Headlines

ಹೊಸನಗರದಲ್ಲಿ ಪವಿತ್ರ ಬಕ್ರೀದ್ ಆಚರಣೆ: ತ್ಯಾಗ-ಬಲಿದಾನದ ಸಂದೇಶ ಸಾರಿದ ಧರ್ಮಗುರುಗಳು

ಹೊಸನಗರದಲ್ಲಿ ಪವಿತ್ರ ಬಕ್ರೀದ್ ಆಚರಣೆ: ತ್ಯಾಗ-ಬಲಿದಾನದ ಸಂದೇಶ ಸಾರಿದ ಧರ್ಮಗುರುಗಳು

Bakrid festival was celebrated with devotion and harmony at Jamia Masjid in Hosanagara. Khateeb Janab Muhammed Rihan highlighted the message of sacrifice, brotherhood, peace and humanity during Eid-ul-Adha prayers.

ಹೊಸನಗರ: ವಿಶ್ವದಾದ್ಯಂತ ಮುಸ್ಲಿಂ ಸಮುದಾಯದವರು ತ್ಯಾಗ ಮತ್ತು ಬಲಿದಾನದ ಸಂಕೇತವಾಗಿ ಆಚರಿಸುವ ಪವಿತ್ರ ‘ಈದುಲ್ ಅದ್‌ಹಾ’ (ಬಕ್ರೀದ್) ಹಬ್ಬವನ್ನು ಹೊಸನಗರದಲ್ಲೂ ಭಕ್ತಿಭಾವ ಹಾಗೂ ಸಡಗರ ಸಂಭ್ರಮದಿಂದ ಆಚರಿಸಲಾಯಿತು.

ಪಟ್ಟಣದ ಜಾಮಿಯಾ ಮಸೀದಿ (ಕಳೂರು ಜುಮ್ಮಾ ಮಸೀದಿ) ಆವರಣದಲ್ಲಿ ಬಕ್ರೀದ್ ಪ್ರಯುಕ್ತ ವಿಶೇಷ ನಮಾಜ್ ನೆರವೇರಿಸಲಾಯಿತು. ಈ ವೇಳೆ ಖುತ್ಬಾ ನಂತರ ಉಪದೇಶ ನೀಡಿದ ಖತೀಬರಾದ ಜನಾಬ್ ಮುಹಮ್ಮದ್ ರಿಹಾನ್ ಅವರು, “ಪ್ರವಾದಿ ಇಬ್ರಾಹಿಂ ಅವರು ಅಲ್ಲಾಹುವಿನ ಆದೇಶದಂತೆ ತಮ್ಮ ಪುತ್ರ ಹಜರತ್ ಇಸ್ಮಾಯಿಲ್ ಅವರನ್ನು ಬಲಿ ನೀಡಲು ಸಿದ್ದರಾದ ತ್ಯಾಗಭಾವನೆ ಈ ಹಬ್ಬದ ಮೂಲ ಸಂದೇಶವಾಗಿದೆ” ಎಂದು ಹೇಳಿದರು.

ಮಾನವೀಯ ಮೌಲ್ಯಗಳನ್ನು ಎತ್ತಿಹಿಡಿಯುವುದು, ಪರಸ್ಪರ ಸಹೋದರತ್ವ ಬೆಳೆಸುವುದು ಹಾಗೂ ಶಾಂತಿ-ಸೌಹಾರ್ದತೆಯನ್ನು ಕಾಪಾಡುವುದು ಬಕ್ರೀದ್ ಹಬ್ಬದ ಪ್ರಮುಖ ಉದ್ದೇಶವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

ಸೌದಿ ಅರೇಬಿಯಾದ ಮಕ್ಕಾದಲ್ಲಿ ನಡೆಯುವ ಪವಿತ್ರ ಹಜ್ ಯಾತ್ರೆಯ ಸಂದರ್ಭದಲ್ಲೇ ಈ ಹಬ್ಬ ಆಚರಿಸಲಾಗುತ್ತಿದ್ದು, ಜೀವನದಲ್ಲಿ ಕನಿಷ್ಠ ಒಂದು ಬಾರಿ ಹಜ್ ಯಾತ್ರೆ ಕೈಗೊಳ್ಳಬೇಕು ಎಂದು ಇಸ್ಲಾಂ ಧರ್ಮ ತಿಳಿಸುತ್ತದೆ ಎಂದರು. ಹಜ್ ವಿಧಿವಿಧಾನಗಳ ಸಮಾಪ್ತಿಯೂ ಈ ಹಬ್ಬದೊಂದಿಗೆ ಸಂಬಂಧ ಹೊಂದಿದೆ ಎಂದು ವಿವರಿಸಿದರು.

ಈ ಸಂದರ್ಭದಲ್ಲಿ ಜಗತ್ತಿನಾದ್ಯಂತ ಸುಖ-ಶಾಂತಿ ನೆಲೆಸಲಿ ಎಂದು ಪ್ರಾರ್ಥನೆ ಸಲ್ಲಿಸಲಾಯಿತು. ಜೊತೆಗೆ ಪವಿತ್ರ ಹಜ್ ಯಾತ್ರೆಗೆ ತೆರಳಿರುವ ಜಮಾತಿನ ಸದಸ್ಯರು ಹಾಗೂ ಎಲ್ಲಾ ಯಾತ್ರಿಕರ ಸುಖಕರ ವಾಪಸ್ಸಿಗಾಗಿ ವಿಶೇಷ ದುವಾ ಮಾಡಲಾಯಿತು.

ಪ್ರತಿ ವರ್ಷದಂತೆ ಹಳೆ ಸಾಗರ ರಸ್ತೆಯಲ್ಲಿ ಈದ್ ನಮಾಝ್ ಆಯೋಜನೆಗೆ ಸಿದ್ಧತೆ ಮಾಡಲಾಗಿದ್ದರೂ, ಮಳೆಯ ಕಾರಣದಿಂದ ಮಸೀದಿಯಲ್ಲೇ ನಮಾಜ್ ನೆರವೇರಿಸಲಾಯಿತು.

ಆಡಳಿತ ಸಮಿತಿಯ ಪದಾಧಿಕಾರಿಗಳು, ಜಮಾತಿನ ಸದಸ್ಯರು, ಸಮುದಾಯದ ಮುಖಂಡರು, ಯುವಕರು ಹಾಗೂ ಮಕ್ಕಳು ಪರಸ್ಪರ ಆಲಿಂಗನ ಮಾಡಿಕೊಂಡು ಬಕ್ರೀದ್ ಶುಭಾಶಯ ವಿನಿಮಯ ಮಾಡಿಕೊಂಡರು.

About The Author