
ಕೋಟ್ಯಂತರ ರೂ ಮೌಲ್ಯದ ಅಡಿಕೆ ಸಹಿತ ಲಾರಿ ಅಪಹರಿಸಿದ್ದ ಐವರು ಬಂಧನ
ಶಿವಮೊಗ್ಗ: ಒಂದು ಲಾರಿ ಲೋಡು ಅಡಿಕೆ ಕದ್ದಿದ್ದ ಶಿವಮೊಗ್ಗ, ತೀರ್ಥಹಳ್ಳಿ, ಚಿಕ್ಕಮಗಳೂರು, ಕಡೂರುನ ಆರೋಪಿಗಳನ್ನು ಬೀರೂರು ಪೊಲೀಸರು ಬಂಧಿಸಿದ್ದು ವರ್ಷದ ಮೊದಲ ಬಹುದೊಡ್ಡ ಅಡಕೆ ಕಳ್ಳತನ ಪ್ರಕರಣವನ್ನು ಬೇಧಿಸಿದ್ದಾರೆ.
335 ಚೀಲ ಅಡಿಕೆ, ಒಂದು ಟ್ರಕ್ ಮತ್ತು ₹ 2.3 ಲಕ್ಷ ನಗದು ಸೇರಿದಂತೆ ಪ್ರಕರಣದಲ್ಲಿ ₹1.22 ಕೋಟಿ ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ತೀರ್ಥಹಳ್ಳಿಯ ಅಮೀರ್ ಹಮ್ಮದ್ (38), ಶಿವಮೊಗ್ಗದ ಟಿಪ್ಪು ನಗರದ ಮಹಮ್ಮದ್ ಘೌಸ್ (30), ಶಿವಮೊಗ್ಗದ ಮಹಮ್ಮದ್ ಸುಭಾನ್ ಗಬ್ಬರ್ (24), ಶಿವಮೊಗ್ಗದ ಮಹಮ್ಮದ್ ಫಯಾಜ್ (29), ಮತ್ತು ಚಿಕ್ಕಮಗಳೂರು ಜಿಲ್ಲೆಯ ಕಡೂರಿನ ಮಹಮ್ಮದ್ ಸಾದಿಕ್ (42) ಬಂಧಿತರು.
2024 ರ ಡಿಸೆಂಬರ್ನಲ್ಲಿ ಕಡೂರು ತಾಲೂಕಿನ ಬೀರೂರಿನಿಂದ ತಲಾ 79 ಕೆಜಿ ತೂಕದ 350 ಚೀಲ ಅಡಿಕೆಯನ್ನು ಕಳುವು ಮಾಡಲಾಗಿತ್ತು. ಬೀರೂರಿನ ದೇವಗಿರಿ ಟ್ರೇಡರ್ಸ್ನ 350 ಚೀಲಗಳನ್ನು ಹೊತ್ತ ಟ್ರಕ್ ಗುಜರಾತ್ಗೆ ಕೊಂಡೊಯ್ಯಲು ಮಾತುಕತೆಯಾಗಿತ್ತು. ಆದರೆ ಆರೋಪಿಗಳು ಟ್ರಕ್ನ್ನ ಅಜ್ಞಾತ ಸ್ಥಳಕ್ಕೆ ಕೊಂಡೊಯ್ದಿದ್ದರು. ಆ ಬಳಿಕ ಮೊಬೈಲ್ ಸ್ವಿಚ್ ಆಫ್ ಮಾಡಿದ್ದರು. ಅಲ್ಲದೆ ಅಡಿಕೆ ವಿಚಾರದಲ್ಲಿ ಹಲವು ಕಥೆಗಳನ್ನು ಕಟ್ಟಿದ್ದರು. ಗುಜರಾತ್ಗೆ ಬದಲಾಗಿ ಹೊಳಲ್ಕೆರೆ ಲಾರಿ ಕೊಂಡೊಯ್ದು, ಅಡಿಕೆ ಅನ್ಲೋಡ್ ಮಾಡಿ ಅದನ್ನು ಮಾರಲು ಯತ್ನಿಸಿದ್ದರು. ಈ ಸಂಬಂಧ ದೂರು ಆಧರಿಸಿ ತನಿಖೆ ನಡೆಸಿದ ಪೊಲೀಸರು ಬೆಂಗಳೂರಿನಲ್ಲಿ ಆರೋಪಿಗಳನ್ನು ಬಂಧಿಸಿ ವಿಚಾರವನ್ನು ಬಾಯ್ಬಿಡಿಸಿದ್ದಾರೆ.
ಆರೋಪಿಗಳು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕೊಲೆ, ಕಳ್ಳತನ ಮತ್ತು ಸುಲಿಗೆ ಪ್ರಕರಣಗಳಲ್ಲಿ ಆರೋಪಿಗಳಾಗಿದ್ದಾರೆ ಎಂದು ಚಿಕ್ಕಮಗಳೂರು ಎಸ್ಪಿ ತಿಳಿಸಿದ್ದಾರೆ.ಇವರು ಹಾಸನ, ಶಿವಮೊಗ್ಗ, ತುಮಕೂರು, ಉಡುಪಿ, ಉತ್ತರ ಕನ್ನಡ, ವಿಜಯನಗರ, ಬೆಂಗಳೂರು ಸೇರಿದಂತೆ ಹೊರ ರಾಜ್ಯಗಳಲ್ಲೂ ಆರೋಪಿಗಳು ಕಳ್ಳತನ ಮಾಡಿದ್ದರು ಎನ್ನಲಾಗಿದೆ.

