ಗಾಂಜಾ ಮಾರಾಟ ಮಾಡುತಿದ್ದ ನಾಲ್ವರ ಬಂಧನ
ಶಿಕಾರಿಪುರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಕೆಸರಗಟ್ಟೆ ಮೀಸಲು ಅರಣ್ಯ ಪ್ರದೇಶದ ಸೇತುವೆ ಬಳಿ ಸಾರ್ವಜನಿಕರಿಗೆ ಗಾಂಜಾ ಮಾರಾಟ ಮಾಡುತ್ತಿದ್ದ ನಾಲ್ವರು ಆರೋಪಿಗಳನ್ನು ಸಿಇಎನ್ ಅಪರಾಧ ಠಾಣೆಯ ಪೊಲೀಸರು ಈಚೆಗೆ ಬಂಧಿಸಿದ್ದಾರೆ.
ಶಿಕಾರಿಪುರ ತಾಲ್ಲೂಕಿನ ಮಲ್ಲಾಪುರ ಗ್ರಾಮದ ನಿವಾಸಿಗಳಾದ ಮೊಹಮ್ಮದ್ ಮುಜೀಬ್ (23), ಹಜರತ್ ಉಸ್ಮಾನ್ (26), ಶಿವಮೊಗ್ಗದ ಅಣ್ಣಾನಗರ ನಿವಾಸಿ ಸಲ್ಮಾನ್ ಇ.(28) ಹಾಗೂ ಶಿಕಾರಿಪುರದ ಜಟ್ಪಟ್ ನಗರದ ಮೊಹಮ್ಮದ್ ಕೈಫ್ (21) ಬಂಧಿತರು.
ಡಿವೈಎಸ್ಪಿ ಕೆ.ಕೃಷ್ಣಮೂರ್ತಿ ನೇತೃತ್ವದ ತಂಡವು ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿತ್ತು. ಆರೋಪಿಗಳಿಂದ ಅಂದಾಜು ₹ 70,000 ಮೌಲ್ಯದ 2 ಕೆ.ಜಿ, 52 ಗ್ರಾಂ ಒಣ ಗಾಂಜಾ, ಕೃತ್ಯಕ್ಕೆ ಬಳಸಿದ್ದ ಕಾರು ಹಾಗೂ ಬೈಕ್ ಅನ್ನು ವಶಪಡಿಸಿಕೊಳ್ಳಲಾಗಿದೆ.
ಕಾರ್ಯಾಚರಣೆ ನಡೆಸಿದ ತಂಡದಲ್ಲಿ ಸಿಬ್ಬಂದಿ ಬಿ.ಧರ್ಮನಾಯ್ಕ, ಬಿ.ರವಿ, ಆಂಡ್ರೋಸ್ ಜೋನ್ಸ್, ಸಂಗಮೇಶ್ ಮತ್ತು ಫಿರ್ದೋಸ್ ಅಹಮ್ಮದ್ ಇದ್ದರು. ತಂಡಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ಅಭಿನಂದನೆ ಸಲ್ಲಿಸಿದ್ದಾರೆ.