ಹುಲಿಕಲ್ ಘಾಟಿಯಲ್ಲಿ ಧರೆ ಕುಸಿದು ಸಂಚಾರ ಬಂದ್
ಶಿವಮೊಗ್ಗ: ಮಲೆನಾಡಿನಲ್ಲಿ ಪುಷ್ಯಮಳೆ ಅಬ್ಬರ ಜೋರಾದ ಪರಿಣಾಮ ಹುಲಿಕಲ್ ಘಾಟಿಯಲ್ಲಿ ಭೂಕುಸಿತವಾಗಿದೆ.
ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನಲ್ಲಿ ಇರುವ ಹುಲಿಕಲ್ ಘಾಟಿಯಲ್ಲಿ ಧರೆ ಕುಸಿದಿದೆ.
ತೀರ್ಥಹಳ್ಳಿಯಿಂದ ಕುಂದಾಪುರಕ್ಕೆ ಸಂಪರ್ಕ ಕಲ್ಪಿಸುವ ಘಾಟಿಯಾದ ಹುಲಿಕಲ್ ಘಾಟಿಯಲ್ಲಿ ರಾಜ್ಯ ಹೆದ್ದಾರಿ 52 ಹಾದು ಹೋಗಲಿದೆ. ಬಾಳೆಬರೆ ಫಾಲ್ಸ್ ಪಕ್ಕದಲ್ಲೇ ಧರೆ ಕುಸಿದಿದೆ. ರಸ್ತೆಯ ಮೇಲೆ ಕುಸಿದ ಮಣ್ಣು ಬಿದ್ದಿದೆ.
ಮಣ್ಣಿನ ಜೊತೆ ಕುಸಿದ ಘಾಟಿಯಲ್ಲಿ ಇದ್ದ ಮರಗಳು ರಸ್ತೆಗೆ ಅಡ್ಡಲಾಗಿ ಬಿದ್ದ ಕಾರಣ ರಸ್ತೆ ಸಂಪರ್ಕ ಕಡಿತಗೊಂಡಂತಾಗಿದೆ.
ಈ ಹಿಂದೆ ಹೇರ್ ಪಿನ್ ತಿರುವಿನಲ್ಲಿ ಘಾಟಿ ಕುಸಿದಿತ್ತು. ಘಾಟಿ ಕುಸಿತದಿಂದ ವಾಹನ ಸವಾರರು ಪರದಾಡುವಂತಾಗಿದೆ.
ಸ್ಥಳಕ್ಕೆ ನಗರ ಪೊಲೀಸ್ ಠಾಣೆ ಪೊಲೀಸರು ಭೇಟಿ ನೀಡಿದ್ದಾರೆ. ಘಾಟಿ ಕುಸಿತದ ಪರಿಣಾಮ ಸಂಚಾರ ಬಂದ್ ಆಗಿ ಟ್ರಾಫಿಕ್ ಜಾಮ್ ಆಗಿದೆ. ತುರ್ತು ತೆರವಿಗೆ ಮುಂದಾಗಿರುವ ಅರಣ್ಯ ಇಲಾಖೆ ವಾಹನ ಜೆಸಿಬಿ ಬಳಸಿ ಸಂಗ್ರಹದ ಮಣ್ಣು ತೆರವುಗೊಳಿಸುವ ಪ್ರಯತ್ನದಲ್ಲಿದ್ದಾರೆ.