ಗಂಡ ಬುದ್ಧಿವಾದ ಹೇಳಿದ್ದೇ ತಪ್ಪಾಯ್ತಾ?: ಪತಿ ಕತ್ತಿಗೆ ಚಾಕು ಇರಿದ ಪತ್ನಿ
ಪತ್ನಿಯೇ ಪತಿ ಕತ್ತಿಗೆ ಚಾಕು ಹಾಕಿ ಕೊಲೆಗೆ ಯತ್ನಿಸಿರುವಂತಹ ಘಟನೆ ವಿಜಯಪುರ ನಗರದಲ್ಲಿ ನಡೆದಿದೆ.
ನಸುಕಿನ ಜಾವ ನಗರದ ಆಲಕುಂಟೆ ನಗರದಲ್ಲಿರುವ ಮನೆಯಲ್ಲಿ ಪತ್ನಿ ತೇಜು ರಾಠೋಡ್ ಎಂಬಾಕೆ ತನ್ನ ಪತಿ ಅಜೀತ್ ರಾಠೋಡ್ ನನ್ನು ಕೊಲೆ ಮಾಡಲು ಮುಂದಾಗಿದ್ದಾಳೆ. ಪತಿ ಗಾಢ ನಿದ್ರೆಯಲ್ಲಿದ್ದಾಗ ಚಾಕುವಿನಿಂದ ಕತ್ತಿಗೆ ಬಲವಾಗಿ ಇರಿದಿದ್ದಾಳೆ.
ಘಟನೆ ವೇಳೆ ಅಜೀತ್ ಕಿರುಚಿಕೊಂಡಾಗ ಮನೆಯವರಿಗೆ ವಿಷಯ ಗೊತ್ತಾಗಿದೆ. ಕೂಡಲೇ ಅವರನ್ನು ನಗರ ಬಿಎಲ್ಡಿಇ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗಿದೆ. ಅಜೀತ್ ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.
ಇನ್ನು ಘಟನೆಗೆ ಕಾರಣ ಪತ್ನಿ ತೇಜುಗೆ ಬುದ್ದಿಮಾತು ಹೇಳಿದ್ದೇ ಅಜೀತ್ ಪ್ರಾಣಕ್ಕೆ ಸಂಚಕಾರ ತಂದಿದೆ ಎನ್ನಲಾಗಿದೆ. ಸದಾಕಾಲ ಮೊಬೈಲ್ನಲ್ಲಿ ಬೇರೆಯವರೊಂದಿಗೆ ಚಾಟ್ ಮಾಡುತ್ತಿದ್ದ ತೇಜುಗೆ ಚಾಟ್ ಮಾಡಬೇಡ ಬುದ್ದಿ ಮಾತು ಹೇಳಿದ್ದಕ್ಕೆ ಪತಿ ಅಜೀತ್ ಮೇಲೆ ಸಿಟ್ಟಾಗಿ ಇಂತ ದುಸ್ಸಾಹಸ ಮಾಡಿದ್ದಾಳೆ.
ಸದ್ಯ ಸ್ಥಳಕ್ಕೆ ಡಿವೈಎಸ್ಪಿ ಬಸವರಾಜ ಯಲಿಗಾರ ಹಾಗೂ ಇತರೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.
ಆದರ್ಶನಗರ ಪೊಲೀಸರು ತೇಜುಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಪೊಲೀಸರ ತನಿಖೆಯಲ್ಲಿ ಹೆಚ್ಚಿನ ಮಾಹಿತಿ ಲಭ್ಯವಾಗುವ ಸಾಧ್ಯತೆ ಇದೆ. ಆದರ್ಶ ನಗರ ಪೊಲೀಸ್ ಠಾಣಾ ವ್ಯಾಪ್ತಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆದಿದೆ.