ತೀರ್ಥಹಳ್ಳಿ : ಕರ್ನಾಟಕ ವಿಧಾನಸಭಾ ಚುನಾವಣೆಗೆ ದಿನಗಣನೆ ಶುರುವಾಗಿದೆ. ಕಾಂಗ್ರೆಸ್ ಈಗಾಗಲೇ ತನ್ನ ಮೊದಲ ಪಟ್ಟಿಯನ್ನು ರಿಲೀಸ್ ಮಾಡಿದ್ದು ಎರಡನೇ ಪಟ್ಟಿಯನ್ನು ಇಂದು ಸಂಜೆ ಅಥವಾ ನಾಳೆ ರಿಲೀಸ್ ಮಾಡಲಿದ್ದು ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಕಿಮ್ಮನೆ ರತ್ನಾಕರ್ ಗೆ ಬಹುತೇಕ ಖಚಿತವಾಗಿದೆ ಎಂದು ಉನ್ನತ ಮೂಲಗಳ ಮಾಹಿತಿಯಿಂದ ತಿಳಿದುಬಂದಿದೆ.
ಎರಡನೆ ಪಟ್ಟಿಯಲ್ಲಿ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಕ್ಷೇತ್ರದ ಅಭ್ಯರ್ಥಿಯನ್ನು ಮಾತ್ರ ಘೋಷಿಸುತಿದ್ದು ಇನ್ನುಳಿದಂತಹ ಶಿವಮೊಗ್ಗ ನಗರ,ಶಿವಮೊಗ್ಗ ಗ್ರಾಮಾಂತರ ಮತ್ತು ಶಿಕಾರಿಪುರ ಕ್ಷೇತ್ರ ಅಭ್ಯರ್ಥಿಗಳನ್ನು ಇನೂ ಅಂತಿಮಗೊಳಿಸಿಲ್ಲ.
ಇತ್ತೀಚೆಗೆ ರಿಲೀಸ್ ಆದ ಮೊದಲ ಪಟ್ಟಿಯಲ್ಲಿ ತೀರ್ಥಹಳ್ಳಿ ಟಿಕೆಟ್ ಮಾಜಿ ಶಾಸಕ ಕಿಮ್ಮನೆ ರತ್ನಾಕರ್ ಅವರಿಗೆ ನೀಡದೆ ಕಾಂಗ್ರೆಸ್ ಶಾಕ್ ಕೊಟ್ಟಿತ್ತು. ಕ್ಷೇತ್ರದಲ್ಲಿ ಭಾರೀ ಪೈಪೋಟಿಯಿದ್ದ ಕಾರಣ ರತ್ನಾಕರ್ಗೆ ಟಿಕೆಟ್ ಕೊಡದೆ ಕಾಂಗ್ರೆಸ್ ತಡೆದಿತ್ತು.
ಕಳೆದ ವಾರ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ನೇತೃತ್ವದಲ್ಲಿ ರೆಬೆಲ್ ಕಾಂಗ್ರೆಸ್ಸಿಗರ ಬಂಡಾಯ ಶಮನ ಮಾಡಲಾಗಿತ್ತು ಹೀಗಾಗಿ ಈ ಬಾರಿ ಕಾಂಗ್ರೆಸ್ ಟಿಕೆಟ್ ಕಿಮ್ಮನೆ ರತ್ನಾಕರ್ಗೆ ನೀಡಲಾಗುತ್ತಿದೆ ಎಂದು ತಿಳಿದು ಬಂದಿದೆ.
ಇನ್ನು, ಸಂಧಾನದ ಸಮಯದಲ್ಲಿ ಮಾತನಾಡಿದ್ದ ಕಿಮ್ಮನೆ ರತ್ನಾಕರ್, ನಾನು ಮಂಜುನಾಥ್ ಗೌಡ ಒಟ್ಟಿಗೆ ಕೆಲಸ ಮಾಡಲಿದ್ದೇವೆ. ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಯಾರ ವಕ್ರ ದೃಷ್ಟಿಯೂ ಬೀಳದಿರಲಿ, ಇಬ್ಬರು ಒಗ್ಗಟ್ಟಿನಿಂದ ಕೆಲಸ ಮಾಡುತ್ತೇವೆ ಎಂದಿದ್ದರು.
ನನ್ನದೇನು ಡಿಮ್ಯಾಂಡ್ ಇಲ್ಲ. ಟಿಕೆಟ್ ವಿಚಾರ ಅಧ್ಯಕ್ಷರಿಗೆ ಬಿಟ್ಟಿದ್ದು. ಬಿಜೆಪಿ ಸೋಲಿಸೋದು ನಮ್ಮ ಗುರಿ. ನಮ್ಮ ಕ್ಷೇತ್ರದಲ್ಲಿ ಒಕ್ಕಲಿಗರ ವೋಟು ಜಾಸ್ತಿ, ಹೀಗಾಗಿ ಟಿಕೆಟ್ ಡಿ.ಕೆ ಶಿವಕುಮಾರ್ ತೀರ್ಮಾನಕ್ಕೆ ಬಿಟ್ಟಿದ್ದೇವೆ ಎಂದು ಮಂಜುನಾಥ್ ಗೌಡ ಹೇಳಿದ್ದರು.
ಒಟ್ಟಾರೆಯಾಗಿ ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದ ಕೈ ಅಭ್ಯರ್ಥಿಯ ಆಯ್ಕೆ ಗೊಂದಲ ಮುಕ್ತಾಯಗೊಂಡಿದ್ದು ಚುನಾವಣೆಯನ್ನು ಜೋಡೆತ್ತುಗಳು ಹೇಗೆ ಎದುರಿಸತ್ತವೆಯೋ ಕಾದು ನೋಡಬೇಕಾಗಿದೆ.