ಶಿವಮೊಗ್ಗ ಜಿಲ್ಲೆಗೆ ಮತ್ತೆ ವಕ್ಕರಿಸಿದ ಮಂಗನ ಕಾಯಿಲೆ.. ಪರಿಹಾರ ಯಾವ ಕಾಲಕ್ಕೋ!!!!!!

ಸಾಗರ ತಾಲೂಕಿನ ಕಾರ್ಗಲ್ ಸಮೀಪದ ಯಲ್ಲಮ್ಮ ಗುಡ್ಡದಲ್ಲಿ ಮಹಿಳೆಯೊಬ್ಬರಿಗೆ ಕ್ಯಾಸನೂರು ಅರಣ್ಯ ಕಾಯಿಲೆಯ ವೈರಸ್ ಸೋಂಕು ಇರುವುದು ದೃಢಪಟ್ಟಿದ್ದು, ಸ್ಥಳೀಯರಲ್ಲಿ ಆತಂಕ ಮನೆಮಾಡಿದೆ.

ಯಲ್ಲಮ್ಮ ಗುಡ್ಡದ ನಿವಾಸಿ ಸೀಮಾ ಬಾನು ಅವರಿಗೆ ತಲೆನೋವು, ಜ್ವರ, ಶೀತ, ನೆಗಡಿ, ಕೆಮ್ಮು, ಕಣ್ಣು ನೋವು ಕಾಣಿಸಿಕೊಂಡಿತ್ತು.

ಸರ್ಕಾರಿ ಆಸ್ಪತ್ರೆಗೆ ಹೋಗಿದ್ದರು. ಅಲ್ಲಿ ಪರೀಕ್ಷೆ ಮಾಡಿದಾಗ ಕೆಎಫ್‌ಡಿ ಸೋಂಕು ದೃಢಪಟ್ಟಿದೆ ಎಂದು ವೈದ್ಯರು ತಿಳಿಸಿದ್ದಾರೆ. ಕಾರ್ಗಲ್ ಆಸ್ಪತ್ರೆಗೆ ಸೀಮಾ ಬಾನು ಚಿಕಿತ್ಸೆಗೆ ಬಂದಾಗ ಶುಶ್ರೂಷಕಿಯರು ಜಿಲ್ಲಾ ವೈರಾಣು ಪರೀಕ್ಷಾ ಕೇಂದ್ರಕ್ಕೆ ಅವರ ರಕ್ತದ ಮಾದರಿ ಕಳುಹಿಸಿದ್ದರು. ಅವರಿಗೆ ಕೆಎಫ್‌ಡಿ ಸೋಂಕು ಈಗ ಧೃಢಪಟ್ಟಿದೆ.

ಸೀಮಾ ಬಾನು ಕೆಎಫ್‌ಡಿ ರೋಗ ನಿರೋಧಕ ಲಸಿಕೆ ಪಡೆದಿರಲಿಲ್ಲ. ಸೋಂಕು ದೃಢಪಟ್ಟಿರುವ ಯಲ್ಲಮ್ಮ ಗುಡ್ಡದ ಸುತ್ತಲಿನ ಪ್ರದೇಶಗಳಲ್ಲಿ ಈಗಾಗಲೇ 60ಕ್ಕೂ ಹೆಚ್ಚು ಜನರಿಗೆ ರೋಗ ನಿರೋಧಕ ಲಸಿಕೆ ನೀಡಲಾಗಿದೆ. ಕೊರೊನಾ ಲಸಿಕೆ ಎರಡೂ ಡೋಸ್ ಪಡೆದವರನ್ನು ಗುರುತಿಸಿ ಕೆಎಫ್‌ಡಿ ರೋಗ ನಿರೋಧಕ ಲಸಿಕೆ ನೀಡಲಾಗುತ್ತಿದೆ. ಆ ಭಾಗದ ಪ್ರತಿ ಮನೆಗೂ ಡಿಎಂಪಿ ತೈಲ ಪೂರೈಸಲಾಗಿದೆ.

 ಕಾಡಿನ ಅಂಚಿನ ಪ್ರದೇಶದಲ್ಲಿ ವಾಸ ಮಾಡುತ್ತಿರುವವರು ಕಡ್ಡಾಯವಾಗಿ ದ್ರಾವಣವನ್ನು ಲೇಪನ ಮಾಡಿಕೊಳ್ಳಬೇಕು. ರಕ್ತದೊತ್ತಡ ಮತ್ತು ಮಧುಮೇಹ ಉಳ್ಳವರಲ್ಲಿ ರೋಗ ಲಕ್ಷಣ ಕಂಡುಬಂದಲ್ಲಿ ಕೂಡಲೇ ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ಅಥವಾ ಆರೋಗ್ಯ ಇಲಾಖೆಯ ಶುಶ್ರೂಷಕಿಯರನ್ನು ಸಂಪರ್ಕಿಸಬೇಕು ಎಂದು ಕೆಎಫ್‌ಡಿ ತಜ್ಞ ಡಾ. ರವೀಂದ್ರ ಹೇಳಿದರು.

ಪರಿಹಾರ ಯಾವ ಕಾಲಕ್ಕೋ :

ಶಿವಮೊಗ್ಗ ಜಿಲ್ಲೆಯ ಸಾಗರದ ಶಾಸಕ ಹರತಾಳು ಹಾಲಪ್ಪ ರವರು ವಿಧಾನಸಭೆಯಲ್ಲಿ ಮಂಗನಕಾಯಿಲೆ ಸಂಕಷ್ಟದ ಬಗ್ಗೆ ವಿವರವಾಗಿ ಮಾತನಾಡಿ ಗಮನ ಸೆಳೆದಿದ್ದರು. ಆದರೆ ಇಲ್ಲಿಯವರೆಗೆ ಸಮರ್ಪಕ ಪರಿಹಾರ ಮಾತ್ರ ಸಿಕ್ಕಿಲ್ಲ. ಶಿವಮೊಗ್ಗ ಮತ್ತು ಉತ್ತರ ಕನ್ನಡ ಜಿಲ್ಲೆಯಲ್ಲಿ ಈ ಕಾಯಿಲೆ ಪ್ರತಿ ವರ್ಷ ತೊಂದರೆ ನೀಡುತ್ತದೆ.

Leave a Reply

Your email address will not be published. Required fields are marked *