Pahalgam attack: ಕೇರಳ ಪ್ರವಾಸಿಗರ ಜೀವ ಉಳಿಸಿದ ಉಪ್ಪು – ಢಾಬಾ ಮಾಲೀಕನ ಹಠಮಾರಿತನಕ್ಕೆ 11 ಮಂದಿ ಬಚಾವ್!

Pahalgam attack: ಕೇರಳ ಪ್ರವಾಸಿಗರ ಜೀವ ಉಳಿಸಿದ ಉಪ್ಪು – ಢಾಬಾ ಮಾಲೀಕನ ಹಠಮಾರಿತನಕ್ಕೆ 11 ಮಂದಿ ಬಚಾವ್!

ಕಾಶ್ಮೀರದ ಪಹಲ್ಗಾಮ್ ನಲ್ಲಿ ನಡೆದ ಉಗ್ರ ದಾಳಿ ಪ್ರಕರಣದ ಬಳಿಕ ಇದಕ್ಕೆ ಹೊಂದಿಕೊಂಡಂತೆ ದಿನಕ್ಕೊಂದು ರೋಚಕ ಕಥಾನಕಗಳು ಬೆಳಕಿಗೆ ಬರುತ್ತಿದ್ದು, ಇದೀಗ ಇದೇ ಕಾಶ್ಮೀರದ ಡಾಬಾ ಮಾಲೀಕನ ಹಠಮಾರಿತನದಿಂದಾಗಿ 11 ಮಂದಿ ಪ್ರವಾಸಿಗರು ಜೀವಉಳಿಸಿಕೊಂಡ ರೋಚಕ ಘಟನೆ ಬೆಳಕಿಗೆ ಬಂದಿದೆ.

ಅಚ್ಚರಿಯಾದರೂ ಇದು ಸತ್ಯ.. ಊಟ ಮಾಡಲೆಂದು ಕಾಶ್ಮೀರದ ಡಾಬಾಗೆ ಹೋಗಿದ್ದ ಕೇರಳದ 11 ಮಂದಿಯ ಪ್ರವಾಸಿಗರ ತಂಡ ಅಲ್ಲಿ ಮಟನ್ ತಿನಿಸಿನಲ್ಲಿ ಉಪ್ಪು ಜಾಸ್ತಿಯಾಗಿದೆ ಎಂದು ಜಗಳ ಮಾಡಿದ್ದು, ಇದೇ ಜಗಳದಿಂದಾಗಿ ಅವರು ಉಗ್ರ ದಾಳಿ ನಡೆದ ಪಹಲ್ಗಾಮ್ ಗೆ ತಡವಾಗಿ ಹೋಗಿದ್ದಾರೆ. ಇವರು ಹೋಗುವ ಹೊತ್ತಿಗೆ ಅಲ್ಲಿ ಉಗ್ರ ದಾಳಿಯಾದ ಕುರಿತು ಮಾಹಿತಿ ಲಭ್ಯವಾಗಿದ್ದು, ಇದರಿಂದಾಗಿ ಇಡೀ ಪ್ರವಾಸಿಗರ ತಂಡವೇ ಹೌಹಾರಿದೆ.

ಕೇರಳ ಮೂಲದ 11 ಮಂದಿ ಪ್ರವಾಸಿಗರ ತಂಡ ಕಾಶ್ಮೀರಕ್ಕೆ ಭೇಟಿ ನೀಡಲು ಬಂದಿತ್ತು. ಭಯೋತ್ಪಾದಕ ದಾಳಿಯ ದಿನದಂದು ಕೊಚ್ಚಿಯ ನಿವಾಸಿ ಲಾವಣ್ಯ ಮತ್ತು ಅವರ ಕುಟುಂಬದ ಇತರ 10 ಸದಸ್ಯರು ಪಹಲ್ಗಾಮ್‌ಗೆ ಹೋಗುತ್ತಿದ್ದರು. ಶ್ರೀನಗರ ತಲುಪಿದ ಕುಟುಂಬವು ಪಹಲ್ಗಾಮ್‌ಗೆ ಹೋಗುವ ಮೊದಲು ಎರಡು ದಿನಗಳ ಕಾಲ ಸ್ಥಳೀಯ ತಾಣಗಳಿಗೆ ಭೇಟಿ ನೀಡಿತು. ಈ ಕುಟುಂಬದ ಗುಂಪಿನಲ್ಲಿ ಲಾವಣ್ಯ, ಅವರ ಪತಿ ಆಲ್ಬಿ ಜಾರ್ಜ್, ಅವರ ಮೂವರು ಮಕ್ಕಳು, ಅವರ ಪತಿಯ ಪೋಷಕರು, ಸೋದರಸಂಬಂಧಿ ಮತ್ತು ಅವರ ಕುಟುಂಬ ಇತ್ತು.

ಜೀವ ಉಳಿಸಿದ ಉಪ್ಪು

ಪಹಲ್ಗಾಮ್ ನಲ್ಲಿ ಸಾಕಷ್ಟು ತಾಣಗಳಿವೆ ಎಂದು ಸ್ಥಳೀಯರು ಹೇಳಿದ್ದರು. ಹೀಗಾಗಿ ನಾವು ಪಹಲ್ಗಮ್ ಅನ್ನು ಹೆಚ್ಚು ವಿವರವಾಗಿ ನೋಡಬೇಕೆಂದು ಬಯಸಿದ್ದರಿಂದ ಪಹಲ್ಗಮ್‌ಗೆ ಎರಡು ದಿನಗಳ ಪ್ರವಾಸವನ್ನು ಯೋಜಿಸಿದ್ದೆವು. ನಾವು ಬೈಸರಣ್ ವ್ಯಾಲಿಯಲ್ಲಿ ಮೇಲಕ್ಕೆ ಹೋಗುತ್ತಿದ್ದೆವು ಮತ್ತು ಅಲ್ಲಿಂದ ಕೇವಲ ಎರಡು ಕಿಲೋಮೀಟರ್ ದೂರದಲ್ಲಿದ್ದಾಗ ಊಟಕ್ಕೆ ಎಂದು ಒಂದು ಢಾಬಾದಲ್ಲಿ ನಿಂತೆವು. ಅಂದು ಢಾಬಾದಲ್ಲಿ ನಾವು ಒಂದಷ್ಟು ತಿನಿಸುಗಳನ್ನು ಆರ್ಡರ್ ಮಾಡಿದೆವು. ಈ ಪೈಕಿ ಮಟನ್ ರೋಗನ್ ಜೋಶ್‌ ಕೂಡ ಒಂದಾಗಿತ್ತು. ಆದರೆ ಅದರಲ್ಲಿ ಹೆಚ್ಚು ಉಪ್ಪು ಸೇರಿತ್ತು. ಈ ಬಗ್ಗೆ ನಮ್ಮ ಪತಿ ಢಾಮಾ ಮಾಲೀಕರ ಗಮನಕ್ಕೆ ತಂದರು ಎಂದು ಲಾವಣ್ಯ ಹೇಳಿದ್ದಾರೆ.

ಢಾಬಾ ಮಾಲೀಕನ ಹಠಮಾರಿ ತನ

ಬಳಿಕ ರೆಸ್ಟೋರೆಂಟ್ ಮಾಲೀಕ ಪ್ರವಾಸಿಗರಿಗೆ ಸಮಜಾಯಿಷಿ ನೀಡಿದನಾದರೂ, ತಪ್ಪು ತನ್ನ ಹೊಟೆಲ್ ಸಿಬ್ಬಂದಿಗಳದ್ದೇ ಆದ್ದರಿಂದ ಅವರಿಗೆ ಮತ್ತೆ ಮಟನ್ ರೆಸಿಪಿ ನೀಡುವುದಾಗಿ ಹೇಳಿದ್ದಾನೆ. ಈ ವೇಳೆ ಆ ಪ್ರವಾಸಿಗರು ಬೇಡ ಎಂದು ಹೊರಡಲು ನಿಂತರೂ ಇದಕ್ಕೆ ಒಪ್ಪಂದ ರೆಸ್ಟೋರೆಂಟ್ ಮಾಲೀಕ ಇಲ್ಲ ನೀವು ನಮ್ಮ ಅತಿಥಿಗಳು ನಿಮಗೆ ತೊಂದರೆಯಾದರೆ ನಮಗೆ ಒಳ್ಳೆಯದಾಗುವುದಿಲ್ಲ ಎಂದು ಹೇಳಿ ಮತ್ತೆ ಮಟನ್ ರೋಗನ್ ಜೋಶ್‌ ರೆಸಿಪಿಯನ್ನು ಮತ್ತೆ ಸಿದ್ಧಪಡಿಸಲು ಹೇಳಿದ್ದಾನೆ. ಇದರಿಂದಾಗಿ ಮತ್ತೊಂದುಷ್ಟು ಸಮಯ ಈ ಕುಟುಂಬ ಅದೇ ಡಾಬಾದಲ್ಲೇ ಕಳೆಯಬೇಕಾಯಿತು. ನಾವು ಮತ್ತೆ ಊಟ ಮಾಡಲು ಪ್ರಾರಂಭಿಸಿದಾಗ, 10-20 ಕುದುರೆಗಳು ಕೆಳಗೆ ಓಡುತ್ತಿರುವುದನ್ನು ನೋಡಿದೆವು. ಪ್ರಾಣಿಗಳು ಹೆದರುತ್ತಿದ್ದರಿಂದ ಏನೋ ತಪ್ಪಾಗಿದೆ ಎಂದು ನಮಗೆ ಅನಿಸಿತು. ನಾವು ಮೊದಲು ಭೂಕುಸಿತವಾಗಿರಬಹುದು ಎಂದು ಭಾವಿಸಿದ್ದೆವು.

ಹೊಗಬೇಡಿ ಎಂದು ಕೈ ಸನ್ಹೆ ಮಾಡಿದ್ದ ಪ್ರವಾಸಿಗರು

ಇದಾದ ಬೆನ್ನಲ್ಲೇ ಅದೇ ಮಾರ್ಗದಲ್ಲಿ ವಾಹನಗಳಲ್ಲಿ ಬಂದ ಇತರೆ ಪ್ರವಾಸಿಗರು ಕೈ ಸನ್ನೆಗಳೊಂದಿಗೆ ಹೋಗದಂತೆ ನಮಗೆ ಹೇಳಿದರು. ಸಿಆರ್‌ಪಿಎಫ್ ಮತ್ತು ಪ್ರವಾಸಿಗರ ನಡುವೆ ಏನೋ ಸಂಘರ್ಷವಾಗಿದೆ ಎಂದು ಹೇಳಿದರು. ಈ ಬೆಳವಣಿಗೆ ಬೆನ್ನಲ್ಲೇ ಪಹಲ್ಗಾಮ್ ಗೆ ಹೋಗುವ ಯೋಜನೆ ಕೈ ಬಿಟ್ಟೆವು. ಇದಾದ ಕೆಲವೇ ನಿಮಿಷಗಳಲ್ಲಿ ನಮಗೆ ಉಗ್ರ ದಾಳಿ ಕುರಿತು ಮಾಹಿತಿ ಲಭ್ಯವಾಯಿತು. ಆಗ ನಿಜಕ್ಕೂ ನಾವು ಆಘಾತಕ್ಕೊಳಗಾದೆವು ಮತ್ತು ನಾವು ಎಷ್ಟು ಅದೃಷ್ಟವಂತರು ಎಂದು ಅರಿತುಕೊಂಡೆವು ಎಂದು ಲಾವಣ್ಯ ಕರಾಳ ಅನುಭವವನ್ನು ಹಂಚಿಕೊಂಡಿದ್ದಾರೆ.

Leave a Reply

Your email address will not be published. Required fields are marked *