ಚಾನೆಲ್ ಗೆ ಹಾರಿದ ವ್ಯಕ್ತಿಯೊಬ್ಬರನ್ನು ರಕ್ಷಿಸಲು ಹೋಗಿ ರಿಪ್ಪನ್ಪೇಟೆಯ ಯುವಕನೊಬ್ಬ ನಾಪತ್ತೆಯಾಗಿರುವ ಘಟನೆ ದಾವಣಗೆರೆ ಜಿಲ್ಲೆಯ ಹೊಳೆಹೊನ್ನೂರು ಸಮೀಪದ ಸಿದ್ದಾಪುರ ಚಾನೆಲ್ ಬಳಿ ನಡೆದಿದೆ.
ರಿಪ್ಪನ್ ಪೇಟೆ ನೆಹರು ನಗರ ನಿವಾಸಿ ಅನೀದ್ (22) ವರ್ಷ ನಾಪತ್ತೆಯಾಗಿರುವ ಯುವಕನಾಗಿದ್ದಾನೆ.
ಅನೀದ್ ಲಾರಿಯೊಂದರಲ್ಲಿ ನಿರ್ವಾಹಕನಾಗಿ ಕಾರ್ಯನಿರ್ವಹಿಸುತ್ತಿದ್ದು, ದಾವಣಗೆರೆಯಿಂದ ಲಾರಿಯೊಂದರಲ್ಲಿ ಶಿವಮೊಗ್ಗಕ್ಕೆ ತೆರಳುತ್ತಿದ್ದಾಗ ಸಿದ್ದಾಪುರ ರಸ್ತೆ ಬದಿಯ ಚಾನೆಲೊಂದರ ಬಳಿ ಸೇರಿದ ಜನಸ್ತೋಮವನ್ನು ನೋಡಿ ಪ್ರಶ್ನಿಸಿದ್ದಾನೆ. ಆ ಸಂದರ್ಭದಲ್ಲಿ ವ್ಯಕ್ತಿಯೊಬ್ಬ ಚಾನೆಲ್ ಗೆ ಹಾರಿರುವ ವಿಚಾರ ಗಮನಕ್ಕೆ ಬಂದಿದ್ದು,ತಕ್ಷಣವೇ ಅವರನ್ನು ರಕ್ಷಿಸಲು ನೀರಿಗೆ ಜಿಗಿದಿದ್ದಾನೆ,ಕೆಲ ಕ್ಷಣ ಕಳೆದರು ರಕ್ಷಿಸಲು ತೆರಳಿದ್ದ ಅನೀದ್ ನೀರಿನಿಂದ ಮೇಲೆ ಬರಲಿಲ್ಲ.
ಯುವಕನ ಪತ್ತೆ ಕಾರ್ಯ ನಡೆಯುತಿದ್ದು ಸ್ಥಳಕ್ಕೆ ಅಗ್ನಿಶಾಮಕ ದಳದವರು ಆಗಮಿಸಿದ್ದಾರೆ.
ಚಾನೆಲ್ ಗೆ ಹಾರಿದ ವಯೋವೃದ್ದ ಹಾಗೂ ಆತನನ್ನು ರಕ್ಷಿಸಲು ಹಾರಿದ್ದ ಯುವಕನನ್ನು ಚಾನೆಲ್ ನಲ್ಲಿ ಶೋಧಿಸುವಾಗ ಚಾನೆಲ್ ಗೆ ಹಾರಿದ್ದ ವಯೋವೃದ್ದನ ಮೃತದೇಹದ ಜೊತೆ ವಯೋವೃದ್ದೆಯೊಬ್ಬರ ಮೃತದೇಹ ಪತ್ತೆಯಾಗಿದೆ.
ಘಟನೆ ನಡೆದು ಏಳು ತಾಸು ಕಳೆದರು ವಯೋವೃದ್ದನನ್ನು ರಕ್ಷಿಸಲು ಚಾನೆಲ್ ಗೆ ಹಾರಿದ್ದ ಯುವಕನ ಪತ್ತೆ ಸಾಧ್ಯವಾಗಲಿಲ್ಲ,ಕತ್ತಲಾಯಿತು ಎಂದು ಅಗ್ನಿಶಾಮಕ ದಳದವರು ಪತ್ತೆ ಕಾರ್ಯ ನಿಲ್ಲಿಸಿ ಹಿಂದಿರುಗಿದ್ದಾರೆ.
ಅಗ್ನಿಶಾಮಕ ದಳದವರು ಕಾರ್ಯಚಾರಣೆ ನಿಲ್ಲಿಸಿರುವುದಕ್ಕೆ ಯುವಕನ ಕುಟುಂಬದರು ಆಕ್ರೋಶಿತರಾಗಿದ್ದಾರೆ.ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ನಾಪತ್ತೆಯಾಗಿರುವ ಯುವಕನ ಪತ್ತೆಗೆ ಸಹಕರಿಸಬೇಕೆಂದು ಕುಟುಂಬಸ್ಥರು ಅಂಗಲಾಚುತ್ತಿದ್ದಾರೆ.