ಕೊಡಚಾದ್ರಿ ಟ್ರೆಕ್ಕಿಂಗ್ ವೇಳೆ ಹೃದಯಾಘಾತ: ಸಿನಿಮಾ ನಿರ್ಮಾಪಕ ಬಾ.ಮಾ. ಹರೀಶ್ ಪುತ್ರ ಉಲ್ಲಾಸ್ ಗೌಡ ಸಾವು
Bengaluru youth Ullas Gowda, son of noted film producer and former KFCC President B.M. Harish, died of a suspected heart attack while returning from a trek at Kodachadri in Shivamogga district.
ಹೊಸನಗರ: ಶಿವಮೊಗ್ಗ ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣವಾದ ಕೊಡಚಾದ್ರಿ ಬೆಟ್ಟಕ್ಕೆ ಸ್ನೇಹಿತರೊಂದಿಗೆ ಟ್ರೆಕ್ಕಿಂಗ್ಗೆ ತೆರಳಿದ್ದ ವೇಳೆ ಬೆಂಗಳೂರಿನ ಯುವಕ ಉಲ್ಲಾಸ್ ಗೌಡ (28) ಹೃದಯಾಘಾತದಿಂದ ಮೃತಪಟ್ಟಿರುವ ದುರ್ಘಟನೆ ನಡೆದಿದೆ.
ಮೃತ ಉಲ್ಲಾಸ್ ಗೌಡ ಅವರು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಮಾಜಿ ಅಧ್ಯಕ್ಷ ಹಾಗೂ ಖ್ಯಾತ ಸಿನಿಮಾ ನಿರ್ಮಾಪಕ ಬಾ.ಮಾ. ಹರೀಶ್ ಅವರ ಪುತ್ರರಾಗಿದ್ದಾರೆ.
ಮಾಹಿತಿಯ ಪ್ರಕಾರ ಉಲ್ಲಾಸ್ ಗೌಡ ಬೆಂಗಳೂರಿನ ಚಾರಣ ಸಂಸ್ಥೆಯ ಟೂರ್ ಪ್ಯಾಕೇಜ್ ನಲ್ಲಿ ತನ್ನ ಸ್ನೇಹಿತ ಸುರೇಶ್ ಎಂಬಾತನೊಂದಿಗೆ ಬೆಂಗಳೂರಿನಿಂದ ಟಿಟಿ ವಾಹನದಲ್ಲಿ ಕೊಡಚಾದ್ರಿಗೆ ಆಗಮಿಸಿದ್ದರು. ಅವರು ಟಿಟಿ ವಾಹನದಲ್ಲಿದ್ದ ಇನ್ನಿತರ 11 ಸದಸ್ಯರ ಜೊತೆಗೆ ಸರ್ವಜ್ಞ ಪೀಠದವರೆಗೆ ಟ್ರೆಕ್ಕಿಂಗ್ ನಡೆಸಿದ್ದರು. ವಾಪಸ್ ಇಳಿಯುತ್ತಿದ್ದ ವೇಳೆ ದೇವಸ್ಥಾನದ ಸಮೀಪ ಉಲ್ಲಾಸ್ ಅವರಿಗೆ ತೀವ್ರ ಎದೆನೋವು ಕಾಣಿಸಿಕೊಂಡಿದ್ದು, ಕೆಲವೇ ಕ್ಷಣಗಳಲ್ಲಿ ಅವರು ಕುಸಿದು ಬಿದ್ದಿದ್ದಾರೆ.

ತಕ್ಷಣವೇ ಸ್ಥಳೀಯರ ಹಾಗೂ ಸ್ನೇಹಿತರ ನೆರವಿನಿಂದ ಅವರನ್ನು ಬೆಟ್ಟದಿಂದ ಕೆಳಕ್ಕೆ ಕರೆತಂದು ನಗರ (ಬಿದನೂರು ) ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಯಿತು.ಅಲ್ಲಿಂದ ಕೂಡಲೇ ಹೊಸನಗರ ತಾಲೂಕು ಆಸ್ಪತ್ರೆಗೆ ದಾಖಲಿಸಿ ಎಂದ ಮಾರ್ಗಮಧ್ಯೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಮೃತದೇಹವನ್ನು ಹೊಸನಗರ ಸಮುದಾಯ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದ್ದು, ಘಟನೆ ಸಂಬಂಧ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಯುವಕನ ಅಕಾಲಿಕ ನಿಧನ ಕುಟುಂಬಸ್ಥರು ಹಾಗೂ ಸ್ನೇಹಿತರಲ್ಲಿ ತೀವ್ರ ಶೋಕವನ್ನುಂಟು ಮಾಡಿದೆ.