ಬೆಳ್ಳೂರು GHPSನಲ್ಲಿ ಸ್ವಾತಂತ್ರ್ಯ ಸಂಭ್ರಮ: ಶಾಲೆಗೆ ಕೊಡುಗೆಗಳ ಮಹಾಪೂರ!

ಬೆಳ್ಳೂರು GHPSನಲ್ಲಿ ಸ್ವಾತಂತ್ರ್ಯ ಸಂಭ್ರಮ: ಶಾಲೆಗೆ ಕೊಡುಗೆಗಳ ಮಹಾಪೂರ!

Satish Ripponpete donated a TV to GHPS Bellur during the 80th Independence Day celebration and urged the public to support government school development.

ಬೆಳ್ಳೂರು: ಇಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ (GHPS) ಆವರಣದಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆಯನ್ನು ದೇಶಭಕ್ತಿ ಹಾಗೂ ಸಂಭ್ರಮದ ವಾತಾವರಣದಲ್ಲಿ ಆಚರಿಸಲಾಯಿತು. ಈ ಬಾರಿ ಧ್ವಜಾರೋಹಣದ ಜೊತೆಗೆ ಶಾಲೆಯ ಅಭಿವೃದ್ಧಿಗೆ ವಿವಿಧ ದಾನಿಗಳು ನೀಡಿದ ಕೊಡುಗೆಗಳು ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿದ್ದವು.

ಕಾರ್ಯಕ್ರಮದಲ್ಲಿ ಬಿಜೆಪಿ ತಾಲೂಕು ಘಟಕದ ಅಧ್ಯಕ್ಷ ಸತೀಶ್ ರಿಪ್ಪನ್‌ಪೇಟೆ ಅವರು ಶಾಲೆಗೆ ಟಿವಿಯನ್ನು ಕೊಡುಗೆಯಾಗಿ ನೀಡಿದರು. ಶಾಲೆಗೆ ಟಿವಿ ಹಸ್ತಾಂತರಿಸಿ ಮಾತನಾಡಿದ ಅವರು,“ಸರ್ಕಾರಿ ಶಾಲೆಗಳ ಅಭಿವೃದ್ಧಿ ಕೇವಲ ಸರ್ಕಾರದ ಜವಾಬ್ದಾರಿಯಲ್ಲ. ಸಾರ್ವಜನಿಕರು ಹಾಗೂ ದಾನಿಗಳು ಕೂಡ ಶಾಲೆಗಳ ಮೂಲಸೌಕರ್ಯ ಅಭಿವೃದ್ಧಿಗೆ ಕೈಜೋಡಿಸಬೇಕು. ಮಕ್ಕಳಿಗೆ ಉತ್ತಮ ಶಿಕ್ಷಣದೊಂದಿಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸುವುದು ಸಮಾಜದ ಜವಾಬ್ದಾರಿಯಾಗಿದೆ. ಸರ್ಕಾರಿ ಶಾಲೆಗಳನ್ನು ಉಳಿಸಿ ಬೆಳೆಸಲು ಎಲ್ಲರ ಸಹಕಾರ ಅಗತ್ಯ,” ಎಂದು ಸತೀಶ್ ರಿಪ್ಪನ್‌ಪೇಟೆ ಹೇಳಿದರು.

ಶಾಲೆಗೆ ಶುದ್ಧ ಕುಡಿಯುವ ನೀರಿನ ಘಟಕ

GHPS ಬೆಳ್ಳೂರು SDMC ಅಧ್ಯಕ್ಷರು ಹಾಗೂ ಸದಸ್ಯರು ಶಾಲಾ ಮಕ್ಕಳ ಆರೋಗ್ಯದ ದೃಷ್ಟಿಯಿಂದ ಶುದ್ಧ ಕುಡಿಯುವ ನೀರಿನ ಘಟಕವನ್ನು ಶಾಲೆಗೆ ಕೊಡುಗೆಯಾಗಿ ನೀಡಿದರು.

ಇದೇ ವೇಳೆ ಬೆಂಗಳೂರಿನ ನಾವೆಲ್ ಹೋಪ್ ಫೌಂಡೇಶನ್ ಅಧ್ಯಕ್ಷೆ ಪೌಜಿಯಾ ಹಾಗೂ ಶಿವಮೊಗ್ಗದ ನಲಿಕಲಿ ತಂಡದ ಸಹಕಾರದೊಂದಿಗೆ ಶಾಲಾ ಮಕ್ಕಳಿಗೆ ತಟ್ಟೆ, ವಾಟರ್ ಬಾಟಲ್ ಹಾಗೂ ನೋಟ್ ಪುಸ್ತಕಗಳನ್ನು ಉಚಿತವಾಗಿ ವಿತರಿಸಲಾಯಿತು.

ಖಾಸಗಿ ಶಾಲೆಗಳ ವ್ಯಾಮೋಹ ಬಿಡಿ: SDMC ಅಧ್ಯಕ್ಷ

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ SDMC ಅಧ್ಯಕ್ಷ ರಾಘವೇಂದ್ರ ಅವರು ಮಾತನಾಡಿ, ಪೋಷಕರು ಖಾಸಗಿ ಶಾಲೆಗಳ ಮೇಲಿನ ವ್ಯಾಮೋಹವನ್ನು ಕಡಿಮೆ ಮಾಡಿ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು ಎಂದು ಮನವಿ ಮಾಡಿದರು.

ಶಿಕ್ಷಣಾಸಕ್ತ ವಸಂತಕುಮಾರ್ ಅವರು ಶಿಕ್ಷಣದ ಜೊತೆಗೆ ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡುವ ಅಗತ್ಯವನ್ನು ಒತ್ತಿಹೇಳಿದರು. ತಿಮ್ಮಪ್ಪ ಅವರು ಮಕ್ಕಳು ಸ್ವಾಭಿಮಾನಿ ಹಾಗೂ ದೇಶಭಿಮಾನಿಗಳಾಗಿ ಬೆಳೆಯಬೇಕು ಎಂದು ಹಾರೈಸಿದರು.

SDMC ಸದಸ್ಯ ರವಿ ಎಂ.ಎಸ್. ಮಾತನಾಡಿ, “ಸ್ವಾತಂತ್ರ್ಯವೆಂದರೆ ಕೇವಲ ಹಕ್ಕಲ್ಲ, ಅದರೊಂದಿಗೆ ಜವಾಬ್ದಾರಿಯೂ ಇದೆ. ಪ್ರತಿಯೊಬ್ಬರೂ ಇದನ್ನು ಅರಿತು ಬದುಕಬೇಕು,” ಎಂದು ಹೇಳಿದರು.

7ನೇ ತರಗತಿ ವಿದ್ಯಾರ್ಥಿಗಳ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಮುಖ್ಯ ಶಿಕ್ಷಕಿ ವನಜ ಶೆಟ್ಟಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಶಿಕ್ಷಕಿ ವಿದ್ಯಾರಾಣಿ ಸ್ವಾಗತಿಸಿದರು. ಶಿಕ್ಷಕ ಮೋಹನ್ ಕುಮಾರ್ ವಂದನಾರ್ಪಣೆ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ಭಾಗ್ಯ, ರವೀಂದ್ರ ಗೌಡ, ಕವಿತಾ, ಪ್ರತಿಮಾ, ರಾಜ್ ಕುಮಾರ್, ಗೀತಾ, ಹರೀಶ್ ಕುಮಾರ್, ಮಂಜುನಾಥ್, ಗಂಗಾಧರ್, ದೇವೇಂದ್ರಪ್ಪ ಗೌಡ ಸೇರಿದಂತೆ ಹಲವು ಗಣ್ಯರು, ಶಿಕ್ಷಕರು, ಪೋಷಕರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

About The Author