ಸೋರುತಿದೆ ರಾಷ್ಟ್ರಕವಿ ಕುವೆಂಪು ಓದಿದ ಶಾಲೆ
ತೀರ್ಥಹಳ್ಳಿ : ರಾಷ್ಟ್ರಕವಿ ಕುವೆಂಪು ಅವರು ಓದಿದ ಶಾಲೆ ಈಗ ನಿರ್ವಹಣೆ ಇಲ್ಲದೆ ಸೋರುತ್ತಿದೆ. ಶತಮಾನದ ಇತಿಹಾಸ ಇದ್ದಂತಹ ಶಾಲೆಯಲ್ಲಿ ಈಗ ಸಂಪೂರ್ಣ ನೀರಿನ ಹೊಳೆ ಹರಿಯುತ್ತಿದೆ. ಸರ್ಕಾರಿ ಶಾಲೆಗೆ ಇದೆಂತಹ ಅವಸ್ಥೆ ಎಂದು ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತೀರ್ಥಹಳ್ಳಿ ಪಟ್ಟಣದ ಅಂಚೆ ಕಛೇರಿ ಪಕ್ಕದಲ್ಲಿ ಇರುವ ಶತಮಾನದ ಇತಿಹಾಸ ಹೊಂದಿದ, ಅದರಲ್ಲೂ ರಾಷ್ಟ್ರ ಕವಿ ಕುವೆಂಪು ಅವರು ಓದಿದ್ದ ಶಾಲೆಯಲ್ಲಿ ಸರಿಯಾದ ನಿರ್ವಹಣೆ ಇಲ್ಲದೆ ಮಳೆಗಾಲದಲ್ಲಿ ಸೋರುತ್ತಿದೆ. ಶಾಲೆಯಲ್ಲಿ ನೂರಾರು ಮಕ್ಕಳು ಓದುತ್ತಿದ್ದಾರೆ. ಸರ್ಕಾರಿ ಶಾಲೆಯಲ್ಲಿ ಮಕ್ಕಳು ಓದುವುದೇ ಹೆಚ್ಚು. ಅಂತಹದರಲ್ಲಿ ಅದನ್ನು ಸರಿಯಾದ ರೀತಿ ನಿರ್ವಹಣೆ ಮಾಡದೇ ಬೇಜವಾಬ್ದಾರಿ ತೋರಿಸುವ ಅಧಿಕಾರಿಗಳು ಈಗ ಮೌನ ವಹಿಸಿದ್ದಾರೆ.
ಹೊಸದಾಗಿ ಮಾಡಿರುವ ಶಾಲೆಯ ಅಡಿಗೆ ಕೋಣೆಯೇ ಸೋರುತ್ತಿದ್ದು. ಇನ್ನು ಹಳೆಯ ಕಟ್ಟಡವಾಗಿರುವ ಶಾಲೆಂ
ಪರಿಸ್ಥಿತಿ ನೀವೇ ಊಹಿಸಿಕೊಳ್ಳಿ, ಅಡಿಗೆ ಕೊಠಡಿಯಲ್ಲಿದ್ದ ಅಕ್ಕಿ ಚೀಲಗಳು, ಸಾಮಗ್ರಿಗಳು ಮಳೆ ನೀರಿನಿಂದ ಒದ್ದೆಯಾಗಿವೆ ಶಾಲೆಯ ಆವರಣದಲ್ಲಿ ಇರುವ ಸಿ ಆರ್ ಪಿ ಕಟ್ಟಡ ಸಹ ಸೋರುತ್ತಿದೆ. ಅದನ್ನೇ ಸರಿಪಡಿಸಿಕೊಳ್ಳಲಾಗದ ಶಿಕ್ಷಣ ಇಲಾಖೆಗೆ ಶಾಲೆ ಸರಿಪಡಿಸುವುದು ಕನಸಿನ ಮಾತು ಎಂದು ಪೋಷಕರೊಬ್ಬರು ಹೇಳಿದ್ದಾರೆ.
ಮಲೆನಾಡಿನಲ್ಲಿ ಮೂರು ತಿಂಗಳ ಕಾಲ ವಿಪರೀತ ಗಾಳಿ ಮಳೆ ಆಗುತ್ತದೆ. ಈ ಸಂದರ್ಭದಲ್ಲಿ ಮಕ್ಕಳನ್ನು ಆ ಚಳಿ ಹಾಗೂ ಸೋರುವ ಕಟ್ಟಡದಲ್ಲಿ ಕೂರಿಸಿ ಪಾಠ ಮಾಡುವುದು ಸರಿಯಲ್ಲ. ಈ ಬಗ್ಗೆ ಕೂಡಲೇ ಶಿಕ್ಷಣ ಇಲಾಖೆ ಹಾಗೂ ತಹಸೀಲ್ದಾರ್ ಅಥವಾ ಶಾಸಕರು ಕೂಡಲೇ ಶಾಲೆಗೆ ಭೇಟಿ ನೀಡಿ ಶತಮಾನದ ಶಾಲೆಯನ್ನು ಉಳಿಸಬೇಕಿದೆ.