RIPPONPETE | ವಿಟಮಿನ್ ಡ್ರಾಪ್ ಯಡವಟ್ಟು : 10ಕ್ಕೂ ಹೆಚ್ಚು ಅಂಗನವಾಡಿ ಮಕ್ಕಳು ಅಸ್ವಸ್ಥ – ಮೆಗ್ಗಾನ್ ಗೆ ರವಾನೆ
ಮಕ್ಕಳಿಗೆ ವಿಟಮಿನ್ ಎ ಡ್ರಾಪ್ ಹಾಕಿದ ನಂತರದಲ್ಲಿ ಈ ರೀತಿಯಾಗಿ ಸಮಸ್ಯೆಯಾಗಿದೆ ಎಂದು ಪೋಷಕರು ಆರೋಪಿಸುತಿದ್ದರೆ ಸ್ಥಳೀಯ ನೀರಿನ ಸಮಸ್ಯೆಯಿಂದ ಮಕ್ಕಳಲ್ಲಿ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿರಬಹುದು ಎಂದು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ಹೇಳುತಿದ್ದಾರೆ.
ರಿಪ್ಪನ್ ಪೇಟೆ : ಇಲ್ಲಿನ ಸಮೀಪದ ಬೆಳ್ಳೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಹಿರೇಸಾನಿ ಗ್ರಾಮದ 10ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥರಾಗಿ ಅವರನ್ನು ಮೆಗ್ಗಾನ್ ಆಸ್ಪತ್ರೆಗೆ ರವಾನಿಸಿರುವ ಘಟನೆ ನಡೆದಿದೆ.
ಹಿರೇಸಾನಿ ಗ್ರಾಮದ 13 ಮಕ್ಕಳಿಗೆ ಮಂಗಳವಾರ ಇರುಳುಗಣ್ಣು ಮುಂಜಾಗ್ರತಾ ಕ್ರಮವಾಗಿ ವಿಟಮಿನ್ ಎ ಡ್ರಾಪ್ ಹಾಕಲಾಗಿದೆ ಅಂದು ಸಂಜೆಯಿಂದ 13 ಮಕ್ಕಳಲ್ಲಿ ಹೊಟ್ಟೆ ನೋವು, ವಾಂತಿ ಕಾಣಿಸಿಕೊಂಡಿದೆ. ಈ ಹಿನ್ನಲೆಯಲ್ಲಿ ಬುಧವಾರ ಪಟ್ಟಣದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿತ್ತು ಆದರೂ ಆರೋಗ್ಯ ಸುಧಾರಿಸದ ಹಿನ್ನಲೆಯಲ್ಲಿ ಇಂದು ಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ 11 ಮಕ್ಕಳನ್ನು ಕರೆತಂದಿದ್ದಾರೆ. ಪಟ್ಟಣದ ಆಸ್ಪತ್ರೆಯಲ್ಲಿ ಮಕ್ಕಳಿಗೆ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗದ ಮೆಗ್ಗಾನ್ ಗೆ ರವಾನಿಸಲಾಗಿದೆ.
ಮಕ್ಕಳಿಗೆ ವಿಟಮಿನ್ ಎ ಡ್ರಾಪ್ ಹಾಕಿದ ನಂತರದಲ್ಲಿ ಈ ರೀತಿಯಾಗಿ ಸಮಸ್ಯೆಯಾಗಿದೆ ಎಂದು ಪೋಷಕರು ಆರೋಪಿಸುತಿದ್ದರೆ ಸ್ಥಳೀಯ ನೀರಿನ ಸಮಸ್ಯೆಯಿಂದ ಮಕ್ಕಳಲ್ಲಿ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿರಬಹುದು ಎಂದು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ಹೇಳುತಿದ್ದಾರೆ.
ತತ್ತಕ್ಷಣ ಸ್ಪಂದಿಸಿದ ಶಾಸಕ ಬೇಳೂರು ಗೋಪಾಲಕೃಷ್ಣ
ಅಸ್ವಸ್ಥರಾಗಿದ್ದ ಅಂಗನವಾಡಿ ಮಕ್ಕಳನ್ನು ಶಿವಮೊಗ್ಗದ ಮೆಗ್ಗಾನ್ ಗೆ ರವಾನಿಸಲು ಪಟ್ಟಣದ ಆಂಬುಲೆನ್ಸ್ ಬೇರೆ ಪ್ರಕರಣದ ಹಿನ್ನಲೆಯಲ್ಲಿ ಶಿವಮೊಗ್ಗಕ್ಕೆ ತೆರಳಿತ್ತು ಹಾಗಾಗಿ ಹೊಸನಗರದಿಂದ ಆಂಬುಲೆನ್ಸ್ ಬರಬೇಕಾಗಿತ್ತು. ಆಂಬುಲೆನ್ಸ್ ಲಭ್ಯವಿಲ್ಲದೇ ವಿಳಂಬವಾದ ಹಿನ್ನಲೆಯಲ್ಲಿ ಮಕ್ಕಳ ಪೋಷಕರು ಆತಂಕಗೊಳಗಾಗಿದ್ದರು ಈ ಸಂಧರ್ಭದಲ್ಲಿ ವಿಷಯ ತಿಳಿದ ಶಾಸಕ ಬೇಳೂರು ಗೋಪಾಲಕೃಷ್ಣ ಖಾಸಗಿ ಆಂಬುಲೆನ್ಸ್ ವ್ಯವಸ್ಥೆ ಮಾಡುವ ಮೂಲಕ ಮಕ್ಕಳನ್ನು ಮೆಗ್ಗಾನ್ ಗೆ ಕಳುಹಿಸಿಕೊಟ್ಟರು.ಹಾಗೂ ಮೆಗ್ಗಾನ್ ನ ವೈದ್ಯಾಧಿಕಾರಿಗಳಿಗೆ ದೂರವಾಣಿ ಕರೆ ಮೂಲಕ ಅಸ್ವಸ್ಥ ಮಕ್ಕಳಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ಸೂಚಿಸಿದರು.