ಸರ್ಕಾರಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಲಕ್ಷಾಂತರ ರೂ ವಂಚಿಸಿದ ದಂಪತಿಗಳು – ದೂರು ದಾಖಲು
ಶಿವಮೊಗ್ಗ: ಸರ್ಕಾರಿ ಕೆಲಸ ಕೊಡಿಸುವುದಾಗಿ ನಂಬಿಸಿ ವ್ಯಕಿಯೊಬ್ಬರಿಗೆ ಲಕ್ಷಾಂತರ ರೂ. ವಂಚಿಸಿದ ಬಗ್ಗೆ ಶಿವಮೊಗ್ಗದ ತುಂಗಾನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಗೋಪಿಶೆಟ್ಟಿಕೊಪ್ಪದ 43 ವರ್ಷದ ನಿವಾಸಿಯೊಬ್ಬರಿಗೆ ಪರಿಚಯವಾದ ಅಶ್ವಿನಿ ಗೌಡ, ಪತಿ ಜಗದೀಶ್ ಯಾನೆ ಮಂಜಪ್ಪಗೌಡ ಸರ್ಕಾರಿ ಕೆಲಸ ಕೊಡಿಸುವುದಾಗಿ ಭರವಸೆ ನೀಡಿ 4 ಲಕ್ಷ ರೂ. ಬೇಡಿಕೆ ಇಟ್ಟಿದ್ದರು. 4 ಲಕ್ಷ ರೂ ಹಣದಲ್ಲಿ ಫೋನ್ ಪೇ ಮತ್ತು ನಗದು ರೂಪದಲ್ಲಿ ಒಟ್ಟು 3,96,061 ರೂ ಹಣವನ್ನು ಅಶ್ವಿನಿಗೌಡ, ಜಗದೀಶ್ ಮತ್ತು ಮಗ ಕಾರ್ತಿಕ್ ಗೌಡರಿಗೆ ನೀಡಿದ್ದರು.ಮೂರು ವರ್ಷದಿಂದ ಸರ್ಕಾರಿ ಕೆಲಸ ಕೊಡಿಸುವುದಾಗಿ ಹೇಳಿ ದಿನ ಮುಂದೂಡಿದರೇ ವಿನಾ ಕೆಲಸ ಕೊಡಿಸಲಿಲ್ಲ .
ಇದರಿಂದ ಬೇಸತ್ತ ವ್ಯಕ್ತಿ ಹಣ ವಾಪಾಸ್ ಕೊಡುವಂತೆ ಕೇಳಿದಾಗ ಮೂರು ವರ್ಷದಲ್ಲಿ 1,70,600 ರೂ. ನೀಡಿರುವ ಆರೋಪಿಗಳು ಉಳಿದ ಹಣ ನೀಡದೆ ವ್ಯಂಗ್ಯವಾದ ಮಾತುಗಳನ್ನು ಆಡಿದ್ದರು. ಬೇಸತ್ತ ವಂಚಿತ ವ್ಯಕ್ತಿ ಇದೀಗ ದೂರು ನೀಡಿದ್ದಾರೆ.