RIPPONPETE | ಶಿಕ್ಷಣ ಕ್ಷೇತ್ರಕ್ಕೆ ಹೊಸ ಕೊಡುಗೆ – ಕಣಬಂದೂರಿನಲ್ಲಿ ಶ್ರೀ ಶಿವ ರಾಮಕೃಷ್ಣ ಸ್ಕೂಲ್ ನೂತನ ಕಟ್ಟಡಕ್ಕೆ ಅಡಿಗಲ್ಲು

RIPPONPETE | ಶಿಕ್ಷಣ ಕ್ಷೇತ್ರಕ್ಕೆ ಹೊಸ ಕೊಡುಗೆ – ಕಣಬಂದೂರಿನಲ್ಲಿ ಶ್ರೀ ಶಿವ ರಾಮಕೃಷ್ಣ ಸ್ಕೂಲ್ ನೂತನ ಕಟ್ಟಡಕ್ಕೆ ಅಡಿಗಲ್ಲು

Foundation stone laid for the new building of Sri Shiva Ramakrishna International School at Kanabandur. Kalagodu Ratnakar and Shwetha Bandi attended as chief guests and addressed the gathering.

ರಿಪ್ಪನ್‌ಪೇಟೆ : ಗ್ರಾಮೀಣ ಭಾಗದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣದ ಅವಕಾಶವನ್ನು ವಿಸ್ತರಿಸುವ ಮಹತ್ವದ ಉದ್ದೇಶದಿಂದ ಕಣಬಂದೂರಿನ ಶ್ರೀ ಶಿವ ರಾಮಕೃಷ್ಣ ಇಂಟರ್‌ನ್ಯಾಷನಲ್ ಸ್ಕೂಲ್‌ನ ನೂತನ ಶಾಲಾ ಕಟ್ಟಡ ನಿರ್ಮಾಣಕ್ಕೆ ಅಡಿಗಲ್ಲು ಮುಹೂರ್ತ ಕಾರ್ಯಕ್ರಮ ಸಂಭ್ರಮ ಹಾಗೂ ಸಡಗರದಿಂದ ನೆರವೇರಿತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಕಲಗೋಡು ರತ್ನಾಕರ್ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ಉತ್ತಮ ಶಿಕ್ಷಣ ಸಂಸ್ಥೆಯೊಂದು ಅಭಿವೃದ್ಧಿಯಾಗುತ್ತಿರುವುದು ಅತ್ಯಂತ ಸಂತಸದ ವಿಚಾರವಾಗಿದೆ. ಗ್ರಾಮೀಣ ಭಾಗದ ಮಕ್ಕಳಿಗೂ ನಗರ ಪ್ರದೇಶದ ಮಕ್ಕಳಿಗೆ ದೊರೆಯುವಂತಹ ಗುಣಮಟ್ಟದ ಶಿಕ್ಷಣದ ಅವಕಾಶ ಸಿಗಬೇಕು. ಉತ್ತಮ ಶಿಕ್ಷಣ ಸಂಸ್ಥೆಗಳು ಮಕ್ಕಳ ಭವಿಷ್ಯ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂದು ಹೇಳಿದರು.

ಶ್ವೇತಾ ಬಂಡಿ ಮಾತನಾಡಿ, ಶಿಕ್ಷಣವು ಮಕ್ಕಳ ಜೀವನವನ್ನು ರೂಪಿಸುವ ಅತ್ಯಂತ ಶಕ್ತಿಶಾಲಿ ಸಾಧನವಾಗಿದೆ. ಗ್ರಾಮೀಣ ಪ್ರದೇಶದ ಮಕ್ಕಳು ತಮ್ಮ ಪ್ರತಿಭೆ ಮತ್ತು ಸಾಮರ್ಥ್ಯವನ್ನು ಅಭಿವೃದ್ಧಿಪಡಿಸಿಕೊಂಡು ಸಮಾಜದಲ್ಲಿ ಉನ್ನತ ಸ್ಥಾನಕ್ಕೇರಲು ಉತ್ತಮ ಶಿಕ್ಷಣ ಅಗತ್ಯವಾಗಿದೆ. ನೂತನ ಶಾಲಾ ಕಟ್ಟಡ ನಿರ್ಮಾಣವು ಈ ಭಾಗದ ಶೈಕ್ಷಣಿಕ ಅಭಿವೃದ್ಧಿಗೆ ಮಹತ್ವದ ಕೊಡುಗೆಯಾಗಲಿದೆ ಎಂದು ಶುಭ ಹಾರೈಸಿದರು.

ಶಾಲೆಯ ಸಂಸ್ಥಾಪಕ ಶಿವರಾಮ್ ಸಿ.ಕೆ. ಮಾತನಾಡಿ, ಇಂದು ಹಾಕಿರುವ ಅಡಿಗಲ್ಲು ಕೇವಲ ಕಟ್ಟಡ ನಿರ್ಮಾಣಕ್ಕಾಗಿಯಲ್ಲ; ಇದು ನೂರಾರು ಮಕ್ಕಳ ಕನಸುಗಳಿಗೆ ಮತ್ತು ಅವರ ಉಜ್ವಲ ಭವಿಷ್ಯಕ್ಕೆ ಹಾಕುತ್ತಿರುವ ಭದ್ರ ಬುನಾದಿಯಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಹೊಸನಗರ ಎಪಿಎಂಸಿ ಮಾಜಿ ಅಧ್ಯಕ್ಷ ಬಿ.ಪಿ. ರಾಮಚಂದ್ರ, ಆಸೀಫ್ ಭಾಷಾ , ನಿರೂಪ್ ಕುಮಾರ್ , ಧರ್ಮದರ್ಶಿ ಚಂದ್ರಶೇಖರ್, ಶಾಲಾ ಸಲಹಾ ಸಮಿತಿಯ ಅಧ್ಯಕ್ಷ ಚಂದಪ್ಪಗೌಡ, ಉಪಾಧ್ಯಕ್ಷೆ ಅಪೂರ್ವ ಎಂ.ಜಿ., ಮುಖ್ಯ ಶಿಕ್ಷಕ ವಿನಾಯಕ, ಮುಖ್ಯ ಶಿಕ್ಷಕಿ ವಿನುತಾ ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು, ಶಿಕ್ಷಣ ತಜ್ಞರು, ಪೋಷಕರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

ನೂತನ ಶಾಲಾ ಕಟ್ಟಡವು ರಿಪ್ಪನ್ ಪೇಟೆ ಹಾಗೂ ಸುತ್ತಮುತ್ತಲಿನ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಉತ್ತಮ ಶೈಕ್ಷಣಿಕ ಸೌಲಭ್ಯಗಳನ್ನು ಒದಗಿಸುವ ಮೂಲಕ ಅವರ ಭವಿಷ್ಯ ನಿರ್ಮಾಣಕ್ಕೆ ಸಹಕಾರಿಯಾಗಲಿದೆ ಎಂಬ ಆಶಯ ವ್ಯಕ್ತವಾಯಿತು.

About The Author