Headlines

ರಿಪ್ಪನ್‌ಪೇಟೆಯಲ್ಲಿ ನಾಳೆಯಿಂದ ಮೂರು ದಿನಗಳ ಕಲಾಕೌಸ್ತುಭ ವಾರ್ಷಿಕೋತ್ಸವ ಹಾಗೂ ಕನ್ನಡ ರಾಜ್ಯೋತ್ಸವ

ರಿಪ್ಪನ್‌ಪೇಟೆಯಲ್ಲಿ ನಾಳೆಯಿಂದ ಮೂರು ದಿನಗಳ ಕಲಾಕೌಸ್ತುಭ ವಾರ್ಷಿಕೋತ್ಸವ ಹಾಗೂ ಕನ್ನಡ ರಾಜ್ಯೋತ್ಸವ ಜಾತ್ರೆ

ರಿಪ್ಪನ್ ಪೇಟೆ : ನವೆಂಬರ್‌ 28ರಿಂದ 30ರವರೆಗೆ ಅವಿರತ ಮೂರು ದಿನಗಳು ರಿಪ್ಪನ್‌ಪೇಟೆ ಸಂಸ್ಕೃತಿಯ ನಾದದಿಂದ ಕೂಗಲಿದ್ದು, ಕಲಾ ಕೌಸ್ತುಭ ಕನ್ನಡ ಸಂಘದ 32ನೇ ವಾರ್ಷಿಕೋತ್ಸವ ಹಾಗೂ 70ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ವೈವಿಧ್ಯಮಯ ಕಾರ್ಯಕ್ರಮಗಳು ಭೂಪಾಳಂ ಚಂದ್ರಶೇಖರಯ್ಯ ಸಭಾಭವನದಲ್ಲಿ ಜರುಗಲಿವೆ ಎಂದು ಸಂಘದ ಅಧ್ಯಕ್ಷ ಮುರುಳಿಧರ ಹಾಗೂ ಕಾರ್ಯದರ್ಶಿ ಬಳೆಗಾರ ರಾಮಚಂದ್ರ ಮಾಹಿತಿ ನೀಡಿದ್ದಾರೆ.

ನ. 28: ರಾಜ್ಯೋತ್ಸವ ಹಬ್ಬದ ಶುಭಾರಂಭ

ಶುಕ್ರವಾರ ಬೆಳಗ್ಗೆ 8.30ಕ್ಕೆ ತಾಯಿ ಭುವನೇಶ್ವರಿ ದೇವಿಯ ಭಾವಚಿತ್ರ ಮೆರವಣಿಗೆ ರಾಜಬೀದಿಯಿಂದ ಆರಂಭಗೊಳ್ಳಲಿದೆ. అనంతరం ಮಾಜಿ ಅಧ್ಯಕ್ಷ ಎಂ.ಬಿ. ಮಂಜುನಾಥ ಅವರಿಂದ ಕನ್ನಡ ಧ್ವಜಾರೋಹಣ ನಡೆದು, ಸಭಾ ಕಾರ್ಯಕ್ರಮದಲ್ಲಿ ಅಧ್ಯಕ್ಷ ಮುರುಳಿಧರ ಕೆರೆಹಳ್ಳಿ ನೇತೃತ್ವ ವಹಿಸುವರು. ಗ್ರಾಮ ಪಂಚಾಯಿತ್ ಅಧ್ಯಕ್ಷೆ ಧನಲಕ್ಷ್ಮಿ, ಉಪಾಧ್ಯಕ್ಷ ಸುಧೀಂದ್ರ ಪೂಜಾರಿ ಹಾಗೂ ಜನಪ್ರತಿನಿಧಿಗಳು ಮುಖ್ಯ ಅತಿಥಿಗಳಾಗಿ ಹಾಜರಾಗುವರು.


ರಾತ್ರಿ 7.30ಕ್ಕೆ ಕಲರ್ಸ್ ಕನ್ನಡ ಖ್ಯಾತಿಯ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ತುಳುನಾಡ ಗಾನಗಂಧರ್ವ ಪುತ್ತೂರು ಜಗದೀಶ್ ಆಚಾರ್ಯ ಮತ್ತು ಬಳಗದವರಿಂದ ಸಂಗೀತ ಗಾನ ಸಂಭ್ರಮ ಜರುಗಲಿದೆ.

ನ. 29: ಜಿಲ್ಲಾ ಮಟ್ಟದ ವಾಲಿಬಾಲ್ ಕ್ರೀಡಾಕೂಟ

ಶನಿವಾರ ಬೆಳಗ್ಗೆ 9.30ಕ್ಕೆ ದಿ. ರಾಮಚಂದ್ರ ಸ್ಮರಣಾರ್ಥ ಜಿಲ್ಲಾ ಮಟ್ಟದ ವಾಲಿಬಾಲ್ ಪಂದ್ಯಾವಳಿಗೆ ನಿವೃತ್ತ ದೈಹಿಕ ಶಿಕ್ಷಣ ಪರಿವೀಕ್ಷಕ ಚಂದ್ರಬಾಬು ಉದ್ಘಾಟನೆ ಮಾಡುವರು. ವಿಜಯಕುಮಾರ ಶೆಟ್ಟಿ, ಅಲೆಕ್ಸ್, ದಿನೇಶ್‌ಗೌಡ, ಗನ್ನಿಸಾಬ್, ಗೌತಮ್, ಖಾದ್ರಿ, ಯೋಗೇಶ್, ಪ್ರಶಾಂತ್ ಮೊದಲಾದವರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.

ಸಂಜೆ 7.30ಕ್ಕೆ ಶಾರದಾಂಬ ಸಾಂಸ್ಕೃತಿಕ ಕಲಾಕೇಂದ್ರ ಬಳಗದಿಂದ ಭರತನಾಟ್ಯ ಹಾಗೂ ಮನೋರಂಜನಾ ಕಾರ್ಯಕ್ರಮ ಪ್ರೇಕ್ಷಕರ ಮನರಂಜನೆಗೆ ಸಜ್ಜಾಗಿದೆ.

ನ. 30: ರಾಜ್ಯೋತ್ಸವ ಸಮಾರೋಪ – ಗಣ್ಯರ ಸಾನ್ನಿಧ್ಯ

ಭಾನುವಾರ ಸಂಜೆ 7.30ಕ್ಕೆ ನಡೆಯುವ ಕನ್ನಡ ರಾಜ್ಯೋತ್ಸವ ಸಮಾರೋಪ ಸಮಾರಂಭವನ್ನು ಶಿವಮೊಗ್ಗ ಲೋಕಸಭಾ ಸದಸ್ಯ ಬಿ.ವೈ. ರಾಘವೇಂದ್ರ ಉದ್ಘಾಟನೆ ಮಾಡುವರು. ಸಂಘದ ಅಧ್ಯಕ್ಷ ಮುರುಳಿಧರ್ ಅಧ್ಯಕ್ಷತೆ ವಹಿಸುವರು.

ವಿವಿಧ ಸ್ಪರ್ಧಾವಿಜೇತರಿಗೆ ಶಾಸಕ ಗೋಪಾಲಕೃಷ್ಣ ಬೇಳೂರು ಬಹುಮಾನ ವಿತರಿಸುವರು.

ಮುಖ್ಯ ಅತಿಥಿಗಳಾಗಿ ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ, ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ, ಮಾಜಿ ಸಚಿವ ಹರತಾಳು ಹಾಲಪ್ಪ, ಶಾಸಕರಾದ ಚನ್ನಬಸಪ್ಪ, ಡಾ. ಧನಂಜಯ ಸರ್ಜಿ, ಡಿ.ಎಸ್. ಅರುಣ್, ಡಿಸಿ ಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ. ಮಂಜುನಾಥಗೌಡ ಸೇರಿದಂತೆ ಗಣ್ಯರು ಹಾಜರಾಗುವರು.

ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು, ರಾಷ್ಟ್ರೀಯ ಕೃಷಿ ಪ್ರಶಸ್ತಿ ಪಡೆದ ರೈತರು, ಕ್ರೀಡಾ–ಸಹಕಾರ ರತ್ನ ಪ್ರಶಸ್ತಿ ವಿಜೇತರು ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧಿಸಿದವರನ್ನು ಸನ್ಮಾನಿಸಲಾಗುವುದು.

ಸಾಂಸ್ಕೃತಿಕ ರಂಗದಲ್ಲಿ ಪರಮಾತ್ಮ ಪಂಜುರ್ಲಿ
ರಾತ್ರಿ 9ಕ್ಕೆ ಮಂಗಳೂರಿನ ಕುಳಾಯಿ ಕಲಾಕುಂಭ ಕಲಾವಿದರಿಂದ ಪೌರಾಣಿಕ ನಾಟಕ ಪರಮಾತ್ಮ ಪಂಜುರ್ಲಿ ಪ್ರದರ್ಶನ ಜರುಗಿ ಕಾರ್ಯಕ್ರಮಕ್ಕೆ ಭವ್ಯ ಅಂತ್ಯ ಕೊಂಡುಕೊಡಲಿದೆ.