Headlines

ಪತ್ರಕರ್ತರ ಆರೋಗ್ಯ ಚೆನ್ನಾಗಿದ್ದರೆ ಸುದ್ದಿ ಕೂಡಾ ಆರೋಗ್ಯಕರವಾಗಿರುತ್ತದೆ : ಎಸ್.ರುದ್ರೇಗೌಡ

ಶಿವಮೊಗ್ಗ ಜಿಲ್ಲೆಯ ಕಾರ್ಯನಿರತ ಪತ್ರಕರ್ತರಿಗಾಗಿ ನಗರದ ಮೇಟ್ರೋ ಯುನೈಟೆಡ್‌ ಹೆಲ್ತ್‌ ಕೇರ್‌ ಆಸ್ಪತ್ರೆ ಹಾಗೂ ಹೃದಯ ಸ್ಪೆಷಾಲಿಟಿ ಕ್ಲಿನಿಕ್‌ ಸಹಯೋಗದೊಂದಿಗೆ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘವು ಭಾನುವಾರ ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ವಿಧಾನ ಪರಿಷತ್‌ ಸದಸ್ಯರಾದ ಎಸ್ ರುದ್ರೇಗೌಡ ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು ನಿತ್ಯ ಒತ್ತಡದ ಕೆಲಸದಲ್ಲಿ ತೊಡಗಿಸಿಕೊಳ್ಳುವ ಪತ್ರಕರ್ತರಿಗೆ ಆರೋಗ್ಯ ತಪಾಸಣೆ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಇಂತಹದೊಂದು ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಿದ್ದು ನಿಜಕ್ಕೂ ಒಳ್ಳೆಯ ಕೆಲಸ. ರಾಜಕಾರಣಿಗಳ ಹಾಗೆಯೇ ಅನೇಕ ಸಮಯದಲ್ಲಿ ಊಟ ತಿಂಡಿ, ನಿದ್ರೆಗಳೆಲ್ಲವೂ  ಪತ್ರಕರ್ತರಿಗೆ ಮರೀಚಿಕೆಯಾಗಿರುತ್ತವೆ. ಸಮಯದ ಪರಿವೆಯೇ ಇಲ್ಲದೆ ಕೆಲಸಮಾಡಬೇಕಾದ ಪರಿಸ್ಥಿತಿಗಳು ಇರುತ್ತವೆ. ಹಾಗಾಗಿ ಅವರಿಗೆ ಆರೋಗ್ಯ ತಪಾಸಣೆ ಅವಶ್ಯಕತೆ ಇದೆ. ಪತ್ರಕರ್ತರ ಆರೋಗ್ಯ ಚೆನ್ನಾಗಿದ್ದರೆ ಸುದ್ದಿಕೂಡವೂ ಆರೋಗ್ಯವಾಗಿರುತ್ತದೆ ಎಂದರು.

ಪತ್ರಕರ್ತರಿಗಾಗಿ ಮೇಟ್ರೋ ಯುನೈಟೆಡ್‌ ಹೆಲ್ತ್‌ ಕೇರ್‌ ಆಸ್ಪತ್ರೆ ಹಾಗೂ ಹೃದಯ ಸ್ಪೆಷಾಲಿಟಿ ಕ್ಲಿನಿಕ್‌ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಂಡಿದ್ದು ನಿಜಕ್ಕೂ ಶ್ಲಾಘನೀಯವಾದದ್ದು. ಶಿವಮೊಗ್ಗದ ಎಲ್ಲಾ ಆಸ್ಪತ್ರೆಗಳು ಕೂಡ ಪತ್ರಕರ್ತರಿಗೆ ಇಂತಹ ಶಿಬಿರ ಹಮ್ಮಿಕೊಳ್ಳಲಿ ಎಂದು ಸಲಹೆ ನೀಡಿದರಲ್ಲದೆ, ಪತ್ರಕರ್ತರು ಈ ಆರೋಗ್ಯ ತಪಾಸಣೆ ಶಿಬಿರವನ್ನು ಸದುಪಯೋಗ ಪಡೆದುಕೊಳ್ಳಲಿ.ಹಾಗೆಯೇ ಅವರೆಲ್ಲರೂ ಆರೋಗ್ಯವಾಗಿ ಕೆಲಸದಲ್ಲಿ ತೊಡಗಿಸಿಕೊಳ್ಳಲಿ ಎಂದರು.ಇದೇ ವೇಳೆ ಅವರು ಪತ್ರಕರ್ತರಾಗಿ ಕೆಲಸ ಮಾಡುವವರ ಕುಟುಂಬದವರಿಗೂ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಇಂತಹ ಉಚಿತ ಆರೋಗ್ಯ ಶಿಬಿರ ಹಮ್ಮಿಕೊಳ್ಳಲಿ ಎಂದು ಸಲಹೆ ನೀಡಿದರು.

ಮುಖ್ಯ ಅತಿಥಿಯಾಗಿ ಆಗಮಿಸಿದ್ದ ವಿಧಾನ ಪರಿಷತ್‌ ಶಾಸಕರಾದ ಆಯನೂರು ಮಂಜುನಾಥ್‌ ಮಾತನಾಡಿ, ಸಮಾಜದಲ್ಲಿ ರಾಜಕಾರಣಿಗಳು ಹಾಗೂ ಪತ್ರಕರ್ತರು ಇಬ್ಬರೂ ಒಂದೇ ಬಗೆಯ ಜನರು.ಅವರ ನಾಡಿಮಿಡಿತಗಳನ್ನು ಅಷ್ಟು ಸುಲಭವಾಗಿ ಪತ್ತೆ ಹಚ್ಚಲಾಗೋದಿಲ್ಲ ಎಂಬ ಹಾಸ್ಯದ ಮಾತುಗಳೊಂದಿಗೆ ಪತ್ರಕರ್ತರ ಮಹತ್ವದ ಕುರಿತು ಮಾತನಾಡಿದರು. ಪತ್ರಕರ್ತರು ಸಾಕಷ್ಟು ಒತ್ತಡದಲ್ಲಿ ಕೆಲಸ ಮಾಡುತ್ತಿರುತ್ತಾರೆ. ಅವರಿಗೆ ಆರೋಗ್ಯ ತುಂಬಾನೆ ಮುಖ್ಯವಾಗುತ್ತದೆ. ಹಾಗೆಯೇ ಹೃದಯ ಮತ್ತು ಹೃದಯವಂತಿಕೆಯೂ ಇರಬೇಕಾಗುತ್ತದೆ.ಈಗ ಪತ್ರಿಕೋದ್ಯಮ ಹಿಂದಿನಂತಿಲ್ಲ.ವರದಿಗಳೇ ಪರ್ತಕರ್ತರ ಅಭಿಪ್ರಾಯಗಳಾಗಿ ಪರಿವರ್ತನೆ ಆಗುತ್ತಿವೆ.ಇದು ಸಮಾಜಕ್ಕೆ ತಪ್ಪು ಸಂದೇಶ ಹೊಂದಂತಾಗುತ್ತದೆ. ವರದಿಯೇ ಬೇರೆ, ಅಭಿಪ್ರಾಯವೇ ಬೇರೆ. ಅದನ್ನು ಅವರು ವರ್ಗಿಕರಿಸಿಯೇ ಪತ್ರಿಕೆಗಳನ್ನು ತರಬೇಕಿದೆ. ಪತ್ರಕರ್ತರು ಚೆನ್ನಾಗಿದ್ದರೆ ಸಮಾಜವೂ ಚೆನ್ನಾಗಿರುತ್ತದೆ ಎಂದರು.

ಜಿಲ್ಲಾ ಪಂಚಾಯತ್‌ ಮಾಜಿ ಸದಸ್ಯ ಕೆ.ಈ. ಕಾಂತೇಶ್‌ ಮಾತನಾಡಿ, ಸಮಾಜದ ಓರೆಕೋರೆಗಳನ್ನು ತಿದ್ದುವಲ್ಲಿ ಪತ್ರಕರ್ತರ ಪಾತ್ರ ಮಹತ್ವದ್ದು. ಅವರ ಸಹಾಯಕ್ಕೆ ನಾನು ಮತ್ತು ನಮ್ಮ ಕುಟುಂಬ ಸದಾ ಸಿದ್ದವಿದೆ. ಪತ್ರಕರ್ತರು ಮತ್ತು ಅವರ ಕುಟುಂಬಕ್ಕೆ ಮೆಟ್ರೋ ಆಸ್ಪತ್ರೆಯಲ್ಲಿ ತಪಾಸಣೆ ಮತ್ತು ಚಿಕಿತ್ಸೆಗೆ ಶೇ.20 ರಷ್ಟು ರಿಯಾಯಿತಿ ನೀಡಲಾಗುವುದು ಎಂದು ಘೋಷಿಸಿದರು. ಇದೇ ವೇಳೆ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘವು, ಇನ್ನು ಹೆಚ್ಚಿನ ರಿಯಾಯಿತಿ ನೀಡುವಂತೆ ಮಾಡಿಕೊಂಡ ಮನವಿಗೆ ಅಲ್ಲಿಯೇ ಪ್ರತಿಕ್ರಿಯೆ ನೀಡಿದ ಅವರು, ಮುಂದಿನ ದಿನಗಳಲ್ಲಿ ಆ ಬಗ್ಗೆ ನಿರ್ಧಾರ ಮಾಡಲಾಗುವುದು ಎಂದು ಭರವಸೆ ನೀಡಿದರು.

ಶಿವಮೊಗ್ಗ ನಗರಾಭಿವೃದ್ದಿ ಪ್ರಾಧಿಕಾರಿ ಮಾಜಿ ಅಧ್ಯಕ್ಷರಾದ   ಎಸ್.‌ ಎಸ್.‌ ಜ್ಯೋತಿ ಪ್ರಕಾಶ್‌ ಮಾತನಾಡಿ, ಪತ್ರಕರ್ತರು ತಮ್ಮ ಒತ್ತಡ ಕೆಲಸದ ನಡುವೆಯೂ ಆರೋಗ್ಯಕ್ಕೆ ಅಂತಲೇ ಒಂದಷ್ಟು ಸಮಯವನ್ನು ಮೀಸಲಿಡಬೇಕು. ಈಗ ಆರೋಗ್ಯಕರವಾಗಿರಲು ಯೋಗವೂ ಪ್ರಮುಖ ಪಾತ್ರ ವಹಿಸುತ್ತಿದೆ. ನಿತ್ಯವೂ ಒಂದಷ್ಟು ಸಮಯ ಯೋಗ ಮಾಡುವುದರ ಮೂಲಕವೂ ಪತ್ರಕರ್ತರು ಒತ್ತಡವನ್ನು ರಿಲ್ಯಾಕ್ಸ್‌ ಮಾಡಿಕೊಳ್ಳಬಹುದು ಎಂದು ಸಲಹೆ ನೀಡಿದರು.

ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ  ಕೆ.ವಿ. ಶಿವಕುಮಾರ್‌ ಅಧ್ಯಕ್ಷತೆ ವಹಿಸಿದ್ದರು. ಪತ್ರಕರ್ತರಿಗಾಗಿ ಆರೋಗ್ಯ ಶಿಬಿರ ಹಮ್ಮಿಕೊಳ್ಳುವುದಕ್ಕೆ ಕಾರಣವಾದ ವಿಚಾರವನ್ನು ಹಂಚಿಕೊಂಡರು. ಹಾಗೆಯೇ ಮೆಟ್ರೋ ಆಸ್ಪತ್ರೆ ಮತ್ತು ಹೃದಯ ಸ್ಪೆಷಾಲಿಟಿ ಕ್ಲಿನಿಕ್‌ ಸಹಾಯಕ್ಕೆ ಅಭಿನಂದನೆ ತಿಳಿಸಿದರು.

ಸಮಾರಂಭದಲ್ಲಿ  ಮೇಟ್ರೋ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ಪೃಥ್ವಿ ಬಿ.ಸಿ, ಹೃದಯ ರೋಗ ತಜ್ಞ ಮಹೇಶ ಮೂರ್ತಿ, ಮೇಟ್ರೋ ಸಿಇಓ ಡಾ. ತೇಜಸ್ವಿ ಹಾಜರಿದ್ದರು. 

Leave a Reply

Your email address will not be published. Required fields are marked *