ಆಯನೂರಿನಲ್ಲಿ “ಚೈತನ್ಯ ಅನ್ನ” ಕಾರ್ಯಕ್ರಮ
ಶಿವಮೊಗ್ಗ: ನಗರದ ಆಲ್ಕೊಳದಲ್ಲಿರುವ ದಿ ಶಿವಮೊಗ್ಗ ಮಲ್ಟಿಪರ್ಪಸ್ ಸೋಶಿಯಲ್ ಸರ್ವಿಸ್ ಸೊಸೈಟಿ(ರಿ) ಹಾಗೂ ಸ್ತ್ರೀಬಂಧು ಸ್ವ ಸಹಾಯ ಸಂಘಗಳ ಒಕ್ಕೂಟ ಆಯನೂರು ಇವರ ಸಹಯೋಗದಲ್ಲಿ ಒಕ್ಕೂಟ ವ್ಯಾಪ್ತಿಯ ಸಂಘಗಳ ಸದಸ್ಯರ ಹುಟ್ಟುಹಬ್ಬದ ಪ್ರಯುಕ್ತ ಆಯನೂರು ಬಸ್ ನಿಲ್ದಾಣದ ಆವರಣದಲ್ಲಿ ಸಾರ್ವಜನಿಕರಿಗಾಗಿ ಚೈತನ್ಯ ಅನ್ನ ಕಾರ್ಯಕ್ರಮವನ್ನು ನಡೆಸಲಾಯಿತು.
ಆಯನೂರು ಗ್ರಾಮ ಪಂಚಾಯಿತಿಯ ಅಧ್ಯಕ್ಷ ಗಂಗಾ ನಾಯ್ಕ ಮಾತನಾಡಿ, ಹಸಿದವರಿಗಾಗಿ ಅನ್ನ ಕಾರ್ಯಕ್ರಮ ಏರ್ಪಡಿಸಿರುವುದು ವಿನೂತನ ಕಾರ್ಯಕ್ರಮವಾಗಿದೆ. ಬಡಮಹಿಳೆಯರು ಇಂಥ ಕಾರ್ಯಕ್ರಮ ಆಯೋಜಿಸಿರುವುದು ವಿಶೇಷವಾಗಿದೆ. ಪ್ರತಿಯೊಬ್ಬರೂ ತಮ್ಮ ತಮ್ಮ ಹುಟ್ಟುಹಬ್ಬದ ದಿನದಂದು ಅನಗತ್ಯ ಖರ್ಚುಮಾಡದೇ ಹಸಿದವರಿಗೆ ಒಂದು ದಿನ ಅನ್ನ ನೀಡುವುದರ ಮೂಲಕ ಆಚರಣೆ ಮಾಡುತ್ತಿರುವ ಈ ಕಾರ್ಯಕ್ರಮ ಪ್ರತಿಯೊಬ್ಬರಿಗೂ ಮಾದರಿಯಾಗಿದೆ ಎಂದರು.
ಸಂಸ್ಥೆಯ ನಿರ್ದೇಶಕ ಫಾದರ್ ಪಿಯುಸ್ ಡಿಸೋಜಾ ಮಾತನಾಡಿ, ದಾನಗಳಲ್ಲಿ ಶ್ರೇಷ್ಟವಾದ ದಾನ ಎಂದರೆ ಅನ್ನದಾನ. ಹಸಿದವರಿಗೆ ಮುಖ್ಯವಾಗಿ ಬೇಕಾಗಿರುವುದು ಅನ್ನ. ಯಾವುದೇ ಜಾತಿ, ಮತ, ವರ್ಣ, ಧರ್ಮ ಬೇಧವಿಲ್ಲದೆ ಅನ್ನದಾನ ಮಾಡುವುದು ಪುಣ್ಯದ ಕೆಲಸವಾಗಿದೆ ಎಂದರು. ಈ ದಿನ ಆಯನೂರು ಸ್ತ್ರೀಬಂಧು ಸ್ವಸಹಾಯ ಸಂಘಗಳ ಒಕ್ಕೂಟದ ಪದಾಧಿಕಾರಿಗಳು ಮತ್ತು ಪ್ರತಿನಿಧಿಗಳು ಹಮ್ಮಿಕೊಂಡಿರುವ ಈ ಕಾರ್ಯಕ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಒಕ್ಕೂಟದ ಅಧ್ಯಕ್ಷೆ ಶಗುಫ್ತಾ ಖಾನ್ ಹಾಗೂ ಒಕ್ಕೂಟದ ಪ್ರತಿನಿಧಿಗಳು, ಪದಾಧಿಕಾರಿಗಳು ಮತ್ತು ಸಂಘಗಳ ಸ್ವಯಂ ಸೇವಕರು ಹಾಜರಿದ್ದರು ಹಾಗೂ ಸಂಸ್ಥೆಯ ಮಹಿಳಾ ಸಬಲೀಕರಣ ಯೋಜನೆಯ ಸಂಯೋಜಕರು, ಕಾರ್ಯಕರ್ತರು ಹಾಗೂ ಸಂಸ್ಥೆಯ ಸಿಬ್ಬಂದಿಗಳು ಹಾಜರಿದ್ದರು.