ಮಾದಕ ವಸ್ತುಗಳ ನಿಗ್ರಹದ ಬಗ್ಗೆ ಗೃಹಸಚಿವರಿಂದ ಸಭೆ :

ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ, ಮಾದಕ ವಸ್ತುಗಳ ನಿಗ್ರಹದ ಬಗ್ಗೆ ಸಭೆ ನಡೆಸಿದ್ದಾರೆ. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಂಸ್ಥೆ ಪದಾಧಿಕಾರಿಗಳು ಸಭೆಯಲ್ಲಿ ಭಾಗಿಯಾಗಿದ್ದರು.ಮಾದಕ ವಸ್ತುಗಳ ಮಾಫಿಯಾ ವಿರುದ್ಧ ಕಾರ್ಯಕ್ರಮ ಯೋಜನೆ ರೂಪಿಸುವುದು, ಬಗರ್ ಹುಕುಂ ಜಾಗದಲ್ಲಿ ಗಾಂಜಾ ಬೆಳೆಸುವುದನ್ನ ನಿಯಂತ್ರಿಸುವುದರ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.

ಮಾದಕ ವಸ್ತುಗಳ ದಾಳಿ ವಿಚಾರವನ್ನ‌ ಪೊಲೀಸ್ ಇಲಾಖೆಯಿಂದಲೇ ಲೀಕ್ ಆಗುವುದರಿಂದ  ಮಾದಕ ವಸ್ತು ಮಾರುವವನು ಎಚ್ಚರಗೊಳ್ಳುತ್ತಿದ್ದಾರೆ ಎಂಬ ಮಾಹಿತಿ ಸಭೆಯಲ್ಲಿ ಕೇಳಿಬಂದಿತು. ಈ ಬಗ್ಗೆ ಪ್ರತಿಕ್ರಿಯಿಸಿದ ಗೃಹಸಚಿವರು, ಅಂತಹ ಅಧಿಕಾರಿಗಳ ಬಗ್ಗೆ ಮಾಹಿತಿ ಇದ್ದರೆ ನಮಗೆ ಕೊಡಿ  ಸಿಬ್ಬಂದಿಗಳ ವಿರುದ್ಧ ಕ್ರಮಕೈಗೊಳ್ಳಲಾಗುವುದು ಎಂದು ಸೂಚಿಸಿದರು.

ಎಸ್ಪಿ ಡಾ.ಬಿ.ಎಂ. ಲಕ್ಷ್ಮೀ ಪ್ರಸಾದ್ ಮಾತನಾಡಿ ಶಾಲೆಯ ವ್ಯಾಪ್ತಿಯಲ್ಲಿ ವಾಟ್ಸಪ್ ಗ್ರೂಪ್ ರಚಿಸಿ ಅದರ ಬಗ್ಗೆ ಮಾಹಿತಿ ಪಡೆಯಲಾಗುತ್ತಿದೆ. ಪೊಲೀಸರು ಕ್ರಮ ಜರುಗಿಸುತ್ತಿದ್ದಾರೆ ಎಂದರು. ಗ್ರಾಮೀಣ ಭಾಗದಲ್ಲಿ ಊರಿನ ಆಚೆ ಶಾಲೆಗಳಿರುತ್ತವೆ. ಗಾಂಜಾ ಸೇವನೆ ಗ್ರಾಮೀಣಮಕ್ಕಳನ್ನೂ ಬಿಟ್ಟಿಲ್ಲ ಎಂದು ಧರ್ಮಸ್ಥಳದ ಗ್ರಾಮೀಣಾಭಿವೃದ್ಧ ಯೋಜನೆ ಪದಾಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.

ಈ ಬಗ್ಗೆ ಮಾತನಾಡಿದ ಗೃಹ ಸಚಿವ  ಪೊಲಿಸರಿಗಂತ ದೊಡ್ಡ ಜಾಲ ಇದೆ.  ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಂಸ್ಥೆಯ ಪದಾಧಿಕಾರಿಗಳು ಎಷ್ಟು ಹೊತ್ತಿನಿಂದ ಎಷ್ಟು ಹೊತ್ತಿನವರೆಗೆ ಮಕ್ಕಳು ಗಾಂಜಾ ಸೇವನೆ ಮಾಡುತ್ತಾರೆ ಎಂಬುದರ ಬಗ್ಗೆ ಮಾಹಿತಿ ನೀಡಿದರೆ  ಪೊಲೀಸರೊಂದಿಗೆ ದಾಳಿ ನಡೆಸುತ್ತಾರೆ ಎಂದರು.

ವೈಟ್ನರ್ ಬಳಕೆಗೆ ಸುತ್ತೋಲೆ :

ಮಕ್ಕಳು ವೈಟ್ನರ್ ಬಳಕೆ ಬಗ್ಗೆ ಚರ್ಚಿಸಲಾಯಿತು. ವೈಟ್ನರ್ ಬಳಕೆ ಕುರಿತು ಮಾತನಾಡಿದ ಡಿಸಿ ಡಾ.ಸೆಲ್ವಮಣಿ ವೈಟ್ನರ್ ಬಳಕೆ ಬಗ್ಗೆ ಸುತ್ತೋಲೆ ಹೊರಡಿಸಿ ವೈಟ್ನರ್ ಶಿಕ್ಷಕರು ಬಿಟ್ಟರೆ ಮಕ್ಕಳು ಬಳಸದಂತೆ ಆದೇಶಿಸಲಾಯಿತು. ವಿದ್ಯಾರ್ಥಿಗಳಿಗೆ ವೈಟ್ನರ್ ಬೇಕು ಎಂದಾದರೆ ಮುಖ್ಯೋಪದ್ಯಾಯರ ಅನುಮತಿ ಪತ್ರ ಪಡೆದು ವೈಟ್ನರ್ ಪಡೆಯಬಹುದು ಎಂದರು.  ಮಾದಕ ವಸ್ತುಗಳ ಸೇವನೆ, ಸಾಗಾಣಿಕೆ ಮತ್ತು ಪೂರೈಕೆಯಾಗುವ ಬಗ್ಗೆ ಜಾಗೃತಿ ಮೂಡಿಸಲು ಯೋಜನೆ ರೂಪಿಸಲು ಚರ್ಚಿಸಲಾಯಿತು.

ಡ್ರಗ್ಸ್, ಗಾಂಜಾ ಮತ್ತು ಮದ್ಯಸೇವನೆ ನಿಯಂತ್ರಣದ ಬಗ್ಗೆ ಜನಜಾಗೃತಿ ಕಾರ್ಯಕ್ರಮ ರೂಪಿಸಲು ಸಭೆ ತೀರ್ಮಾನಿಸಿತು. ಸಭೆಯಲ್ಲಿ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಅಧಿಕಾರಿಗಳು ಉಪಸ್ಥಿತಿತರಿದ್ದರು.

Leave a Reply

Your email address will not be published. Required fields are marked *