆಯಲ್ಲೇ ಇದ್ದ ವಿನೋದ್ ತಾಯಿ ಅಕ್ಕ ಪಕ್ಕದವರನ್ನು ಕರೆದು ಮಗನನ್ನ ನೇಣು ಕುಣಿಕೆಯಿಂದ ರಕ್ಷಿಸಿ ಚಿಕ್ಕಮಗಳೂರಿನ ಮಲ್ಲೇಗೌಡ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದರು. ಆದ್ರೆ, ಪರಿಸ್ಥಿತಿ ಗಂಭೀರವಾಗಿದ್ದ ವಿನೋದ್ನನ್ನ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡುವಂತೆ ವೈದ್ಯರು ಸೂಚಿಸಿದ್ದರು. ಅದರಂತೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವಿನೋದ್ ಸೋಮವಾರ ಉಸಿರು ಚೆಲ್ಲಿದ್ದ.
ಮಂಗಳೂರಿನ ಆಸ್ಪತ್ರೆಯಿಂದ ವಿನೋದ್ ಶವ ತೇಗೂರಿಗೆ ಬರುತ್ತಿದ್ದಂತೆ ಗ್ರಾಮಸ್ಥರು, ವಿನೋದ್ ಸ್ನೇಹಿತರು ಕಣ್ಣೀರು ಹಾಕಿದರು. ವಿನೋದ್ ತಾಯಿ ಪ್ರೊ ಕಬಡ್ಡಿ ಆಡಬೇಕು ಅಂತಿದ್ಯಲ್ಲೋ ಮಗನೇ, ಯಾಕೋ ಬಿಟ್ಟು ಹೋದೆ ಎಂದು ಎದೆ ಬಡಿದುಕೊಂಡು ಕಣ್ಣೀರು ಸುರಿಸುತ್ತಿದ್ದರು. ಇತ್ತ ವಿನೋದ್ ತಂದೆ ಸಂಬಂಧಿಕರು, ಗೆಳೆಯರು ಎಲ್ಲಾ ಅವಳಿಂದಲೇ, ಅವಳೇ ಇದಕ್ಕೆ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದರು. 23 ವರ್ಷದ ವಿನೋದ್ ರಾಜ್ ಅರಸ್ ನ್ಯಾಷನಲ್ ಲೆವೆಲ್ನಲ್ಲಿ ಹೆಸರು ಮಾಡಿದ ಕಬಡ್ಡಿ ಆಟಗಾರ. ಮನೆಯಲ್ಲಿದ್ದ ಬಡತನದಿಂದ ತಂದೆ ಜೊತೆ ಇದ್ದ ಎರಡು ಎಕರೆ ಹೊಲದಲ್ಲಿ ಕೆಲಸ ಮಾಡುತ್ತಿದ್ದ ವಿನೋದ್ಗೆ ಕೆಲ ದಿನಗಳ ಹಿಂದಷ್ಟೇ ಶಾಲೆಯೊಂದರಲ್ಲಿ ಕಬಡ್ಡಿ ಕೋಚ್ ಆಗಿ ಕೆಲಸ ಸಿಕ್ಕಿತ್ತು. ಕೆಲಸ ಸಿಕ್ಕ ಖುಷಿಯಲ್ಲಿ ಪ್ರೊ ಕಬಡ್ಡಿ ಅವಕಾಶಕ್ಕಾಗಿ ತಯಾರಿ ಮಾಡುತ್ತಿದ್ದ. ಅದಕ್ಕೆಲ್ಲಾ ಅಡ್ಡ ಬಂದಿದ್ದು ವಿನೋದ್ ಮತ್ತು ಇದೇ ಗ್ರಾಮದ ತನುಜಾ ನಡುವಿನ ನಾಲ್ಕು ವರ್ಷದ ಲವ್ ಕಹಾನಿ.
ಮದ್ವೆಯಾದ 15 ದಿನಕ್ಕೆ ತನುಜಾ ತಾಯಿ ಮನೆಗೆ ಹೋಗಿ ಬರ್ತೀನಿ ಎಂದು ಹೋದವಳು ಮತ್ತೆ ವಿನೋದ್ ಮನೆಗೆ ಬರಲೇ ಇಲ್ಲ. ಇವತ್ತು ಬರ್ತಾಳೆ, ನಾಳೆ ಬರ್ತಾಳೆ ಎಂದು ಕಾದಿದ್ದ ವಿನೋದ್ಗೆ ಪೊಲೀಸರು ಶಾಕ್ ನೀಡಿದರು. ಚಿಕ್ಕಮಗಳೂರು ಗ್ರಾಮಾಂತರ ಠಾಣೆಯ ಪೊಲೀಸರು ವಿನೋದ್ ಮನೆಗೆ ಬಂದು ನಿಮ್ಮ ಮೇಲೆ ತನುಜಾ ಮತ್ತು ಪೋಷಕರು ದೂರು ನೀಡಿದ್ದಾರೆ. ಠಾಣೆಗೆ ಬರಬೇಕು ಎಂದಿದ್ದಾರೆ. ಅಯ್ಯೋ ಮತ್ತೇನು ಆಯ್ತಪ್ಪ ಎಂದು ವಿನೋದ್ ತಂದೆ ಪರಮೇಶ್, ಮಗನ ಜೊತೆಗೆ ಠಾಣೆಗೆ ಹೋಗಿದ್ದಾರೆ. ಗ್ರಾಮಾಂತರ ಠಾಣೆಯಿಂದ ಚಿಕ್ಕಮಗಳೂರು ಮಹಿಳಾ ಪೊಲೀಸ್ ಠಾಣೆಗೆ ವಿನೋದ್ ತನುಜಾ ಲವ್ ಸ್ಟೋರಿ ಪ್ರಕರಣ ಶಿಫ್ಟ್ ಆಗಿತ್ತು .
ಮಹಿಳಾ ಪೊಲೀಸ್ ಠಾಣೆಯಲ್ಲಿ ಪೊಲೀಸರ ಮುಂದೆ ವಿನೋದ್ ನಿಂದ ನನ್ನ ಜೀವನ ಹಾಳಾಯಿತು. ನನಗೆ ಪರೀಕ್ಷೆ ಇತ್ತು, ನನ್ನ ಹೆದರಿಸಿ ಮದುವೆಯಾದ ಸಾರ್, ಇವನಿಗೆ ಶಿಕ್ಷೆ ಆಗಬೇಕು ಎಂದು ನಗುನಗುತ ಮದುವೆಯಾಗಿದ್ದ, ನಾಲ್ಕು ವರ್ಷ ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸಿದ್ದ ತನುಜಾ ಉಲ್ಟಾ ಹೊಡೆದಿದ್ದಳು. ಪೊಲೀಸ್ ಠಾಣೆಯಲ್ಲಿ ವಿನೋದ್ ಪೋಷಕರು ತನುಜಾ ಪೋಷಕರು ಮಾತುಕತೆ ನಡೆಸಿದರು. ಪೊಲೀಸರು ಎಷ್ಟೇ ಹೇಳಿದರೂ ನೋ ಮೇಡಂ ನನಗೆ ನ್ಯಾಯ ಬೇಕು, ನಾನು ಇವನ ಜೊತೆ ಹೋಗಲ್ಲ. ನಾನು ತಾಯಿ ಮನೇಲೇ ಇರ್ತೀನಿ ಎಂದು ತನುಜಾ ಹೇಳಿದ್ದು, ಠಾಣೆಯಲ್ಲಿಯೇ ಇಬ್ಬರೂ ದೂರವಾಗಿದ್ದರು.
ನಾಲ್ಕು ವರ್ಷ ಪ್ರೀತಿಸಿ ಮದುವೆಯಾಗಿದ್ದ ತನುಜಾ ತನಗೆ ಮಾಡಿದ ಮೋಸಕ್ಕೆ, ಊರವರ ಮುಂದೆ ತಂದೆ – ತಾಯಿಯ ಮರ್ಯಾದೆ ಹೋಯ್ತಲ್ಲ ಎಂದು ದುಃಖಕ್ಕೆ ಬಿದ್ದಿದ್ದ. ಮನೆಯಿಂದ ಹೊರಬರದೆ ಏಕಾಂಗಿಯಾಗಿ ಇರ್ತಿದ್ದ ವಿನೋದ್, ಫೆಬ್ರವರಿ 2 ರ ಮಧ್ಯಾಹ್ನ ಮನೆಯಲ್ಲಿ ನೇಣಿಗೆ ಶರಣಾಗಿದ್ದ. ಪ್ರೊ ಕಬಡ್ಡಿ ಕನಸು ಕಂಡಿದ್ದ ವಿನೋದ್ ತನುಜಾಳ ಹುಚ್ಚಾಟಕ್ಕೆ ಬಿದ್ದು ಬದುಕನ್ನ ದುರಂತ ಮಾಡಿಕೊಂಡಿದ್ದಾನೆ. ಎದೆ ಮಟ್ಟಕ್ಕೆ ಬೆಳೆದ 23 ವರ್ಷದ ಮಗ ಕಣ್ಣೆದುರಿಗೆ ಪ್ರೀತಿ, ಕಬಡ್ಡಿ, ಹೆತ್ತವರನ್ನೂ ಬಿಟ್ಟು ಹೋದ್ನಲ್ಲ ಎಂಬ ಸಂಕಟ, ಪ್ರೀತಿ ನಾಟಕವಾಡಿ ಮದುವೆಯಾಗಿ ಮಗನಿಗೆ ಮೋಸ ಮಾಡಿದಳಲ್ಲ ಅವಳು ಎಂಬ ಸಿಟ್ಟು. ಇನ್ನೊಂದೆಡೆ ಮಗನೇ ಬಿಟ್ಟು ಹೋದ್ನಲ್ಲ ಇನ್ನೇನಿದೆ ಈ ಬದುಕಲ್ಲಿ ಅಂತಿದ್ದಾರೆ ವಿನೋದ್ ಪೋಷಕರು. ಇನ್ನು ಚಿಕ್ಕಮಗಳೂರು ಗ್ರಾಮಾಂತರ ಠಾಣೆಯಲ್ಲಿ ತನುಜಾ ವಿರುದ್ಧ ವಿನೋದ್ ಪೋಷಕರು ದೂರು ನೀಡಿ ನ್ಯಾಯಕ್ಕಾಗಿ ಆಗ್ರಹಿಸಿದ್ದಾರೆ. ಅದೇನೆ ಇರಲಿ ನ್ಯಾಷನಲ್ ಲೆವೆಲ್ ಕಬಡ್ಡಿ ಆಟಗಾರ ಪ್ರೇಮದ ಮೋಹಕ್ಕೆ ಬಿದ್ದು ಬಂದುಕನ್ನ ಅಂತ್ಯ ಮಾಡಿಕೊಂಡಿದ್ದು ದುರಂತ.