RIPPONPETE | ಬೆಳ್ಳೂರು , ಹೆದ್ದಾರಿಪುರ ವ್ಯಾಪ್ತಿಯಲ್ಲಿ ಭಾರಿ ಮಳೆ: ಉಕ್ಕಿ ಹರಿಯುತ್ತಿರುವ ಹಳ್ಳಗಳು , ಜನ ಜೀವನ ಅಸ್ತವ್ಯಸ್ತ
ಶಿವಮೊಗ್ಗ ಜಿಲ್ಲೆಯ ಮಲೆನಾಡು ಭಾಗವಾದ ಹೊಸನಗರ ತಾಲೂಕಿನಲ್ಲಿ ಮಳೆ ಆರ್ಭಟಕ್ಕೆ ಜನ ಕಂಗಾಲಾಗಿದ್ದಾರೆ. ಬಿಡದೇ ಸುರಿಯುತ್ತಿರುವ ಧಾರಾಕಾರ ಮಳೆ ಇದೀಗ ಜನರನ್ನು ಹೈರಾಣು ಮಾಡಿದೆ.
ಹೊಸನಗರದ ಬೆಳ್ಳೂರು , ಹೆದ್ದಾರಿಪುರ ಸೇರಿದಂತೆ ಹಲವು ಗ್ರಾಮಗಳಲ್ಲಿ ಭಾರಿ ಮಳೆಯಾಗಿದ್ದು, ಹಳ್ಳ-ಕೊಳ್ಳಗಳು ಉಕ್ಕಿ ಹರಿಯಲು ಆರಂಭಿಸಿವೆ. ಕೆಲವು ಕಡೆಗಳಲ್ಲಿ ಮಳೆ ನೀರೇ ರಸ್ತೆಗಳ ಮೇಲೆ ಹರಿಯುತ್ತಿದೆ. ಪರಿಣಾಮವಾಗಿ ಸಾರ್ವಜನಿಕರಿಗೆ ಸಂಚಾರ ಕಷ್ಟವಾಗಿದೆ.
ಭತ್ತದ ಗದ್ದೆಗಳು ಸಂಪೂರ್ಣವಾಗಿ ಜಲಾವೃತಗೊಂಡಿದ್ದು, ಬೆಳೆ ನಾಶವಾಗುವ ಆತಂಕ ಮೂಡಿದೆ. ವ್ಯಾಪಾರ, ಶಾಲಾ-ಕಾಲೇಜು ಹಾಗೂ ದಿನಸಿ ಖರೀದಿಗೆ ತೆರಳುವ ಜನಜೀವನವೂ ಅಸ್ತವ್ಯಸ್ತವಾಗಿದೆ.
ಈ ವ್ಯಾಪ್ತಿಯಲ್ಲಿ ಭಾರಿ ಮಳೆಯಾಗುತ್ತಿರುವ ಹಿನ್ನಲೆಯಲ್ಲಿ ಕಾಡಿನೊಳಗಿನ ಹಳ್ಳಗಳು ಭೋರ್ಗರೆದು ಹರಿಯುತ್ತಿದ್ದು, ನದಿಗಳ ನೀರಿನ ಮಟ್ಟವೂ ಗಣನೀಯವಾಗಿ ಏರಿಕೆಗೊಂಡಿದೆ.