ಹೊಸನಗರದಲ್ಲಿ ಸಡಗರ ಹಾಗೂ ಸಂಭ್ರಮದಿಂದ ಬಕ್ರೀದ್ ಆಚರಣೆ
HOSANAGARA | ತ್ಯಾಗ ಮತ್ತು ಬಲಿದಾನದ ಸಂಕೇತವಾಗಿರುವ ಬಕ್ರೀದ್ ಹಬ್ಬ ಮುಸ್ಲಿಮರ ಪ್ರಮುಖ ಹಬ್ಬಗಳಲ್ಲಿ ಒಂದಾಗಿದೆ. ರಂಜಾನ್ ನಂತರ ಬರುವ ದೊಡ್ಡ ಹಬ್ಬ ಇದಾಗಿದ್ದು, ತ್ಯಾಗದ ಸಂಕೇತವಾಗಿರುವ ಈ ಹಬ್ಬವನ್ನು ಪ್ರಪಂಚದಾದ್ಯಂತ ಮುಸ್ಲಿಮರು ಬಹಳ ಅದ್ಧೂರಿಯಾಗಿ ಆಚರಿಸುತ್ತಾರೆ.
ಪ್ರತಿವರ್ಷ ದುಲ್-ಅಜ್-ಹಜ್ಜ್ ತಿಂಗಳಿನ ಹತ್ತನೇ ದಿನದಂದು, ಪ್ರಪಂಚದಾದ್ಯಂತ ಮುಸ್ಲಿಮರು ಈದ್-ಉಲ್-ಅಧಾ ಅಂದರೆ ಬಕ್ರೀದ್ ಹಬ್ಬವನ್ನು ಆಚರಿಸುತ್ತಾರೆ. ಈ ಹಬ್ಬದ ದಿನ ಸಾಮಾನ್ಯವಾಗಿ ಕುರಿ, ಮೇಕೆಯನ್ನು ದೇವರಿಗಾಗಿ ಬಲಿ ಕೊಡಲಾಗುತ್ತದೆ ಎಂದು ಕಳೂರು ಜುಮ್ಮಾ ಮಸೀದಿ (ಜಾಮಿಯಾ ಮಸೀದಿ) ಹೊಸನಗರದ ಧರ್ಮಗುರುಗಳಾದ ಮುಫ್ತಿ ಮೊಹಮ್ಮದ್ ಇಂತಿಯಾಝ್ ಬಕ್ರೀದ್ ಹಬ್ಬದಂದು ಸಮುದಾಯವನ್ನು ಉದ್ದೇಶಿಸಿ ಮಾತನಾಡಿದರು.
ಹೊಸನಗರದ ಜಾಮಿಯಾ ಮಸೀದಿ ಆವರಣದಲ್ಲಿ ಏರ್ಪಡಿಸಲಾಗಿದ್ದ ಬಕ್ರೀದ್ ಹಬ್ಬದ ವಿಶೇಷ ನಮಾಜ್ ಸಂದರ್ಭದಲ್ಲಿ ಮಾತನಾಡಿದ ಅವರು, ಈ ದಿನವನ್ನು ಹಜ್ರತ್ ಇಬ್ರಾಹಿಂ ಮತ್ತು ಇಸ್ಮಾಯಿಲ್ ರವರ ಬಲಿದಾನದ ಸಂಕೇತವಾಗಿ ಆಚರಿಸಲಾಗುತ್ತದೆ ಎಂದರು.
ಕಮಿಟಿಯ ಪದಾಧಿಕಾರಿಗಳು, ಸಮುದಾಯದ ಮುಖಂಡರು, ಹಿರಿಯರು, ಯುವಕರು ಮತ್ತು ಮಕ್ಕಳು ಪರಸ್ಪರ ಆಲಿಂಗನ ಮಾಡುವುದರ ಮೂಲಕ ಹಬ್ಬದ ಶುಭಾಶಯವನ್ನು ವಿನಿಮಯ ಮಾಡಿಕೊಂಡರು.