ಇಂದು ಕಲಬುರಗಿಗೆ ತೆರಳಿದ್ದ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರ ಹೆಲಿಕಾಪ್ಟರ್ ಲ್ಯಾಂಡಿಂಗ್ ವೇಳೆ ಪೈಲೆಟ್ ಇದ್ದಕ್ಕಿದ್ದಂತೆ ಹೆಲಿಕಾಪ್ಟರ್ನ್ನ ಪುನಃ ಆಗಸದೆತ್ತರಕ್ಕೆ ಹಾರಿಸಿದರು.ಇದು ಕೆಲಕಾಲ ಆತಂಕ ಮೂಡಿಸಿತ್ತು.
ನಡೆದಿದ್ದೇನು??? :
ಅಲ್ಲಿದ್ದ ಪ್ಲಾಸ್ಟಿಕ್ಗಳು, ಇವತ್ತು ಹೆಲಿಕಾಪ್ಟರ್ ಕ್ರಾಶ್ಗೂ ಕಾರಣವಾಗುವ ಆತಂಕವಿತ್ತು. ಆದರೆ ಅಷ್ಟರಲ್ಲಿ ಎಚ್ಚೆತ್ತುಕೊಂಡ ಪೈಲೆಟ್ , ಹೆಲಿಕಾಪ್ಟರ್ ಲ್ಯಾಂಡಿಂಗ್ ಮಾಡುವ ಬದಲು, ಪುನಃ ಆಗಸದೆತ್ತರಕ್ಕೆ ಹಾರಿದರು. ಬಳಿಕ ಕೆಲಕ್ಷಣಗಳ ನಂತರ ಪುನಃ ಬಂದು ಲ್ಯಾಂಡ್ ಮಾಡಿದರು.
ಘಟನೆಯ ಬಗ್ಗೆ ವಿವರಣೆ ನೀಡಿದ ಪೈಲೆಟ್ ಜೋಸೆಪ್, ಕ್ಯಾಮರಾದಲ್ಲಿ ರೆಕಾರ್ಡ್ ಆಗಿರುವ ಹಾಗೆ, ಹೆಲಿಕಾಪ್ಟರ್ ಲ್ಯಾಂಡ್ ಮಾಡುವ ಸಂದರ್ಭದಲ್ಲಿ ಪೇಪರ್, ಪ್ಲಾಸ್ಟಿಕ್ಗಳೆಲ್ಲಾ ಹಾರಿ ಬಂದವು. ಅದರಿಂದ ಅಪಾಯವಾಗುವ ಸಾಧ್ಯತೆ ಇತ್ತು. ಹೀಗಾಗಿ ಆ ಕ್ಷಣದಲ್ಲಿ ನಾನು ಸೂಕ್ತ ನಿರ್ಧಾರವನ್ನು ಕೈಗೊಂಡು ಹೆಲಿಕಾಪ್ಟರ್ನ್ನ ಮತ್ತೆ ಆಗಸದೆತ್ತರಕ್ಕೆ ಹಾರಿಸಿ, ಮತ್ತೊಮ್ಮೆ ಸುತ್ತಿಕೊಂಡು ಬಂದು ಲ್ಯಾಂಡ್ ಮಾಡಬೇಕಾಯ್ತು ಎಂದಿದ್ದಾರೆ.
ಹೆಲಿಕಾಪ್ಟರ್ಗಳನ್ನು ಲ್ಯಾಂಡ್ ಮಾಡುವ ಸಲುವಾಗಿ ಪೊಲೀಸ್ ಇಲಾಖೆ ಹಾಗೂ ಜಿಲ್ಲಾಡಳಿತ ಮೊದಲೇ ಸೂಕ್ತ ವ್ಯವಸ್ಥೆ ಮಾಡಿರುತ್ತದೆ. ಆದರೆ ಕಲಬುರಗಿಯಲ್ಲಿ ತಾತ್ಕಾಲಿಕವಾಗಿ ನಿರ್ಮಿಸಿದ್ದ ಹೆಲಿಪ್ಯಾಡ್ ನಲ್ಲಿ ಕಂಡಲೆಲ್ಲಾ ಟಾರ್ಪಲ್ಗಳಿದ್ದವು. ಅದಕ್ಕಿಂತ ಹೆಚ್ಚಾಗಿ ರಾಶಿ ರಾಶಿ ಪೇಪರ್ ಹಾಗೂ ಪ್ಲಾಸ್ಟಿಕ್ ಕಸಗಳು ತುಂಬಿದ್ದವು. ಇಷ್ಟೊಂದು ಅವ್ಯವಸ್ಥೆಯಾಗಿದ್ದ ಪ್ಲೇಸ್ನಲ್ಲಿ ಹೆಲಿಕಾಪ್ಟರ್ ಲ್ಯಾಂಡ್ ಮಾಡಲು ಸಾಧ್ಯವಾಗಲಿಲ್ಲ. ಬಳಿಕ ಪೊಲೀಸರೇ ಸಿಕ್ಕಸಿಕ್ಕ ಕಸ ಆರಿಸಿ, ಹೆಲಿಕಾಪ್ಟರ್ ಲ್ಯಾಂಡಿಂಗ್ಗೆ ಅನುಕೂಲ ಮಾಡಿಕೊಟ್ಟರು.
ಇಂತಹ ಅವ್ಯವಸ್ಥೆಯನ್ನು ಹಾಗೆ ಇಟ್ಟು ನಿರ್ಲಕ್ಷ್ಯವಹಿಸಿದವರು ಯಾರು ಎಂಬುದು ತನಿಖೆಯಿಂದ ಗೊತ್ತಾಗಬೇಕಿದೆ.