ನೂತನ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಕಲಗೋಡು ರತ್ನಾಕರ್ ರವರಿಗೆ ಹುಟ್ಟೂರಿನಲ್ಲಿ ಆತ್ಮೀಯ ಸನ್ಮಾನ :

ರಿಪ್ಪನ್‌ಪೇಟೆ: ಜಿ.ಪಂ. ಮಾಜಿ ಅಧ್ಯಕ್ಷರಾದ ಕಲಗೋಡು ರತ್ನಾಕರರವರನ್ನು ಕಾಂಗ್ರೇಸ್ ಪಕ್ಷ ಕೆಪಿಸಿಸಿ ರಾಜ್ಯ ಪ್ರಧಾನಕಾರ್ಯದರ್ಶಿಯನ್ನಾಗಿ ನಿಯೋಜನೆ ಮಾಡಿರುವ ಹಿನ್ನೆಲೆಯಲ್ಲಿ ಕೋಡೂರಿನ ಗ್ರಾಮಸ್ಥರು ಮತ್ತು ಹಿತೈಷಿಗಳು ಸನ್ಮಾನಿಸಿ ಗೌರವಿಸಿದರು.


ಕೋಡೂರಿನ ಶ್ರೀಶಂಕ್ರೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ಮಂಗಳವಾರ ಸಂಜೆ ಆಯೋಜಿಸಲಾಗಿದ್ದ, ಕಾರ್ಯಕ್ರಮದಲ್ಲಿ ಕಲಗೋಡು ರತ್ನಾಕರರವರು ಸನ್ಮಾನ ಸ್ವೀಕರಿಸಿ ಮಾತನಾಡಿ ನನ್ನ ಬೆಳವಣಿಗೆಗೆ ಗ್ರಾಮದ ಎಲ್ಲಾ ಹಿರಿಯರ ಆಶೀರ್ವಾದ, ಕಿರಿಯರ ಸಹಕಾರವಿದೆ. ಕಾಂಗ್ರೇಸ್ ಪಕ್ಷದಲ್ಲಿ ಭೂತ್ ಮಟ್ಟದ ಕಾರ್ಯದರ್ಶಿಯಿಂದ ರಾಜ್ಯ ಮಟ್ಟದ ಪ್ರಧಾನಕಾರ್ಯದರ್ಶಿಯವರೆಗೆ ಬೆಳೆಸಿದವರು ನಮ್ಮೂರಿನ ಜನ. ಪಕ್ಷನಿಷ್ಠೆ, ಸಂಘಟನೆ ಮತ್ತು ಆಡಳಿತಾತ್ಮಕ ಅಭಿವೃದ್ಧಿಗಳು ನನಗೆ ಶ್ರೀರಕ್ಷೆಯಾಗಿದೆ. ಗ್ರಾಮ ಪಂಚಾಯತಿ ಸದಸ್ಯನಿಂದ ಹಂತಹAತವಾಗಿ ಜಿಲ್ಲಾ ಪಂಚಾಯತ್ ಅಧ್ಯಕ್ಷನ ಗಾದಿಯವರೆಗೆ ಸತತ 37 ವರ್ಷಗಳ ಕಾಲ ಒಂದೇ ಪಕ್ಷ ಮತ್ತು ಸಿದ್ಧಾಂತವನ್ನು ಒಪ್ಪಿಕೊಂಡು ಅಧಿಕಾರದ ಅನುಭವಿಸಿದ್ದೇನೆ. ನನ್ನ ಎಲ್ಲಾ ಯಶಸ್ಸಿಗೆ ಕಾರಣರಾದ ನನ್ನ ತವರೂರಿನ ಜನ ಸನ್ಮಾನಿಸುತ್ತಿರುವುದು ಜೀವನದಲ್ಲಿ ಮರೆಯಲಾರದ ಕ್ಷಣವೆಂದು ಧನ್ಯತೆಯನ್ನು ವ್ಯಕ್ತಪಡಿಸಿದರು.

ರಾಜಕೀಯ ವಿಕೇಂದ್ರೀಕರಣ ವ್ಯವಸ್ಥೆಯಲ್ಲಿ ಎಲ್ಲಾ ಜನಾಂಗದವರಿಗೂ ಪ್ರಾತಿನಿತ್ಯ ದೊರೆಯಲೆಂದೆ ಕಾಂಗ್ರೇಸ್ ಯೋಜನೆಯನ್ನು ರೂಪಿಸಿದೆ. ಆದರೆ ಕೆ.ಎಸ್. ಈಶ್ವರಪ್ಪನವರು ನಿಗದಿತ ಅವಧಿಗೆ ಜಿ.ಪಂ. ಮತ್ತು ತಾ.ಪಂ. ಚುನಾವಣೆಯನ್ನು ನಡೆಸುವಲ್ಲಿ ವಿಫಲರಾಗಿ ವಿಕೇಂದ್ರೀಕರಣವನ್ನು ಸಮಾಧಿ ಮಾಡಿದ್ದಾರೆ. ನಜೀರ್ ಸಾಬ್, ಎಂ.ಪಿ. ಪ್ರಕಾಶ್‌ರವರಂತಹ ಸಮಾಜ ಚಿಂತಕರು ಸಮರ್ಥವಾಗಿ ನಿಭಾಯಿಸಿ ಸಾಮಾಜಿಕ ನ್ಯಾಯ ಕಲ್ಪಿಸಿದಂತಹ ಗ್ರಾಮೀಣಾಭಿವೃದ್ಧಿ ಖಾತೆಯನ್ನು ಕೆ.ಎಸ್. ಈಶ್ವರಪ್ಪನವರು ಅತ್ಯಂತ ಕೆಟ್ಟ ರೀತಿಯಲ್ಲಿ ಹಾಳು ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಮುಂದಿನ ದಿನದಲ್ಲಿ ಪ್ರತಿಯೊಬ್ಬ ಕಾರ್ಯಕರ್ತರು ಬಿಜೆಪಿಯ ದುರಾಡಳಿತವನ್ನು ಪ್ರತಿ ಮತದಾರನಿಗೆ ತಲುಪಿಸಿ ಕಾಂಗ್ರೇಸ್ ಪಕ್ಷಕ್ಕೆ ಮತಪರಿವರ್ತನೆ ಮಾಡಬೇಕೆಂದರು.


ಮಾಜಿ ಸಚಿವ ಕಿಮ್ಮನೆ ರತ್ನಾಕರ ಮಾತನಾಡಿ ಪಕ್ಷದಲ್ಲಿ ಶ್ರಮವಹಿಸಿ ದುಡಿದವರಿಗೆ ಪ್ರಮುಖ ಜವಾಬ್ದಾರಿ ದೊರೆಯುತ್ತದೆ ಎಂಬುದಕ್ಕೆ ಕಲಗೋಡು ರತ್ನಾಕರರವರೇ ನಿದರ್ಶನವಾಗಿದ್ದಾರೆ. ಅವರ ಚಾಣಾಕ್ಷ ರಾಜಕಾರಣದಲ್ಲಿ ಕಾಂಗ್ರೇಸ್ ಪಕ್ಷ ಹೆಚ್ಚು ಸಂಘಟನೆಗೊಳ್ಳಬೇಕಿದೆ. ಬಿಜೆಪಿಯು ದೇಶದಲ್ಲೇ ಜಾತಿ, ಹಣ, ಧರ್ಮದ ಆಧಾರದಲ್ಲಿ ರಾಜಕೀಯ ಮಾಡುತ್ತಿದ್ದು, ಅಧಿಕಾರ ಹಿಡಿಯುವಲ್ಲಿಯೂ ಯಶಸ್ವಿಯಾಗಿದ್ದಾರೆ. ಸಮಾಜದಲ್ಲಿ ಮುಸ್ಲಿಂ, ಕ್ರೆöÊಸ್ತ ವಿರೋಧಿ ಧೋರಣೆಗಳನ್ನು ಬಿಂಬಿಸುತ್ತಿದ್ದರೂ ಪಕ್ಷದ ಹಿರಿಯ ನಾಯಕರು ಮೌನಕ್ಕೆ ಶರಣಾಗಿದ್ದಾರೆ. ಏಕೆಂದರೆ, ಬಿಜೆಪಿಯ ಮೂಲ ಸಿದ್ಧಾಂತವೇ ವಿಭಜನೆ ಎಂದು ಕಿಡಿಕಾರಿದರು.

70 ವರ್ಷದ ಕಾಂಗ್ರೇಸ್ ಪಕ್ಷದ ಆಸ್ತಿ 500 ಕೋಟಿ, 8 ವರ್ಷ ಬಿಜೆಪಿ ಆಸ್ತಿ 3800 ಕೋಟಿ ಇವರು ಹೇಗೆ ದುಡಿಯುತ್ತಿದ್ದಾರೆ ಎಂಬುದು ಜನತೆ ಅರ್ಥಮಾಡಿಕೊಳ್ಳಬೇಕಿದೆ. ಭ್ರಷ್ಠಾಚಾರದಲ್ಲಿ ಮುಳುಗಿರುವ ಬಿಜೆಪಿ ಪ್ರತಿನಿತ್ಯ ಮನುಷ್ಯತ್ವ ಸಮಾಜವನ್ನು ಮರೆತು ಮನು ಸಮಾಜ ನಿರ್ಮಾಣಕ್ಕಾಗಿ ಜನರ ಮಧ್ಯೆ ದ್ವೇಷ, ಅಸೂಯೆ, ಆಸ್ಪುಶ್ಯತೆಗಳನ್ನು ಮೂಡಿಸುತ್ತಿದೆ. ಕೇವಲ ಚುನಾವಣೆ ಗೆಲ್ಲಲು, ಇಂತಹ ನೀಚತನ ಬೇಕಾ? ಎಂದು ಬೇಸರ ವ್ಯಕ್ತಪಡಿಸಿದರು.


ಅಸಮರ್ಥ ಗೃಹ ಮಂತ್ರಿ:


 ಗೃಹ ಮಂತ್ರಿಯಾಗಿರುವ ಆರಗ ಜ್ಞಾನೇಂದ್ರರವರು ದಿನಕ್ಕೊಂದು ಪ್ರಚೋದನಾಕಾರಿ ಹೇಳಿಕೆಯನ್ನು ನೀಡುತ್ತ ಸಮಾಜದಲ್ಲಿ ಅಶಾಂತಿಯನ್ನು ಸೃಷ್ಟಿಸುತ್ತಿದ್ದಾರೆ. ಅವರದೇ ಇಲಾಖೆಯ ಪಿಎಸ್‌ಐ ನೇಮಕಾತಿಯಲ್ಲಿ ಭ್ರಷ್ಟಾಚಾರದ ಹಗರಣ ಬೆಳಕಿಗೆ ಬಂದಿದೆ. ತೀರ್ಥಹಳ್ಳಿ ಕ್ಷೇತ್ರದಲ್ಲಿ ಬಿಜೆಪಿಯೇತರ ಕಾರ್ಯಕರ್ತರಿಗೆ ಪ್ರತಿದಿನ ಕೇಸನ್ನು ಹಾಕಿಸುವ ಮೂಲಕ ಸಂಕುಚಿತ ವರ್ತನೆ ಮೆರೆಯುತ್ತಿದ್ದಾರೆ. ಭ್ರಷ್ಟಾಚಾರ ನಿಯಂತ್ರಿಸುವಲ್ಲಿ ಹಾಗೂ ಗೃಹ ಖಾತೆಯನ್ನು ಸಮರ್ಥವಾಗಿ  ನಿರ್ವಹಿಸುವಲ್ಲಿ ವಿಫಲರಾಗಿರುವ ಇವರು ನೈತಿಕ ಹೊಣೆಹೊತ್ತು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.

 ಕ್ಷಲ್ಲಕ ಕಾರಣಗಳಿಗೂ ಪೊಲೀಸ್ ಇಲಾಖೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವುದರಿಂದ ಗುಡ್ಡೆಕೊಪ್ಪ ಗ್ರಾಮ ಪಂಚಾಯತಿಗೆ ಸೀಮಿತಗೊಳಿಸಿ ಜ್ಞಾನೇಂದ್ರಗೆ ಗೃಹಮಂತ್ರಿಯನ್ನಾಗಿ ಮಾಡಿ, ರಾಜ್ಯಕ್ಕೆ ಬೇರೆಯವರನ್ನು ಗೃಹಮಂತ್ರಿ ಮಾಡಬೇಕು ಎಂದು ಬಿಜೆಪಿ ಮುಖಂಡರಲ್ಲಿ ಮನವಿ ಮಾಡುತ್ತೇನೆ ಎಂದು ವ್ಯಂಗವಾಡಿದರು.

ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷರಾದ ಬಿ.ಜಿ. ನಾಗರಾಜ, ಮುಡುಬಾ  ರಾಘವೇಂದ್ರ, ರಾಷ್ಟಿಯ ಶಿಕ್ಷಣ ಸಮಿತಿ ಅಧ್ಯಕ್ಷ ಜಿ.ಎಸ್. ನಾರಾಯಣರಾವ್, ಬಂಡಿ ರಾಮಚಂದ್ರ, ವಾಸುದೇವೆ, ವೀರಭದ್ರಪ್ಪ, ಯುವ ಕಾಂಗ್ರೆಸ್ ರಾಷ್ಟ್ರೀಯ  ವಕ್ತಾರರಾದ ಆದರ್ಶ ಹುಂಚದಕಟ್ಟೆ ಮತ್ತು ಸುಣಕಲ್ ಗುರುರಾಜ, ಜಯನಗರ ಗುರು, ಜಯಂತ್, ಪುಷ್ಪಾವತಿ, ಅಬ್ಬಿ ಈಶ್ವರಪ್ಪ ಇನ್ನಿತರರಿದ್ದರು.

Leave a Reply

Your email address will not be published. Required fields are marked *