ಬಸ್ ಸಂಚಾರ ಅವ್ಯವಸ್ಥೆ -ವಿದ್ಯಾರ್ಥಿಗಳು ಹಾಗೂ ಪ್ರಯಾಣಿಕರ ಪರದಾಟ : ದಿನನಿತ್ಯ ಬಸ್ ಪುಟ್ ಬೋರ್ಡ್ ನಲಿ ನೇತಾಡುತ್ತ ವಿದ್ಯಾರ್ಥಿಗಳ ಸಂಚಾರ
ಗದಗ-ಬಂಕಾಪುರ-ಹಾವೇರಿ ಮಾರ್ಗದ ಬಸ್ ವ್ಯವಸ್ಥೆ ಸರಿಯಾದ ಸಮಯಕ್ಕೆ ಇಲ್ಲದೆ, ಒಂದೇ ಬಸ್ ನಲ್ಲಿ ನೂರಾರು ಪ್ರಯಾಣಿಕರು ಪ್ರಯಾಣ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಜೀವ ಕೈಯಲ್ಲಿ ಹಿಡಿದು ಬಸ್ ಹತ್ತುತ್ತಿದ್ದಾರೆ.
ದಿನನಿತ್ಯ ವಿದ್ಯಾರ್ಥಿಗಳು, ಪ್ರಯಾಣಿಕರು ಬಸ್ ವ್ಯವಸ್ಥೆ ಇಲ್ಲದೆ ನರಕಯಾತನೆ ಅನುಭವಿಸುತ್ತಿದ್ದಾರೆ. ಶಿಗ್ಗಾಂವ ತಾಲ್ಲೂಕಿನ ಬಂಕಾಪುರ ಪಟ್ಟಣದ ಸುತ್ತಮುತ್ತಲಿನ ಗ್ರಾಮದ ನೂರಾರು ಪ್ರಯಾಣಿಕರು ಕೆಲಸಕ್ಕಾಗಿ ಹಾಗೂ ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕಾಗಿ ಹಾವೇರಿ ನಗರಕ್ಕೆ ಪ್ರಯಾಣ ಮಾಡುತ್ತಾರೆ.
ವೀಡಿಯೋ ಇಲ್ಲಿ ವೀಕ್ಷಿಸಿ👇
ಬೆಳಗಿನ ಜಾವದಿಂದಲೂ ನಿಲ್ದಾಣದಲ್ಲಿ ಬಸ್ ಗಾಗಿ ವಿದ್ಯಾರ್ಥಿಗಳು ಕಾದು ಕುಳಿತಿರುತ್ತಾರೆ. ಗದಗ, ಸವಣೂರು, ಹಾವೇರಿ ಡಿಪೋ ವಾಹನಗಳು ಸರಿಯಾದ ಸಮಯಕ್ಕೆ ಬಾರದೆ ಇರೋದಕ್ಕೆ ಹಾಗೂ ಬಸ್ಸಿನ ಸಂಖ್ಯೆ ಕಡಿಮೆಯಾದ ಕಾರಣ ಪ್ರಯಾಣಿಕರು ಅನಿವಾರ್ಯವಾಗಿ ಪ್ರತಿದಿನ ಬಸ್ ಬಾಗಿಲಲ್ಲಿ ನೇತಾಡುತ್ತ ಸಂಚಾರ ಮಾಡುತ್ತಿದ್ದಾರೆ.
ಸರಿಯಾದ ಸಮಯಕ್ಕೆ ವಿದ್ಯಾರ್ಥಿಗಳು ಕಾಲೇಜಿಗೆ, ಪ್ರಯಾಣಿಕರು ಕೆಲಸಕ್ಕೆ ತಲುಪಬೇಕೆಂದು ದಿನಂಪ್ರತಿ ಬೆಳಗಿನ ಉಪಹಾರವನ್ನು ಸೇವಿಸದೆ ಬಸ್ ನಿಲ್ದಾಣದಲ್ಲಿ ಬಸ್ ಗಾಗಿ ಕಾದು ಕುಳಿತಿರುತ್ತಾರೆ. ಆದರೆ ಬಸ್ ಇಲ್ಲದೆ ನಿಲ್ದಾಣದಲ್ಲಿ ಗಂಟೆ ಗಂಟಲೇ ಕಾದು ಕುಳಿದುಕೊಳ್ಳುವಂತಾಗಿದೆ ಎಂದು ಪ್ರಯಾಣಿಕರು ಅಳಲು ತೊಡಿಕೊಂಡಿದ್ದಾರೆ.
ಹಲವು ಬಾರಿ ಅವಘಡ :
ಬಸ್ ನಿಲ್ದಾಣದಲ್ಲಿ ಬಾಗಿಲಿನಲ್ಲಿ ಜೋತು ಬಿದ್ದು ಪ್ರಯಾಣ ಮಾಡುತ್ತಿರುವ ಸಂದರ್ಭದಲ್ಲಿ ಆಯತಪ್ಪಿ ನೆಲಕ್ಕೆ ಬಿದ್ದಿರುವ ಉದಾಹರಣೆಗಳಿವೆ. ಪ್ರಯಾಣಿಕರಿಗೆ ವಿದ್ಯಾರ್ಥಿಗಳಿಗೆ ಪ್ರಯಾಣದ ಸಂದರ್ಭದಲ್ಲಿ ಏನಾದ್ರು ಅವಘಡ ಸಂಭವಿಸಿದೆ ಹೊಣೆ ಯಾರು ? ಎಂದು ಪ್ರಯಾಣಿಕರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ.
ಕೋವಿಡ್ ಗಿಂತ ಮೊದಲು ಬಸ್ ವ್ಯವಸ್ಥೆ ಸರಿಯಾಗಿ ಇತ್ತು. ಆದರೆ ಕೋವಿಡ್ ನಂತರದಲ್ಲಿ ಬಸ್ ಸರಿಯಾಗಿ ಬರುತ್ತಿಲ್ಲ. ಇದರಿಂದ ವಿದ್ಯಾರ್ಥಿಗಳು, ಪ್ರಯಾಣಿಕರು ಬರುವ ಬಸ್ ಗಳಲ್ಲಿ ಅನಿವಾರ್ಯವಾಗಿ ಬಾಗಿಲಿನಲ್ಲಿ ಜೋತು ಬಿದ್ದು ಪ್ರಯಾಣ ಮಾಡುವಂತಾಗಿದೆ.
ಒಟ್ಟಿನಲ್ಲಿ ಪ್ರಯಾಣಿಕರು ವಿದ್ಯಾರ್ಥಿಗಳು ಬಸ್ ಅವ್ಯವಸ್ಥೆಯಿಂದ ನರಕಯಾತನೆ ಅನುಭವಿಸುತ್ತಿದ್ದು ಸಂಬಂಧ ಪಟ್ಟ ಅಧಿಕಾರಿಗಳು ಆದಷ್ಟು ಬೇಗ ಹೆಚ್ಚಿನ ಬಸ್ ವ್ಯವಸ್ಥೆ ಕಲ್ಪಿಸಲಿದ್ದಾರಾ ? ಎಂಬುವುದನ್ನು ಕಾದು ನೋಡಬೇಕಾಗಿದೆ.
ಈಗಾಗಲೇ ಸಂಬಂಧ ಪಟ್ಟ ಅಧಿಕಾರಿಗಳಿಗೆ ಹಲವು ಬಾರಿ ಬಸ್ ವ್ಯವಸ್ಥೆಗಾಗಿ ಆಗ್ರಹ ಮಾಡಲಾಗಿದೆ. ಆದರೆ ಅಧಿಕಾರಿಗಳು ಮಾತ್ರ ಕ್ಯಾರೇ ಎನ್ನುತ್ತಿಲ್ಲ. ಆದಷ್ಟು ಬೇಗ ಸಂಬಂಧ ಪಟ್ಟ ಅಧಿಕಾರಿಗಳು ಬೆಳಗಿನ ಜಾವ ಹಾಗೂ ಸಂಜೆ ಹೆಚ್ಚಿನ ಬಸ್ ವ್ಯವಸ್ಥೆ ಮಾಡಬೇಕು ಎಂಬುವುದು ನಮ್ಮ ಒತ್ತಾಯವಾಗಿದೆ–ದೀಪಕ ಮಡ್ಲಿ ,ಪ್ರಯಾಣಿಕರು
– ವರದಿ ನಿಂಗರಾಜ್ ಕೂಡಲ
ಹಾವೇರಿ ಜಿಲ್ಲೆ ( ಬಂಕಾಪುರ್ )