ATNCC ಕಾಲೇಜಿನಲ್ಲಿ ಸಾಂಪ್ರದಾಯಿಕ ದಿನದ ಸಂಭ್ರಮ
ಶಿವಮೊಗ್ಗ: ನಗರದ ಆಚಾರ್ಯ ತುಳಸಿ ರಾಷ್ಟ್ರೀಯ ವಾಣಿಜ್ಯ ಕಾಲೇಜಿನಲ್ಲಿ ಶನಿವಾರ ಏರ್ಪಡಿಸಿದ್ದ ಸಾಂಪ್ರದಾಯಿಕ ದಿನ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ದೇಸಿ ಉಡುಗೆ ತೊಟ್ಟು ಮಿಂಚಿದರು.
ತಳಿರು ತೋರಣ ರಂಗೋಲಿಗಳಿಂದ ಸಿಂಗಾರಗೊಂಡಿದ್ದ ಕಾಲೇಜು, ಹೂವು, ಬಾಳೆ ಹಣ್ಣು, ಕಬ್ಬುಗಳ ಅಲಂಕಾರದಿಂದ ಕಂಗೊಳಿಸುತ್ತಿತ್ತು. ಕಾಲೇಜಿನ ಮುಂಭಾಗದಲ್ಲಿ ಹಾಕಿದ್ದ ಚಪ್ಪರ ಸೀರೆ, ಪಂಚೆ, ಶಲ್ಯದಲ್ಲಿ ಆಗಮಿಸಿದ್ದ ಬಿಕಾಂ ಮತ್ತು ಬಿಬಿಎ ವಿದ್ಯಾರ್ಥಿಗಳು ಪರಸ್ಪರ ಸೆಲ್ಫಿ ತೆಗೆದುಕೊಳ್ಳುತ್ತಿದ್ದದ್ದು ಸಾಮಾನ್ಯವಾಗಿತ್ತು.
ಕಾರ್ಯಕ್ರಮಕ್ಕೆ ಸಿಂಗಾರಗೊಂಡು ಬಂದಿದ್ದ ಗೂಳಿ ಸೂಗೂರು ಆದಿಶೇಷನನ್ನು ಹಿಡಿಯಲು ವಿದ್ಯಾರ್ಥಿಗಳು ಉತ್ಸುಕರಾಗಿದ್ದರು. ಭಯದಿಂದಲೇ ಮುಟ್ಟುತ್ತ, ಗೂಳಿ ಜೊತೆಗೆ ಫೋಟೊ ತೆಗೆಸಿಕೊಳ್ಳುತ್ತ, ಡೊಳ್ಳು ಮತ್ತು ತಮಟೆ ವಾದ್ಯಗಳಿಗೆ ಹೆಜ್ಜೆ ಹಾಕಿದರು. ಇದೇ ವೇಳೆ ವಿದ್ಯಾರ್ಥಿ ವಿದ್ಯಾರ್ಥಿನಿಯರು ಡಿಜೆ ಹಾಡುಗಳಿಗೆ ರ್ಯಾಂಪ್ ವಾಕ್ ಮಾಡಿದರು.
ಬೇರೆ ರಾಜ್ಯಗಳ ಸಂಸ್ಕೃತಿ ಬಿಂಬಿಸುವ ಉಡುಗೆಗಳು, ಹಸಿರು ಶಾಲು ತೊಟ್ಟು ಪಂಚೆ ಉಟ್ಟ ವಿದ್ಯಾರ್ಥಿಗಳು ಗಮನ ಸೆಳೆದರು. ಬಿಸಿಲ ಧಗೆಗೆ ತಂಪಾರಿಸಿಕೊಳ್ಳಲು ಮಜ್ಜಿಗೆ ವ್ಯವಸ್ಥೆ ಮಾಡಲಾಗಿತ್ತು. ವಿದ್ಯಾರ್ಥಿಗಳೊಂದಿಗೆ ಉಪನ್ಯಾಸಕರು ಹೆಜ್ಜೆ ಹಾಕಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಮಮತಾ.ಪಿ.ಆರ್, ರಾಷ್ಟ್ರೀಯ ಪ್ರೌಢಶಾಲೆಯ ಶಿಕ್ಷಕಿ ಸುಜಾತ ಜಗದೀಶ್, ಎಂಕಾಂ ವಿಭಾಗದ ಉಪನ್ಯಾಸಕಿ ಕವಿತಾ ಕ್ರಾಸ್ಟಾ, ಕಮಲಾ ನೆಹರು ಕಾಲೇಜಿನ ಉಪನ್ಯಾಸಕಿ ಅನ್ನಪೂರ್ಣ, ಎನ್.ಎಸ್.ಎಸ್ ಮುಖ್ಯಸ್ಥ ಕೆ.ಎಂ.ನಾಗರಾಜ, ಐಕ್ಯೂಎಸಿ ಸಂಯೋಜಕ ಮಂಜುನಾಥ. ಎಸ್, ಸಾಂಸ್ಕೃತಿಕ ವಿಭಾಗದ ಮುಖ್ಯಸ್ಥ ಪ್ರವೀಣ್.ಬಿ.ಎನ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.