Headlines

ಕೊಲ್ಲೂರಿಗೆ ಆಗಮಿಸಿದ್ದ  ಬೆಂಗಳೂರಿನ ವಿವಾಹಿತ ಮಹಿಳೆ ನಾಪತ್ತೆ

ಕೊಲ್ಲೂರಿಗೆ ಆಗಮಿಸಿದ್ದ  ಬೆಂಗಳೂರಿನ ವಿವಾಹಿತ ಮಹಿಳೆ ನಾಪತ್ತೆ

ಕೊಲ್ಲೂರು : ಕೊಲ್ಲೂರಿಗೆ  ಆಗಮಿಸಿದ್ದ ವಿವಾಹಿತೆಯೊಬ್ಬರು ನಾಪತ್ತೆಯಾಗಿರುವ ಘಟನೆ ನಡೆದಿದೆ.ಬೆಂಗಳೂರು ತ್ಯಾಗರಾಜ ನಗರ ನಿವಾಸಿ ಸಿ. ಆರ್. ಗೋವಿಂದರಾಜು ಪುತ್ರಿ ವಸುಧಾ ಚಕ್ರವರ್ತಿ (46) ನಾಪತ್ತೆಯಾದ ಮಹಿಳೆ.

ಅವರು ಅಗಸ್ಟ್ 28 ರಂದು ಕೊಲ್ಲೂರಿಗೆ ಆಗಮಿಸಿದ್ದು, ಖಾಸಗಿ ವಸತಿಗೃಹದ ಬಳಿ ಕಾರು ನಿಲ್ಲಿಸಿ ದೇಗುಲಕ್ಕೆ ತೆರಳಿ ಆಂಜನೇಯ ಗರ್ಭಗುಡಿಯಲ್ಲಿ ಕೆಲ ಕಾಲ ಕಳೆದು ವಿವಿದೆಡೆಗೆ ಸಾಗಿ ಸೌಪರ್ಣಿಕಾ ನದಿಯತ್ತ ತೆರಳಿ ನಾಪತ್ತೆಯಾಗಿದ್ದರು.

ಪೊಲೀಸರು ಹಾಗೂ ಗ್ರಾಮಸ್ಥರು ಸೌಪರ್ಣಿಕಾ ನದಿ ಸಹಿತ ವಿವಿಧೆಡೆ ಹುಡುಕಾಟ ನಡೆಸಿದರೂ ಆಕೆಯ ಯಾವುದೇ ಸುಳಿವು ಪತ್ತೆಯಾಗಿಲ್ಲ. ಕಾರಿನಲ್ಲಿ ಮೊಬೈಲ್ ಹಾಗೂ ಇನ್ನಿತರ ವಸ್ತುಗಳು ಕಂಡುಬಂದ ಹಿನ್ನೆಲೆಯಲ್ಲಿ ಮೊಬೈಲ್ ಮೂಲಕ ಸಂಪರ್ಕಿಸಿದಾಗ ಆಕೆಯ ವಿಳಾಸ ಪತ್ತೆಯಾಯಿತು.

ಈ ಬಗ್ಗೆ ಸಂಬಂಧಪಟ್ಟವರನ್ನು ಸಂಪರ್ಕಿಸಿ ಮಾಹಿತಿ ನೀಡಲಾಗಿದೆ. ಈ ನಡುವೆ ದೇವಸ್ಥಾನದ ವತಿಯಿಂದ ಸೌಪರ್ಣಿಕಾ ನದಿ ಸಮೀಪ ಹಾಕಿದ್ದ ಸಿಸಿಟಿವಿಯಲ್ಲಿ ನಾಪತ್ತೆಯಾಗಿದ್ದ ಮಹಿಳೆ ಈಜುತ್ತಿರುವುದು ಕಂಡು ಬಂದಿದೆ. ಉತ್ತಮ ಈಜುಗಾರ್ತಿಯಾಗಿರುವ ವಸುಧಾ ಅವರು ಬಹುದೂರ ಈಜಿ ದಡ ಸೇರಿದರೇ ಅಥವಾ ಉಕ್ಕಿ ಹರಿಯುತ್ತಿರುವ ಸೌಪರ್ಣಿಕಾ ನದಿಯಲ್ಲಿ ಕೊಚ್ಚಿಹೋದರೇ ಎನ್ನುವುದು ಇನ್ನೂ ಯಕ್ಷ ಪ್ರಶ್ನೆಯಾಗಿದೆ.

ಮುಳುಗುತಜ್ಞ ಈಶ್ವರ್ ಮಲ್ಪೆ ಹಾಗೂ ಅಗ್ನಿಶಾಮಕ ದಳದವರು ನದಿಯ ವಿವಿಧ ಕಡೆ ನಾಪತ್ತೆಯಾದ ಮಹಿಳೆಯ ಶೋಧ ಕಾರ್ಯ ನಡೆಸಿದರೂ ಸಂಜೆಯ ತನಕ ಯಾವುದೇ ಸುಳಿವು ಸಿಗದ ಹಿನ್ನೆಲೆಯಲ್ಲಿ ಶೋಧ ಕಾರ್ಯ ಸ್ಥಗಿತಗೊಳಿಸಲಾಗಿದೆ.

ಕುಟುಂಬದ ಸದಸ್ಯರು ಆಗಮನ. ನಾಪತ್ತೆಯಾದ ಮಹಿಳೆಯ ಪೋಷಕರು ಹಾಗೂ ಕುಟುಂಬ ಸದಸ್ಯರು ಸುದ್ದಿ ತಿಳಿದ ತತ್‌ಕ್ಷಣ ಕೊಲ್ಲೂರಿಗೆ ಆಗಮಿಸಿದ್ದಾರೆ. ಈಕೆ ವಿದೇಶದಲ್ಲಿ ಉದ್ಯೋಗದಲ್ಲಿದ್ದು ವಿವಾಹಿತರಾಗಿದ್ದಾರೆ.

ಇತ್ತೀಚಿನ ದಿನಗಳಲ್ಲಿ ವಸುಧಾ ವಿವಿಧ ತೀರ್ಥ ಕ್ಷೇತ್ರ ಹಾಗೂ ಧಾರ್ಮಿಕ ಕ್ಷೇತ್ರಗಳಿಗೆ ಒಂಟಿಯಾಗಿ ತೆರಳಿ ಧ್ಯಾನಾಸಕ್ತರಾಗುತ್ತಿದ್ದರು ಎಂದು ಕುಟುಂಬದ ಮೂಲಗಳಿಂದ ತಿಳಿದುಬಂದಿದೆ.

ನಾಪತ್ತೆಯಾದ ಮಹಿಳೆಯ ಬಗ್ಗೆ ಯಾರಿಗಾದರೂ ಮಾಹಿತಿ ದೊರೆಕಿದಲ್ಲಿ ಕೊಲ್ಲೂರು ಠಾಣೆಯನ್ನು ಸಂಪರ್ಕಿಸಲು ಕೋರಲಾಗಿದೆ.