ಜಮೀನು ಮಾರಲು ಬಿಡದ ತಂದೆ-ತಾಯಿಯನ್ನು ಟ್ರ್ಯಾಕ್ಟರ್ನಿಂದ ಚೇಸ್ ಮಾಡಿ ಬರ್ಬರವಾಗಿ ಕೊಂದ ಮಗ
ಮಾನವ ಕುಲ ತಲೆ ತಗ್ಗಿಸುವಂತಹ ಅಮಾನವೀಯ ಹಾಗೂ ಕ್ರೂರ ಘಟನೆಯೊಂದು ನಡೆದಿದೆ. ಮಗನೊಬ್ಬ ಆಸ್ತಿಗಾಗಿ ತನ್ನ ಹೆತ್ತ ತಂದೆ-ತಾಯಿಯನ್ನೇ ಟ್ರ್ಯಾಕ್ಟರ್ನಿಂದ ಬೆನ್ನಟ್ಟಿ, ಡಿಕ್ಕಿ ಹೊಡೆದು ಬರ್ಬರವಾಗಿ ಕೊಲೆ ಮಾಡಿದ್ದಾನೆ.
ಈ ಘಟನೆ ಆಂಧ್ರ ಪ್ರದೇಶದ ವಿಜಯನಗರಂ ಜಿಲ್ಲೆಯ ಪುಸಪತಿರೇಗ ಮಂಡಲದಲ್ಲಿ ನಡೆದಿದೆ. ಚಲ್ಲವನಿಪೇಟ ಪಂಚಾಯಿತಿಯ ನಡುಪುರಿ ಕಲ್ಲಾಲು ಗ್ರಾಮದ ಅಪ್ಪಲನಾಯ್ಡು (55) ಮತ್ತು ಜಯಾ (45) ದಂಪತಿಗೆ ರಾಜಶೇಖರ್ ಎಂಬ ಮಗ ಮತ್ತು ರಾಧಾ ಕುಮಾರಿ ಎಂಬ ಮಗಳಿದ್ದಾರೆ. ರಾಧಾ ಕುಮಾರಿ ಕೆಲವು ವರ್ಷಗಳ ಹಿಂದೆ ವಿವಾಹವಾದರು. ಮದುವೆಯ ಸಮಯದಲ್ಲಿ, ಆಕೆಯ ಪಾಲಕರು ತಮ್ಮ ಒಂದು ಎಕರೆ ಭೂಮಿಯಲ್ಲಿ 20 ಸೆಂಟ್ಸ್ ಅನ್ನು ಆಕೆಗೆ ನೀಡಿದರು.
ಆದರೆ, ರಾಧಾ ಅವರ ಪತಿ ಅನಾರೋಗ್ಯದಿಂದ ಹಠಾತ್ತನೆ ನಿಧನರಾದರು. ಅಂದಿನಿಂದ ಅಪ್ಪಲನಾಯ್ಡು ಮತ್ತು ಜಯಾ, ತಮ್ಮ ಮಗಳು ರಾಧಾಗೆ ಬೆಂಬಲವಾಗಿ ನಿಂತರು. ಮಗ ರಾಜಶೇಖರ್ ಟ್ರ್ಯಾಕ್ಟರ್ ಚಾಲಕನಾಗಿ ಕೆಲಸ ಮಾಡುತ್ತಿದ್ದ. ಎರಡು ವರ್ಷಗಳ ಹಿಂದೆ ನೆಲ್ಲಿಮರ್ಲ ಮಂಡಲದ ವಲ್ಲಾಪುರದ ಯುವತಿಯನ್ನು ಆತ ವಿವಾಹವಾದನು.
ಮದುವೆಯ ನಂತರ ರಾಜಶೇಖರ್, ಕೆಟ್ಟ ಅಭ್ಯಾಸಗಳಿಗೆ ವ್ಯಸನಿಯಾಗಿ ಸಾಲದ ಸುಳಿಗೆ ಸಿಲುಕಿದನು. ಒಂದೆಡೆ, ಪತಿಯ ಮರಣದ ನಂತರ ತಮ್ಮ ಮೇಲೆ ಅವಲಂಬಿತರಾಗಿದ್ದ ಮಗಳ ಜೀವನ, ಮತ್ತೊಂದೆಡೆ, ಕೆಟ್ಟ ಅಭ್ಯಾಸಗಳಿಂದಾಗಿ ಸಾಲದಲ್ಲಿದ್ದ ತಮ್ಮ ಮಗನನ್ನು ನೋಡಿ ಅಪ್ಪಲನಾಯ್ಡು ದಂಪತಿ ಕಂಗಾಲಾದರು.
ಅಪ್ಪಲನಾಯ್ಡು ತಮ್ಮ 80 ಸೆಂಟ್ಸ್ ಭೂಮಿಯಲ್ಲಿ 20 ಸೆಂಟ್ಸ್ ಅನ್ನು ರಾಧಾ ಅವರ ವಿವಾಹದ ಸಮಯದಲ್ಲಿ ವರದಕ್ಷಿಣೆಯಾಗಿ ನೀಡಿದ್ದರು. ತಮ್ಮ ಮಗ ಕೆಟ್ಟ ಅಭ್ಯಾಸಗಳಿಗೆ ವ್ಯಸನಿಯಾಗಿದ್ದರಿಂದ, ಉಳಿದ ಭೂಮಿಯನ್ನು ಯಾವುದೇ ಸಮಯದಲ್ಲಿ ಮಾರಾಟ ಮಾಡಬಹುದು ಎಂದು ಅರಿತುಕೊಂಡ ಅಪ್ಪಲನಾಯ್ಡು ದಂಪತಿ, ತಮ್ಮ ಮಗಳು ರಾಧಾ ಹೆಸರಿಗೆ ಇನ್ನೂ 30 ಸೆಂಟ್ಸ್ ಭೂಮಿಯನ್ನು ನೋಂದಾಯಿಸಿದರು.
ತಮ್ಮ 80 ಸೆಂಟ್ಸ್ ಭೂಮಿಯಲ್ಲಿ 50 ಸೆಂಟ್ಸ್ ಭೂಮಿಯನ್ನು ತಮ್ಮ ಮಗಳು ರಾಧಾಗೆ ನೀಡಿದರು. ಇದನ್ನು ತಿಳಿದ ಮಗ ರಾಜಶೇಖರ್, ನೋಂದಾಯಿಸಿದ್ದ ಭೂಮಿಯನ್ನು ಹಿಂದಿರುಗಿಸುವಂತೆ ರಾಧಾ ಜೊತೆ ಆಗಾಗ ಜಗಳವಾಡುತ್ತಿದ್ದ. ಆದಾಗ್ಯೂ, ಅಪ್ಪಲನಾಯ್ಡು ಮಾತ್ರ ಇದಕ್ಕೆ ಒಪ್ಪಿಗೆ ನೀಡಲಿಲ್ಲ. ಇದೇ ಸಂದರ್ಭದಲ್ಲಿ, ಸಾಲದ ಹೊರೆಯನ್ನು ಹೊರಲು ಸಾಧ್ಯವಾಗದೆ, ತಂದೆ ಅಪ್ಪಲನಾಯ್ಡು ಬಳಿಯಿದ್ದ ಭೂಮಿಯನ್ನು ಮಾರಾಟ ಮಾಡಲು ರಾಜಶೇಖರ್ ನಿರ್ಧರಿಸಿದ. ಹೀಗಾಗಿ, ಜೆಸಿಬಿ ಮತ್ತು ಟ್ರ್ಯಾಕ್ಟರ್ ಸಹಾಯದಿಂದ ಜಮೀನಿನಲ್ಲಿ ಕೆಲಸ ಮಾಡಿ ಭೂಮಿಯನ್ನು ಸಮತಟ್ಟು ಮಾಡುತ್ತಿದ್ದ.
ಜಮೀನನ್ನು ಮಾರಾಟ ಮಾಡಲು ಜಮೀನಿನಲ್ಲಿ ಮಗ ಕೆಲಸ ಮಾಡುತ್ತಿದ್ದಾನೆ ಎಂಬುದು ಅಪ್ಪಲನಾಯ್ಡು ದಂಪತಿಗೆ ತಿಳಿದಾಗ, ಅವರು ಜಮೀನಿನ ಬಳಿಗೆ ಬಂದು ಮಗಳು ರಾಧಾಗೆ ನೀಡಿದ್ದ ಜಮೀನನ್ನು ಸಮತಟ್ಟು ಮಾಡದಂತೆ ತಡೆದರು. ಈ ವೇಳೆ ರಾಜಶೇಖರ್ ತನ್ನ ಪಕ್ಕದಲ್ಲಿದ್ದ ಟ್ರ್ಯಾಕ್ಟರ್ ಹತ್ತಿ ಅವರ ಮೇಲೆ ಹಲ್ಲೆ ಮಾಡಲು ಯತ್ನಿಸಿದ. ಪರಿಸ್ಥಿತಿ ನೋಡಿ ಪಾಲಕರು ಅಲ್ಲಿಂದ ಓಡಿ ಹೋಗಿ ರಾಜಶೇಖರ್ನಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದರು. ಆದರೆ, ರಾಜಶೇಖರ್ ಹಿಂದೆ ಸರಿಯದೇ, ಅವರನ್ನು ಚೇಸ್ ಮಾಡಿ, ಡಿಕ್ಕಿ ಹೊಡೆಯಲು ಪ್ರಯತ್ನಿಸಿದ. ಪರಿಸ್ಥಿತಿ ವಿಕೋಪಕ್ಕೆ ಹೋಗಿರುವುದನ್ನು ನೋಡಿ, ಆತನ ಪಾಲಕರು ಕೈ ಎತ್ತಿ ಮಗ ರಾಜಶೇಖರ್ಗೆ ತಮ್ಮನ್ನು ಬಿಟ್ಟು ಬಿಡುವಂತೆ ಬೇಡಿಕೊಂಡರು. ಆದರೆ, ಸ್ವಲ್ಪವೂ ಕದಲದ ರಾಜಶೇಖರ್, ಟ್ರ್ಯಾಕ್ಟರ್ನಿಂದ ಪೋಷಕರ ಮೇಲೆ ಡಿಕ್ಕಿ ಹೊಡೆದು, ಅತ್ಯಂತ ಕ್ರೂರವಾಗಿ ಕೊಂದಿದ್ದಾನೆ.
ಇಡೀ ಘಟನೆ ಕೆಲವೇ ಕ್ಷಣಗಳಲ್ಲಿ ಸಂಭವಿಸಿದೆ. ಅದೇ ಸಮಯದಲ್ಲಿ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ಇತರರು ಘಟನೆಯನ್ನು ನೋಡಿ ಭಯಭೀತರಾಗಿ ಓಡಿಹೋದರು. ತಕ್ಷಣ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದರು. ಮಾಹಿತಿ ಪಡೆದ ನಂತರ, ಪೊಲೀಸರು ಸ್ಥಳಕ್ಕೆ ತಲುಪಿ ಪ್ರಕರಣ ದಾಖಲಿಸಿಕೊಂಡು ಆರೋಪಿ ರಾಜಶೇಖರ್ಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಅಪ್ಪಲನಾಯ್ಡು ದಂಪತಿಯ ಶವಗಳನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.