ಆಗುಂಬೆಯಲ್ಲಿ 184 ಮಿಮೀ ಮಳೆ : ತುಂಗಾ ಜಲಾಶಯ ಭರ್ತಿ
ಶಿವಮೊಗ್ಗ : ಮಲೆನಾಡಿನಲ್ಲಿ ಮುಂಗಾರು ಚುರುಕಾಗಿದೆ. ನದಿ, ಹಳ್ಳ, ಕೆರೆಗಳು ತುಂಬಲಾರಂಭಿಸಿದೆ. ಈಗಾಗಲೇ ತುಂಗ ನದಿ ಜಲಾಶಯ ಭರ್ತಿಯಾಗಿದೆ. ಅದರಂತೆ ಲಿಂಗನಮಕ್ಕಿ ಜಲಾಶಯಕ್ಕೆ ಒಳಹರಿವು ತೀವ್ರಗೊಂಡಿದೆ.
ಕಳೆದ 24 ಗಂಟೆಯಲ್ಲಿ ಆಗುಂಬೆಯಲ್ಲಿ ಅತಿಹೆಚ್ಚಿನ ಮಳೆಯಾಗಿರುವುದು ದಾಖಲಾಗಿದೆ. ಆಗುಂಬೆಯಲ್ಲಿ 184.5 ಮಿಮಿ ಮಳೆಯಾದರೆ, ಶೃಂಗೇರಿಯಲ್ಲಿ 102.02 ಮಿಮಿ, ಹುಂಚದಕಟ್ಟೆ 67 ಮಿಮಿ, ತ್ಯಾಗರ್ತಿ 18.4 ಮಿಮಿ, ಭದ್ರಾವತಿಯಲ್ಲಿ 15.8 ಮಳೆಯಾಗಿದೆ. ಆಗುಂಬೆನೇ ರಾಜ್ಯದಲ್ಲಿ ಅತಿ ಹೆಚ್ಚು ಮಳೆಯಾಗಿದೆ. ಇದು ಬಿಟ್ಟರೆ ಕೊಡಗಿನ ಭಾಗಮಂಡಲದಲ್ಲಿ 168 .2 ಮಿಮಿ ಮಳೆಯಾಗಿದೆ.
ಜಿಲ್ಲೆಯಲ್ಲಿ ಪ್ರಮುಖ ಜಲಾಶಯಗಳಾದ ತುಂಗ, ಭದ್ರ ಮತ್ತು ಲಿಂಗನಮಕ್ಕಿಗಳಿಗೆ ನೀರಿನ ಒಳಹರಿವು ಹೆಚ್ಚಾಗಿದೆ. ತುಂಗ ಜಲಾಶಯ ಭರ್ತಿಯಾಗಿ ನದಿಗೆ ನೀರು ಹರಿಸಲಾಗಿದೆ. 588.24 ಅಡಿ ಜಲಾಶಯದ ಸಾಮರ್ಥ್ಯವಿದ್ದು 588.24 ಅಡಿ ನೀರು ಸಂಗ್ರಹವಾಗಿದೆ. ಭದ್ರದಲ್ಲಿ 186 ಅಡಿ ಸಾಮರ್ಥ್ಯದ ಜಲಾಶಯದಲ್ಲಿ 136 ಅಡಿ ನೀರು ಸಂಗ್ರಹವಾಗಿದೆ. ಲಿಂಗನಮಕ್ಕಿಗೆ 10,900 ಕ್ಯೂಸೆಕ್ ನೀರು ಹರಿದು ಬರುತ್ತಿದೆ.
1819 ಅಡಿ ಸಾಮರ್ಥ್ಯ ಲಿಂಗನ ಮಕ್ಕಿಯಲ್ಲಿ ಇಂದು 1764 ಅಡಿ ನೀರು ಸಂಗ್ರಹವಾಗಿದೆ. ಕಳೆದ ವರ್ಷ ಜೂನ್ ಅಂತ್ಯಕ್ಕೆ ಜಲಾಶಯದ ಸಾಮರ್ಥ್ಯ ಇಷ್ಟಿತ್ತೆಂದು ತಿಳಿದುಬಂದಿದೆ.
ಮುಂಗಾರು ಚುರುಕಾಗುವ ಸಾಧ್ಯತೆ
ಮಲೆನಾಡು ಮತ್ತು ಕರಾವಳಿಯಲ್ಲಿ ಮುಂದಿನ ಮೂರು ದಿನ ಮುಂಗಾರು ಚುರುಕಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಮಾನ ಇಲಾಖೆಯ ಹಿರಿಯ ವಿಜ್ಞಾನಿ ಸಿಎಸ್ ಪಾಟೀಲ್ ತಿಳಿಸಿದ್ದಾರೆ.