“ಶ್ರದ್ದಾಭಕ್ತಿಯಿಂದ ಅಭ್ಯಂಗ ಸ್ನಾನದೊಂದಿಗೆ ನರಕ ಚತುರ್ದಶಿ ಸಂಭ್ರಮಾಚರಣೆ’’
ರಿಪ್ಪನ್ಪೇಟೆ;- ನರಕ ಚತುರ್ದಶಿಯ ಅಂಗವಾಗಿ ಹೊಸನಗರ ತಾಲೂಕಿನ ವಿವಿಧಡೆ ಯಲ್ಲಿ ನಾಗರಿಕರು ಭಾನುವಾರ ಶ್ರದ್ಧಾಭಕ್ತಿಯಿಂದ ಅಭ್ಯಂಗ ಸ್ನಾನದೊಂದಿಗೆ ನರಕ ಚತುರ್ದಶಿಯನ್ನು ಸಂಭ್ರಮದಿಂದ ಆಚರಿಸಿದರು.
ಮಹಿಳೆಯರು ಮನೆಯ ಬಳಿಯಲ್ಲಿ ತೆರೆದ ಬಾವಿಯ ಸುತ್ತ ಸಗಣಿ ನೀರಿನಿಂದ ಶುದ್ದಿಕರಿಸಿ ಮಾವಿನ ತೋರಣ ಮತ್ತು ಜೇಡಿ ಕೆಮ್ಮಣ್ಣು ರಂಗೋಲಿಗಳಿಂದ ಶೃಂಗರಿಸಿ ಮುಂಜಾನೆ ಪೂಜೆಗೆ ಅಣಿಗೊಳಿಸಿಕೊಂಡು ಮುಂಜಾವಿನಲ್ಲಿ ಮುತ್ತೈದೆಯರು ಮಣ್ಣಿನ ಕುಂಭದೊಂದಿಗೆ ಪೂಜಾ ಸಾಮಗ್ರಿಯನ್ನು ಹಿಡಿದುಕೊಂಡು ಬಂದು ಗಂಗಾಮಾತೆಯನ್ನು ಪೂಜಿಸಿ ನೈವೇದ್ಯ ಮಾಡಿ ನೀರು ತುಂಬಿಕೊಂಡು ಮನೆಯಲ್ಲಿನ ದೇವರ ಗುಡಿಯಲ್ಲಿಟ್ಟು ಪೂಜಿಸಿ ಶ್ರದ್ದಾಭಕ್ತಿಯಿಂದ ಅ ಭ್ಯಂಗ ಸ್ನಾನಮಾಡುವುದರೊಂದಿಗೆ ನರಕಚತುರ್ದಶಿ ಹಬ್ಬವನ್ನು ಸಂಭ್ರಮಿಸಿದರು.
ಮಣ್ಣಿನ ಕುಂಭವನ್ನು ಮಾವಿನ ತೋರಣ ಹೂವಿನ ಅಲಂಕಾರದೊಂದಿಗೆ ಶೃಂಗರಿಸಿ ಬಂಗಾರದ ಆಭರಣವನ್ನು ಇಟ್ಟು ನರಕ ಚತುರ್ದಶಿಯ ದಿನ ಸುಮಂಗಳೆಯರು ಬಾವಿಯ ಬಳಿ ಪೂಜೆ ಸಲ್ಲಿಸಿ ಮುತ್ತೈದೆಯರಿಗೆ ಅರಿಶಿಣ ಕುಂಕುಮದೊಂದಿಗೆ ಬಾಗಿನ ನೀಡಿ ಹಿರಿಯರಿಂದ ಆಶೀರ್ವಾದ ಪಡೆಯುತ್ತಾರೆ.
ನಂತರ ತಮ್ಮ ಸ್ನಾನದ ಮನೆಯಲ್ಲಿನ ನೀರಿನ ಹಂಡೆಗೆ ಹಿಡ್ಲಚ್ಚಿ ಬಳ್ಳಿ ಮತ್ತು ಮಹಾಲಿಂಗನ ಬಳ್ಳಿಯಿಂದ ಆಲಂಕರಿಸಿ ಅದರಲ್ಲಿ ಮುಂಜಾನೆ ಬಾವಿಯಿಂದ ತಂದ ನೀರನ್ನು ಹಾಕಿ ಆಭ್ಯಂಗನ ಸ್ನಾನ ಮಾಡುವುದು ಪರಂಪಾರಿಕವಾಗಿ ಬೆಳೆದು ಬಂದ ಪದ್ದತಿಯಾಗಿದ್ದು ಮಕ್ಕಳು ದೊಡ್ಡವರು ಮೈಗೆಲ್ಲಾ ಎಣ್ಣೆ ಹಚ್ಚಿಕೊಂಡು ಬಿಸಿಬಿಸಿ ನೀರಿನ ಸ್ನಾನ ಮಾಡಿ ನಂತರ ಕೊಟ್ಟೆಕಡಬು ಮತ್ತು ಚಿನ್ನಿಕಾಯಿನ ಕಡಬು ತಿಂದು ಸಂಭ್ರಮಿಸುವುದು ಈ ಹಬ್ಬದ ವಿಶೇಷವಾಗಿದೆ.