Hosanagara | ಶಾಲೆಯ ಎಸ್ ಡಿಎಂಸಿ ಸಭೆಯಲ್ಲಿ ಅಧ್ಯಕ್ಷನಿಂದ ಸದಸ್ಯನಿಗೆ ಚಪ್ಪಲಿಯೇಟು ಆರೋಪ – ಬಿಜೆಪಿ ಹಾಗೂ SDMC ಸದಸ್ಯರಿಂದ ಭಾರಿ ಪ್ರತಿಭಟನೆ
ಹೊಸನಗರ(Hosanagara): ಪಟ್ಟಣದದ ಶಾಸಕರ ಮಾದರಿ ಶಾಲೆಯ ಆವರಣದಲ್ಲಿ ಶನಿವಾರ ಮಧ್ಯಾಹ್ನ 1 ಗಂಟೆ ಸುಮಾರಿಗೆ ಎಸ್ಡಿಎಂಸಿ ಅಧ್ಯಕ್ಷರು ಎಸ್ಡಿಎಂಸಿ ಸದಸ್ಯ ನೇರಲೆ ರಮೇಶ್ ಮೇಲೆ ಹಲ್ಲೆ ನಡೆಸಿದ್ದಾರೆಂದು ಖಂಡಿಸಿ ತಾಲ್ಲೂಕು ಬಿಜೆಪಿ ಮುಖಂಡರು, ಜೇಸಿಐ ಮತ್ತು ಶಾಲೆಯ ಎಸ್ಡಿಎಂಸಿ ಸದಸ್ಯರು ಹಾಗೂ ಮಕ್ಕಳ ಪೋಷಕ ವರ್ಗದವರು ಬಸ್ ನಿಲ್ದಾಣದ ಆವರಣದಿಂದ ಶಾಲೆಯ ಆವರಣದವರೆಗೆ ಪ್ರತಿಭಟನಾ ರ್ಯಾಲಿ ನಡೆಸಿ ಶಾಲೆಯ ಮುಂಭಾಗ ಧರಣಿ ನಡೆಸಿದರು.
ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಶಾಲೆಯ ಎಸ್ಡಿಎಂಸಿ ಸದಸ್ಯೆ ಜಯಲಕ್ಷ್ಮಿ ಶಾಲೆಯ ಆವರಣದಲ್ಲಿ ಎಲ್ಲಾ ಎಸ್ಡಿಎಂಸಿ ಸದಸ್ಯರ ಮುಂದೆ ನನಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದು ನನಗೆ ಹೊಡೆಯಲು ಬಂದಿರುವ ಬಗ್ಗೆ ಹೊಸನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದೇನೆ. ಆದರೆ, ರಾಜಕೀಯ ಪ್ರಭಾವದಿಂದ ನಾನು ನೀಡಿರುವ ದೂರು ಏನಾಗಿದೆ ಎಂದು ಗೊತ್ತಿಲ್ಲ ನನಗೆ ನ್ಯಾಯ ಕೊಡಿಸಿಕೊಡಬೇಕೆಂದು ಮನವಿ ಮಾಡಿ ದೂರು ನೀಡಿರುವ ದಾಖಲೆಯನ್ನು ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಸುರೇಶ್ ಸ್ವಾಮಿರಾವ್, ಅಶ್ವಿನಿ ಕುಮಾರ್ ಕೆ.ಕೆ ಎಂಬುವವರು ಕಾಂಗ್ರೆಸ್ ಪಕ್ಷದ ಮುಖಂಡರು ಹಾಗೂ ಪಟ್ಟಣ ಪಂಚಾಯತಿಯ ಹಾಲಿ ಸದಸ್ಯರಾಗಿ ಸೌಜನ್ಯದಿಂದ ಇರಬೇಕಾದವರು ಫೆ.3ರ ಶನಿವಾರ ಬೆಳಿಗ್ಗೆ ಶಾಲೆಯಲ್ಲಿ ಶತಮಾನೋತ್ಸವ ಕುರಿತು ಊರಿನ ಪ್ರಮುಖರ ಸಭೆ ಕರೆದಿದ್ದಾರೆ ಸಭೆಯಲ್ಲಿ ರಮೇಶರವರು ಶಾಲೆಗೆ 100 ವರ್ಷವಾಗಿರುವ ಬಗ್ಗೆ ಪ್ರಸ್ತಾಪಿಸಿದ್ದಾರೆ. ಮುಖ್ಯೋಪಾಧ್ಯಾಯರು ಶಾಲೆಯ ದಾಖಲೆ ಓದಿ ಹೇಳಿದ ಮೇಲೆ ಪ್ರಮುಖರ ಸಭೆ ಮುಕ್ತಾಯವಾಗಿದೆ. ನಂತರ ಎಸ್ಡಿಎಂಸಿ ಸಭೆ ನಡೆದಿದ್ದು ಈ ಸಭೆಯಲ್ಲಿ ಶಾಲೆಗೆ 100 ವರ್ಷದ ದಾಖಲೆ ಕೇಳಿರುವ ಬಗ್ಗೆ ಪ್ರಾಸ್ತಾಪಿಸಿದ್ದು ಸರಿಯಲ್ಲ ಅದನ್ನು ಕೇಳಲು ನೀನು ಯಾರು? ಎಂದು ರಮೇಶ್ ಮೇಲೆ ಅಲ್ಲಿಯೇ ಹಲ್ಲೆಗೆ ಯತ್ನಿಸಿದ್ದು ಸಣ್ಣಪುಟ್ಟ ಗಲಾಟೆ ನಡೆದಿದೆ.
ನಂತರ ಎಸ್ಡಿಎಂಸಿ ಸಭೆ ಮುಕ್ತಾಯವಾದ ಮೇಲೆ ಶಾಲೆಯ ಕಾರಿಡಾರ್ನಲ್ಲಿ ರಮೇಶ್ರವರ ಮೇಲೆ ಚಪ್ಪಲಿಯಲ್ಲಿ ಹಲ್ಲೆ ಮಾಡಿರುವುದು ಖಂಡನೀಯ. ಅದು ಅಲ್ಲದೇ ರಮೇಶ್ರವರು ಸಾರ್ವಜನಿಕ ಆಸ್ವತ್ರೆಗೆ ದಾಖಲಾಗಿ ಕೇಸು ದಾಖಲಿಸಿದರೂ ಇಲ್ಲಿವರೆಗೆ ಬಂಧಿಸಿಲ್ಲ ಅದು ಅಲ್ಲದೇ ಅಶ್ವಿನಿಕುಮಾರ್ ಮೇಲೆ ಗೂಂಡಾ ಕಾಯ್ದೆ ಜಾರಿಯಲ್ಲಿದೆ. ಇದರ ಜೊತೆಗೆ ಸುಮಾರು ವರ್ಷಗಳಿಂದ ಶಿಕ್ಷಕರು, ಪೋಷಕರೊಂದಿಗೆ ದೌರ್ಜನ್ಯವೆಸಗಿರುವ ಘಟನೆಗಳು ಸಾಕಷ್ಟಿದೆ. ಇತ್ತೀಚಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರ ಬಂದ ಮೇಲೆ ನನಗೆ ಶಾಸಕರ ಬೆಂಬಲವಿದೆ ಎಂದು ಶಾಲೆಯ ಪೋಷಕರು, ಶಿಕ್ಷಕರನ್ನು ಹೆದರಿಸುವ ಕೆಲಸ ನಡೆಯುತ್ತಿದೆ. ಅದು ಅಲ್ಲದೇ ಅನೇಕ ಕಾರ್ಯಕರ್ತರ ಹಾಗೂ ಮುಖಂಡರ ಮೇಲೆ ಹಲ್ಲೆ ನಡೆಸುತ್ತಿರುವ ಘಟನೆಗಳು ವರದಿಯಾಗುತ್ತಿದೆ. ಇವರನ್ನು ತಕ್ಷಣ ಬಂಧಿಸಬೇಕು ಅಲ್ಲದೇ ಎಸ್ಡಿಎಂಸಿ ಸಮಿತಿಯನ್ನು ತಕ್ಷಣ ಜಾರಿಗೆ ಬರುವಂತೆ ಅಮಾನತಿನಲ್ಲಿಡಬೇಕು ಎಂದು ಆಗ್ರಹಿಸಿದರು.
ಪ್ರತಿಭಟನಕಾರರ ಮನವಿ ಸ್ವೀಕರಿಸಿ ಮಾತನಾಡಿದ ತಹಶೀಲ್ದಾರ್ ರಶ್ಮಿ ನೀವು ಧರಣಿ ಪ್ರತಿಭಟನೆಯನ್ನು ಇಲ್ಲಿಗೆ ನಿಲ್ಲಿಸಿ ನನಗೆ ಮೂರು ದಿನಗಳ ಕಾಲಾವಕಾಶ ಕೊಡಿ. ನೀವು ನೀಡಿರುವ ದೂರಿನ ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೆ ತಂದು ಕ್ರಮ ಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿದ ಹಿನ್ನೆಲೆಯಲ್ಲಿ ಧರಣಿ ಕೈ ಬಿಡಲಾಯಿತು.
ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣಮೂರ್ತಿ, ಪಿಎಸ್ಐ ಶಿವಾನಂದ್ ಕೆ ಪ್ರತಿಭಟನಕಾರರ ಮನವೊಲಿಸುವಲ್ಲಿ ಯಶಸ್ವಿಯಾದರು.
ತಾಲ್ಲೂಕು ಬಿಜೆಪಿ ಅಧ್ಯಕ್ಷ ಮತ್ತಿಮನೆ ಸುಬ್ರಹ್ಮಣ್ಯ, ತಾಪಂ ಮಾಜಿ ಅಧ್ಯಕ್ಷ ವೀರೇಶ್ ಆಲುವಳ್ಳಿ ,ಬಿಜೆಪಿ ಮುಖಂಡರಾದ ಕೆ.ವಿ.ಕೃಷ್ಣಮೂರ್ತಿ, ಉಮೇಶ್ ಕಂಚುಗಾರ್, ಎನ್.ಆರ್. ದೇವಾನಂದ್, ಎಂ.ಎನ್ ಸುಧಾಕರ್, ನೇರಲೆ ರಮೇಶ್, ಕಾಲಸಸಿ ಸತೀಶ, ಕೋಣೆಮನೆ ಶಿವಕುಮಾರ್, ಹೆಚ್.ಎಸ್. ಮಂಜುನಾಥ್, ಶ್ರಿಧರ ಚಿಕ್ಕನಕೊಪ್ಪ, ಮಾವಿನಕೊಪ್ಪ ತಿಮ್ಮಪ್ಪ, ಮಂಡಾನಿ ಮೋಹನ್, ಮಾವಿನಕೊಪ್ಪ ಗೌತಮ್, ಜಯನಗರ ಪ್ರಹ್ಲಾದ್, ಪಟ್ಟಣ ಪಂಚಾಯತಿ ಸದಸ್ಯ ಗುರುರಾಜ್ ಆರ್, ಸುರೇಂದ್ರ, ನಾಗರಾಜ್ ಇನ್ನೂ ಮುಂತಾದವರು ಇದ್ದರು.