‘ಎಲ್ಲದಕ್ಕೂ ಒಂದು ಲೆಕ್ಕ ಇರಲಿ’ — ಸಾರ್ವಜನಿಕ ಕಾರ್ಯಕ್ರಮಗಳ ಮೇಲೆ ಸರ್ಕಾರದ ಹೊಸ ನಿಯಮ! ಏನಿದು ಹೊಸ ಬಿಲ್? ಇಲ್ಲಿದೆ ಡಿಟೇಲ್ಸ್

‘ಎಲ್ಲದಕ್ಕೂ ಒಂದು ಲೆಕ್ಕ ಇರಲಿ’ — ಸಾರ್ವಜನಿಕ ಕಾರ್ಯಕ್ರಮಗಳ ಮೇಲೆ ಸರ್ಕಾರದ ಹೊಸ ನಿಯಮ! ಏನಿದು ಹೊಸ ಬಿಲ್? ಇಲ್ಲಿದೆ ಡಿಟೇಲ್ಸ್

Karnataka Public Places Access Control Bill 2026: ಸಾರ್ವಜನಿಕ ಸ್ಥಳಗಳಲ್ಲಿ ಸಭೆ, ಸಮಾರಂಭ, ಪಥಸಂಚಲನಕ್ಕೆ ಅನುಮತಿ ಕಡ್ಡಾಯಗೊಳಿಸುವ ಸರ್ಕಾರದ ಹೊಸ ವಿಧೇಯಕದ ವಿವರ.

ಬೆಂಗಳೂರು: ಕರ್ನಾಟಕ ಸರ್ಕಾರವು ಸಾರ್ವಜನಿಕ ಪ್ರದೇಶಗಳಲ್ಲಿ ಸಭೆ, ಸಮಾರಂಭ ಹಾಗೂ ಮೆರವಣಿಗೆಗಳನ್ನು ಆಯೋಜಿಸುವುದಕ್ಕೆ ನಿಯಂತ್ರಣ ಹೇರಲು ಮುಂದಾಗಿದೆ. ಈ ಸಂಬಂಧ ‘ಕರ್ನಾಟಕ ರಾಜ್ಯ ಸಾರ್ವಜನಿಕ ಪ್ರದೇಶ ಪ್ರವೇಶ ನಿಯಂತ್ರಣ ವಿಧೇಯಕ–2026’ ಅನ್ನು ಇದೇ ವಿಧಾನಸಭಾ ಅಧಿವೇಶನದಲ್ಲಿ ಮಂಡಿಸಲು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ.

ಹೊಸ ವಿಧೇಯಕದ ಅನ್ವಯ ಸರ್ಕಾರಿ ಕಚೇರಿಗಳು, ಶಾಲಾ-ಕಾಲೇಜುಗಳು, ಆಟದ ಮೈದಾನಗಳು, ಪಾರ್ಕ್‌ಗಳು, ರಸ್ತೆಗಳು ಹಾಗೂ ನದಿ-ಕೆರೆಗಳ ಸುತ್ತಮುತ್ತ ಸಾರ್ವಜನಿಕ ಕಾರ್ಯಕ್ರಮಗಳನ್ನು ಆಯೋಜಿಸುವ ಮೊದಲು ಸಂಬಂಧಪಟ್ಟ ಇಲಾಖೆಯಿಂದ ಅನುಮತಿ ಪಡೆಯುವುದು ಕಡ್ಡಾಯವಾಗುವ ಸಾಧ್ಯತೆಯಿದೆ.

ಸಭೆ, ಸಮಾರಂಭ, ಪಥಸಂಚಲನ ಸೇರಿದಂತೆ ವಿವಿಧ ಕಾರ್ಯಕ್ರಮಗಳಿಗೆ ಸರ್ಕಾರ ನಿಗದಿಪಡಿಸುವ ನಿಯಮಗಳು ಮತ್ತು ಷರತ್ತುಗಳು ಅನ್ವಯವಾಗಲಿವೆ. ವಿಶೇಷವಾಗಿ ಧರ್ಮಾಧಾರಿತ ಸಂಘಟನೆಗಳು ಹಾಗೂ ನೋಂದಣಿ ಇಲ್ಲದ ಸಂಘಟನೆಗಳ ಸಾರ್ವಜನಿಕ ಚಟುವಟಿಕೆಗಳಿಗೂ ಈ ಕಾನೂನು ಪರಿಣಾಮ ಬೀರಬಹುದು ಎಂಬ ಚರ್ಚೆ ರಾಜಕೀಯ ವಲಯದಲ್ಲಿ ಆರಂಭವಾಗಿದೆ.

ಆರ್‌ಎಸ್‌ಎಸ್‌ ಕಾರ್ಯಕ್ರಮಗಳಿಗೂ ಪರಿಣಾಮ?

ಇತ್ತೀಚೆಗೆ ಚಿತ್ತಾಪುರದಲ್ಲಿ ಆರ್‌ಎಸ್‌ಎಸ್ ಪಥಸಂಚಲನಕ್ಕೆ ಅನುಮತಿ ವಿಚಾರವಾಗಿ ಕಾನೂನು ಹೋರಾಟ ನಡೆದಿದ್ದ ಹಿನ್ನೆಲೆಯಲ್ಲಿ, ಈ ಹೊಸ ವಿಧೇಯಕದ ಬಗ್ಗೆ ರಾಜಕೀಯ ಚರ್ಚೆ ಮತ್ತಷ್ಟು ತೀವ್ರವಾಗಿದೆ. ಸರ್ಕಾರವು ಆರ್‌ಎಸ್‌ಎಸ್ ಸೇರಿದಂತೆ ಕೆಲವು ಸಂಘಟನೆಗಳ ಸಾರ್ವಜನಿಕ ಕಾರ್ಯಕ್ರಮಗಳನ್ನು ನಿಯಂತ್ರಿಸುವ ಉದ್ದೇಶದಿಂದ ಈ ಕಾನೂನು ತರುತ್ತಿದೆ ಎಂದು ವಿಪಕ್ಷಗಳು ಆರೋಪಿಸಿವೆ.

ಆದರೆ ಸರ್ಕಾರದ ವಾದವೇನೆಂದರೆ, ಯಾವುದೇ ಸಂಘಟನೆ ಅಥವಾ ವ್ಯಕ್ತಿ ಸಾರ್ವಜನಿಕ ಸ್ಥಳದಲ್ಲಿ ಕಾರ್ಯಕ್ರಮ ಆಯೋಜಿಸುವಾಗ ಅನುಮತಿ ಹಾಗೂ ನಿಯಮಗಳನ್ನು ಪಾಲಿಸಬೇಕು ಎಂಬುದು.

‘ಎಲ್ಲದಕ್ಕೂ ಒಂದು ಲೆಕ್ಕ ಇರಲಿ’ ಎಂದ ಸಿಎಂ

ಸಚಿವ ಸಂಪುಟ ಸಭೆಯ ಬಳಿಕ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಾರ್ವಜನಿಕ ಸ್ಥಳಗಳಲ್ಲಿ ಕಾರ್ಯಕ್ರಮ ನಡೆಸುವವರು ಅನುಮತಿ ಪಡೆಯಬೇಕು ಎಂಬ ನಿಲುವು ವ್ಯಕ್ತಪಡಿಸಿದ್ದಾರೆ.

“ನೀವೇ ಆಗಲಿ, ನಾವೇ ಆಗಲಿ ರಸ್ತೆಯಲ್ಲಿ ಪರ್ಮಿಷನ್ ತೆಗೆದುಕೊಂಡು ಕಾರ್ಯಕ್ರಮ ಮಾಡಬೇಕು. ಎಲ್ಲದಕ್ಕೂ ಒಂದು ಲೆಕ್ಕಾಚಾರ ಇರಬೇಕು. ಎಲ್ಲದಕ್ಕೂ ಒಂದು ಲೆಕ್ಕ ಇರಲಿ ಅಂತ ಹೇಳುತ್ತಿದ್ದೇವೆ” ಎಂದು ಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.

ಸರ್ಕಾರದ ವಿರುದ್ಧ ಆರ್. ಅಶೋಕ್ ವಾಗ್ದಾಳಿ

ಇತ್ತ, ವಿಧೇಯಕದ ವಿಚಾರವಾಗಿ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕಾಯ್ದೆ ಆರ್‌ಎಸ್‌ಎಸ್ ಅನ್ನು ಗಮನದಲ್ಲಿಟ್ಟುಕೊಂಡು ರೂಪಿಸಲಾಗಿದೆ ಎಂದು ಆರೋಪಿಸಿದ ಅವರು, ಇಂತಹ ಕ್ರಮಗಳನ್ನು ಎದುರಿಸುವುದು ಸಂಘಟನೆಗೆ ಗೊತ್ತಿದೆ ಎಂದು ಹೇಳಿದ್ದಾರೆ.

“ಇಂದಿರಾಗಾಂಧಿ, ನೆಹರೂ ಅವರಿಂದಲೂ ಏನೂ ಮಾಡಲು ಆಗಿಲ್ಲ. ಇಂತಹ ರಾಜಕಾರಣ ಮಾಡಿದರೆ ಮುಂದೆ ನೀವು ಮನೆಯಿಂದ ಹೊರಗಡೆ ಬರಲ್ಲ” ಎಂದು ಆರ್. ಅಶೋಕ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ವಿಧೇಯಕ ವಿಧಾನಸಭೆಯಲ್ಲಿ ಮಂಡನೆಯಾದ ಬಳಿಕ ಅದರ ನಿಖರ ನಿಯಮಗಳು, ಅನುಮತಿ ಪ್ರಕ್ರಿಯೆ ಹಾಗೂ ಯಾವೆಲ್ಲಾ ಸಾರ್ವಜನಿಕ ಸ್ಥಳಗಳಿಗೆ ಅನ್ವಯವಾಗಲಿದೆ ಎಂಬುದು ಸ್ಪಷ್ಟವಾಗಲಿದೆ.

About The Author