ಪುರುದಾಳು ಗ್ರಾಮದ ಫಾರೆಸ್ಟ್ ಚೆಕ್ ಪೋಸ್ಟ್ ಬಳಿ ಬೈಕ್ ಅಪಘಾತವಾಗಿ ಪೆಸಿಟ್ ಕಾಲೇಜಿನ ಇಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ಮೃತ ಪಟ್ಟಿದ್ದಾನೆ.
ಅತಿವೇಗ ಮತ್ತು ಅಜಾಗರೂಕತೆಯಿಂದ ಬೈಕ್ ಚಲಾಯಿಸಿದ್ದರ ಪರಿಣಾಮ ಬೈಕ್ ನಿಂದ ಬಿದ್ದು ಇಂಜಿನಿಯರಿಂಗ್ ವಿದ್ಯಾರ್ಥಿ ಸುಧನ್ವ ಮೃತಪಟ್ಟಿದ್ದಾನೆ.
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಗೋಣಿಬೀಡು ತಾಲೂಕಿನ ಸುಧನ್ವ ಎಂಬ 21 ವರ್ಷದ ಅಂತಿಮ ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿಯು ತನ್ನ ಸ್ನೇಹಿತರೊಂದಿಗೆ ಪುರುದಾಳು ಗ್ರಾಮದಿಂದ ಶಿವಮೊಗ್ಗಕ್ಕೆ ಬೈಕ್ ನಲ್ಲಿ ತೆರಳಿದ್ದಾರೆ.
ಫಾರೆಸ್ಟ್ ಚೆಕ್ ಪೋಸ್ಟ್ ಬಳಿ ಸ್ನೇಹಿತ ಮನೋಜ್ ಮತ್ತು ಸುಧನ್ವ ಬರುತ್ತಿದ್ದ ಬೈಕ್ ಕೆ ಎ 14 ಇವಿ 6602 ಚಾಲಕನ ನಿಯಂತ್ರಣ ತಪ್ಪಿದ ಕಾರಣ ಅಪಘಾತವಾಗಿದೆ. ಸ್ನೇಹಿತ ಮನೋಜ್ ಗೆ ಸಣ್ಣಪುಟ್ಟ ಗಾಯಗಳಾಗಿವೆ. ಸುಧನ್ವನಿಗೆ ತಲೆಗೆ ತೀವ್ರವಾಗಿ ಪೆಟ್ಟುಬಿದ್ದಿದ್ದ ಕಾರಣ ತಕ್ಷಣವೇ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.ಆದರೆ ಸುಧನ್ವ ನನ್ನು ಪರೀಕ್ಷಿಸಿದ ವೈದ್ಯರು ಮೃತಪಟ್ಟಿರುವುದನ್ನು ಖಚಿತಪಡಿಸಿದ್ದಾರೆ.
ಸುಧನ್ವ ಪೆಸಿಟ್ ಕಾಲೇಜಿನ ಅಂತಿಮ ಇಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದು ವಿವೇಕಾನಂದ ಬಡಾವಣೆಯಲ್ಲಿ ವಾಸವಿದ್ದನು ಎಂದು ತಿಳಿದು ಬಂದಿದೆ.
ಪ್ರಕರಣದ ಬಗ್ಗೆ ತುಂಗಾನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.