ಶಿವಮೊಗ್ಗ ತಾಳಗುಪ್ಪ-ಬೆಂಗಳೂರು ರೈಲಿನ ಇಂಜಿನ್ ಇವತ್ತು ಭದ್ರಾವತಿ ಸಮೀಪ  ಬೋಗಿಗಳಿಂದ ಕಳಚಿಕೊಂಡು ಮುಂದಕ್ಕೆ ಹೋಗಿತ್ತು. ಭದ್ರಾವತಿ ತಾಲೂಕು ಕಡದಕಟ್ಟೆ ರೈಲ್ವೆ ಲೆವೆಲ್ ಕ್ರಾಸಿಂಗ್ ಸಮೀಪದ ಬಿಳಕಿ ಪ್ರದೇಶದಲ್ಲಿ ಈ ಘಟನೆ ಇಂದು ಬೆಳಗ್ಗೆ ಸಂಭವಿಸಿದೆ. 
ತಾಳಗುಪ್ಪ – ಬೆಂಗಳೂರು ಇಂಟರ್ ಸಿಟಿ ಎಕ್ಸ್’ಪ್ರೆಸ್ ರೈಲು, (20652 – Talguppa Bangalore Intercity Sf Express) ನ ಇಂಜಿನ್ – ಬೋಗಿಗಳ ನಡುವೆ ಸಂಪರ್ಕ ಕಳೆದುಕೊಂಡಿದ್ದರಿಂದ ಘಟನೆ ಸಂಭವಿಸಿದೆ.  ಘಟನೆಯಿಂದ ಕೆಲ ಸಮಯ ಪ್ರಯಾಣಿಕರು ಗೊಂದಲಕ್ಕೊಳಗಾಗಿದ್ದರು.
ತಾಳಗುಪ್ಪದಿಂದ ಶಿವಮೊಗ್ಗ ಮುಖ್ಯ ರೈಲ್ವೆ ನಿಲ್ದಾಣಕ್ಕೆ ಆಗಮಿಸಿದ್ದ ರೈಲು, ಬೆಳಿಗ್ಗೆ 7 ಗಂಟೆ 5 ನಿಮಿಷಕ್ಕೆ ಭದ್ರಾವತಿ ನಿಲ್ದಾಣದತ್ತ ಪ್ರಯಾಣ ಬೆಳೆಸಿತ್ತು. ಮಾರ್ಗಮಧ್ಯೆ  ಬಿಳಕಿ ಸಮೀಪ ಏಕಾಏಕಿ ರೈಲ್ವೆ ಎಂಜಿನ್ ಬೋಗಿಗಳ ಬಿಟ್ಟು ಮುಂದಕ್ಕೆ ಚಲಿಸಿದೆ. ಕೊಂಚ ದೂರ ಕ್ರಮಿಸಿದ ನಂತರ ಎಂಜಿನ್ ನನ್ನು, ಲೋಕೋ ಪೈಲೆಟ್ ನಿಲ್ಲಿಸಿದ್ದಾರೆ.
ಇನ್ನೂ ವಿಷಯ ತಿಳಿಯುತ್ತಿದ್ದಂತೆ ಭದ್ರಾವತಿ ಹಾಗೂ ಶಿವಮೊಗ್ಗದ ರೈಲ್ವೆ ಇಲಾಖೆ ಸಿಬ್ಬಂದಿಗಳು ಸ್ಥಳಕ್ಕೆ ದೌಡಾಯಿಸಿದ್ದಾರೆ. ಎಂಜಿನ್ ಹಾಗೂ ಬೋಗಿ ನಡುವೆ ಸಂಪರ್ಕ ಕಲ್ಪಿಸಿದ್ದಾರೆ. ನಂತರ ರೈಲು ಭದ್ರಾವತಿಯತ್ತ ಪ್ರಯಾಣ ಬೆಳೆಸಿದೆ.ತದನಂತರ ಭದ್ರಾವತಿ ನಿಲ್ದಾಣದಲ್ಲಿ ಹೆಚ್ಚುವರಿ ದುರಸ್ತಿ ಕಾರ್ಯ ನಡೆಸಲಾಗಿದೆ. 
		 
                         
                         
                         
                         
                         
                         
                         
                         
                         
                        