ಕೋಣಂದೂರಿನ ಕಾಳುಮೆಣಸು ವ್ಯಾಪಾರಿಗೆ ೫ ಲಕ್ಷ ರೂ. ವಂಚನೆ
ಶಿವಮೊಗ್ಗ: ಕಾಳುಮೆಣಸು ಪೂರೈಸುವುದಾಗಿ ನಂಬಿಸಿ ತೀರ್ಥಹಳ್ಳಿ ತಾಲ್ಲೂಕಿನ ಕೋಣಂದೂರಿನ ಅಡಿಕೆ ಮಂಡಿಯ ಮಾಲೀಕರೊಬ್ಬರಿಗೆ ₹5 ಲಕ್ಷ ವಂಚನೆ ನಡೆದಿರುವ ಘಟನೆ ಬೆಳಕಿಗೆ ಬಂದಿದೆ. ಈ ಸಂಬಂಧ ಇಬ್ಬರು ವ್ಯಕ್ತಿಗಳ ವಿರುದ್ಧ ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೋಣಂದೂರಿನ ಬಸವನ ಬೀದಿಯಲ್ಲಿ ಅಡಿಕೆ ಮಂಡಿ ನಡೆಸುತ್ತಿರುವ ವ್ಯಕ್ತಿಯು ಕಳೆದ ಒಂದು ವರ್ಷದಿಂದ ಈ ಇಬ್ಬರು ಆರೋಪಿಗಳೊಂದಿಗೆ ವ್ಯಾಪಾರ ಸಂಬಂಧ ಹೊಂದಿದ್ದವರು. ಜುಲೈ 8 ರಂದು ಆರೋಪಿಗಳು ಕಾಳುಮೆಣಸು ನೀಡುವುದಾಗಿ ಭರವಸೆ ನೀಡಿದ ನಂತರ, ಒಬ್ಬರು ₹2.5 ಲಕ್ಷ ಹಾಗೂ ಇನ್ನೊಬ್ಬರು ₹2.5 ಲಕ್ಷಗಳಷ್ಟು ಮೊತ್ತವನ್ನು ಮುಂಗಡವಾಗಿ ಪಡೆದುಕೊಂಡಿದ್ದಾರೆ .
ಹಣವನ್ನು ಪಡೆದ ನಂತರ ಆರೋಪಿಗಳು ಕಾಳುಮೆಣಸು ಪೂರೈಸದೆ, ಹಣವನ್ನು ಹಿಂದಿರುಗಿಸದೇ ನಿರ್ಲಕ್ಷ್ಯ ತೋರಿದ್ದಾರೆ ಎಂದು ಮಾಲೀಕರು ದೂರಿನಲ್ಲಿ ತಿಳಿಸಿದ್ದಾರೆ .
ಈ ಸಂಬಂಧ ಅವರು ತೀರ್ಥಹಳ್ಳಿ ಪೊಲೀಸರಿಗೆ ದೂರು ಸಲ್ಲಿಸಿದ್ದಾಗಿ ತಿಳಿದುಬಂದಿದ್ದು, ಪೊಲೀಸರು ಈಗಾಗಲೇ ಪ್ರಕರಣದ ತನಿಖೆ ಆರಂಭಿಸಿದ್ದಾರೆ.