ಹೊಸನಗರ ತಾಲೂಕಿನ ಬಾಳೂರು ಗ್ರಾಪಂ ವ್ಯಾಪ್ತಿಯ ಮಾದಾರದಿಂಬದಲ್ಲಿ ಗುರುವಾರ ಮಧ್ಯರಾತ್ರಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಅವಘಡ ಸಂಭವಿಸಿ ಕೊಟ್ಟಿಗೆ ಮನೆಯೊಂದು ಸಂಪೂರ್ಣ ಭಸ್ಮಗೊಂಡು ಅದರಲ್ಲಿದ್ದ ಮರ-ಮುಟ್ಟು ಕೃಷಿ ಉಪಕರಣ ಸೇರಿದಂತೆ ಸಾವಿರಾರು ರೂ ನಷ್ಟ ಉಂಟಾಗಿದೆ.
ಮಾದಾರದಿಂಬ ಗ್ರಾಮದ ಕೃಷಿಕ ಷಣ್ಮುಖಪ್ಪ ಗೌಡರ ಕೊಟ್ಟಿಗೆ ಮನೆಯಲ್ಲಿ ಮದ್ಯರಾತ್ರಿ ಬೆಂಕಿ ಕಾಣಿಸಿ ಕೊಂಡಿದೆ. ಬಳಿಕ ಕೆಲವೇ ಕ್ಷಣಗಳಲ್ಲಿ ಬೆಂಕಿ ಕೆನ್ನಾಲಿಗೆ ಕೊಟ್ಟಿಗೆ ತುಂಬಾ ಆವರಿಸಿದೆ.ತಕ್ಷಣ ಕೊಟ್ಟಿಗೆಯಲ್ಲಿದ್ದ ದನಗಳನ್ನು ಹೊರತರಲಾಯಿತು ಆದರೂ ಕೆಲವು ದನಗಳಿಗೆ ಸುಟ್ಟ ಗಾಯಗಳಾಗಿವೆ.
ಅಗ್ನಿಶಾಮಕ ದಳದ ಸಿಬ್ಬಂದಿಗಳು ಹಾಗೂ ಸ್ಥಳೀಯರ ಪ್ರಯತ್ನದಿಂದ ಬೆಂಕಿ ನಂದಿಸಲಾಯಿತಾದರೂ ಕೊಟ್ಟಿಗೆಯಲ್ಲಿದ್ದ ಮರಮುಟ್ಟುಗಳು ,ಕೃಷಿ ಉಪಕರಣಗಳು,ಗೊಬ್ಬರಗಳೆಲ್ಲಾ ಬೆಂಕಿಗೆ ಅಹುತಿಯಾಗಿ ಸಾವಿರಾರು ರೂ ನಷ್ಟವಾಗಿದೆ.
ಸ್ಥಳಕ್ಕೆ ಕಂದಾಯ ಅಧಿಕಾರಿಗಳು ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದಾರೆ.