ಆಗುಂಬೆಯಿಂದ ರಿಪ್ಪನ್ಪೇಟೆವರೆಗೆ ಪೊಲೀಸರ ಚೇಸಿಂಗ್ ಪ್ರಕರಣ : ಕಾರು ಬಿಟ್ಟು ಕಾಡಿಗೆ ಪರಾರಿಯಾಗಿದ್ದ ಆರೋಪಿಯ ಬಂಧನ
Agumbe Police arrested Abdul Majeed, an accused in a series of cattle theft cases, after a dramatic chase from Hebri to Ripponpet. The suspect had abandoned his car and escaped into the forest before being traced and arrested.
ತೀರ್ಥಹಳ್ಳಿ, ಆ.6: ಆಗುಂಬೆಯಿಂದ ರಿಪ್ಪನ್ಪೇಟೆವರೆಗೆ ಪೊಲೀಸರ ಸಿನಿಮೀಯ ಶೈಲಿಯ ಚೇಸಿಂಗ್ ವೇಳೆ ಕಾರು ಬಿಟ್ಟು ದಟ್ಟ ಅರಣ್ಯಕ್ಕೆ ಪರಾರಿಯಾಗಿದ್ದ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಆಗುಂಬೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಸರಣಿ ದನ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಅಬ್ದುಲ್ ಮಜೀದ್ (35) ಎಂಬ ಆರೋಪಿಯನ್ನು ಬಂಧಿಸಲಾಗಿದೆ.
ಇದನ್ನೂ ಓದಿ : https://postmannewskannada.com/2026/07/agumbe-benavalli-police-chase-cattle-thieves-forest-escape.html
ಬಂಧಿತ ಆರೋಪಿ ಉಡುಪಿ ಮೂಲದವನಾಗಿದ್ದು, ಟೈಗರ್ ಗ್ಯಾಂಗ್ನ ಸಕ್ರಿಯ ಸದಸ್ಯನಾಗಿದ್ದಾನೆ ಎನ್ನಲಾಗಿದೆ. ಈತ ಆಗುಂಬೆ ಭಾಗದಲ್ಲಿ ಕಾರಿನ ಮೂಲಕ ದನಗಳನ್ನು ಕಳ್ಳಸಾಗಣೆ ಮಾಡುತ್ತಿದ್ದ ಎನ್ನುವ ಆರೋಪ ಕೇಳಿಬಂದಿದೆ.
ಜುಲೈ 30ರಂದು ಆರೋಪಿಯ ಚಲನವಲನದ ಬಗ್ಗೆ ಮಾಹಿತಿ ಪಡೆದ ಆಗುಂಬೆ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಶಿವನಗೌಡ ಹಾಗೂ ಅವರ ತಂಡ ಹೆಬ್ರಿಯಿಂದಲೇ ಆರೋಪಿಯನ್ನು ಬೆನ್ನಟ್ಟಿತ್ತು. ಚೇಸಿಂಗ್ ವೇಳೆ ಆರೋಪಿ ಆಗುಂಬೆ, ಕಲ್ಮನೆ, ಕನ್ನಂಗಿ, ಹಣಗೆರೆಕಟ್ಟೆ ಹಾಗೂ ಆಯನೂರು ಮಾರ್ಗವಾಗಿ ರಿಪ್ಪನ್ಪೇಟೆಯವರೆಗೆ ಬಂದಿದ್ದನು.
ರಿಪ್ಪನ್ಪೇಟೆಯಲ್ಲಿ ಪೊಲೀಸ್ ಬ್ಯಾರಿಕೇಡ್ ಕಂಡ ಬಳಿಕ ಕಾರನ್ನು ವಾಪಸ್ ತಿರುಗಿಸಿಕೊಂಡು ಬೆನವಳ್ಳಿ ಸಮೀಪಕ್ಕೆ ತೆರಳಿದ ಆರೋಪಿ, ಕಾರನ್ನು ಅಲ್ಲೇ ಬಿಟ್ಟು ದಟ್ಟ ಅರಣ್ಯದೊಳಗೆ ನುಗ್ಗಿ ಪರಾರಿಯಾಗಿದ್ದ.
ಘಟನಾ ಸ್ಥಳದಲ್ಲಿ ಬಿಟ್ಟುಹೋಗಿದ್ದ ಕಾರಿನಲ್ಲಿದ್ದ ದಾಖಲೆಗಳು ಹಾಗೂ ಇತರೆ ತಾಂತ್ರಿಕ ಸುಳಿವುಗಳ ಆಧಾರದ ಮೇಲೆ ತನಿಖೆ ಮುಂದುವರಿಸಿದ ಆಗುಂಬೆ ಪೊಲೀಸರು, ಅಂತಿಮವಾಗಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಪ್ರಕರಣದ ಕುರಿತು ಆಗುಂಬೆ ಪೊಲೀಸ್ ಠಾಣೆಯಲ್ಲಿ ಹೆಚ್ಚಿನ ತನಿಖೆ ಮುಂದುವರಿದಿದೆ.