ಡಾ. ಧನಂಜಯ ಸರ್ಜಿ ಹೆಸರಲ್ಲಿ ಮೂವರಿಗೆ ವಿಷಯುಕ್ತ ಸ್ವೀಟ್ ಬಾಕ್ಸ್ ರವಾನೆ
ಶಿವಮೊಗ್ಗ : ಜ. 3: ಹೊಸ ವರ್ಷದ ದಿನದಂದು ವಿಧಾನ ಪರಿಷತ್ ಸದಸ್ಯ ಡಾ!! ಧನಂಜಯ ಸರ್ಜಿ ಹೆಸರಿನಲ್ಲಿ, ದುಷ್ಕರ್ಮಿಗಳು ಶಿವಮೊಗ್ಗದ ಮೂವರು ಪ್ರಮುಖರಿಗೆ ಕೋರಿಯರ್ ಮೂಲಕ ವಿಷಯುಕ್ತ ಸ್ವೀಟ್ ಬಾಕ್ಸ್ ರವಾನಿಸಿದ್ದ ಆತಂಕಕಾರಿ ಘಟನೆ ಬೆಳಕಿಗೆ ಬಂದಿದೆ.
ಎನ್ಇಎಸ್ ಸಂಸ್ಥೆಯ ಕಾರ್ಯದರ್ಶಿ ನಾಗರಾಜ್, ವೈದ್ಯರಾದ ಡಾ!! ಅರವಿಂದ್ ಹಾಗೂ ಡಾ!! ಕೆ ಎಸ್ . ಪವಿತ್ರ ಅವರಿಗೆ ತಮ್ಮ ಹೆಸರಿನಲ್ಲಿ ಸ್ವೀಟ್ ಬಾಕ್ಸ್ ರವಾನೆಯಾಗಿರುವುದು ತಿಳಿದುಬಂದಿದೆ’ ಎಂದು ಸರ್ಜಿ ತಿಳಿಸಿದ್ದಾರೆ.
ನಾಗರಾಜ್ ಅವರು ಸ್ವೀಟ್ ತಿಂದ ವೇಳೆ ಕಹಿಯಾಗಿರುವುದು ಕಂಡುಬಂದಿದೆ. ಈ ಕುರಿತಂತೆ ಅವರು ವಿಧಾನ ಪರಿಷತ್ ಶಾಸಕ ಡಿ ಎಸ್ ಅರುಣ್ ಅವರ ಗಮನಕ್ಕೆ ತಂದಿದ್ದರು. ಈ ಬಗ್ಗೆ ಡಿ ಎಸ್ ಅರುಣ್ ತಮ್ಮ ಗಮನಕ್ಕೆ ತಂದ ನಂತರವಷ್ಟೆ, ತಮಗೆ ಮಾಹಿತಿ ಗೊತ್ತಾಗಿತ್ತು, ತದನಂತರ ಇತರೆ ಇಬ್ಬರು ವೈದ್ಯರಿಗೆ ಇದೇ ಮಾದರಿಯ ಸ್ವೀಟ್ ಬಾಕ್ಸ್ ರವಾನೆಯಾಗಿರುವುದು ತಿಳಿದುಬಂದಿತ್ತು’ ಎಂದು ಮಾಹಿತಿ ನೀಡಿದ್ದಾರೆ.
ವಿಷಯುಕ್ತ ಸ್ವೀಟ್ ಮಾದರಿಯನ್ನು ಹೆಚ್ಚಿನ ತಪಾಸಣೆಗಾಗಿ, ಪ್ರಯೋಗಾಲಯದ ಪರೀಕ್ಷೆಗೆ ರವಾನಿಸಲಾಗಿದೆ. ಸ್ವೀಟ್ ಗೆ ಏನು ಮಿಶ್ರಣ ಮಾಡಲಾಗಿದೆ ಎಂಬುವುದು ಇನ್ನಷ್ಟೆ ತಿಳಿದುಬರಬೇಕಾಗಿದೆ. ಈ ಸಂಬಂಧ ಕೋಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಜೊತೆಗೆ ಜಿಲ್ಲಾ ರಕ್ಷಣಾಧಿಕಾರಿಗಳ ಜೊತೆಯೂ ಮಾತನಾಡಿದ್ದೆನೆ ಎಂದು ಹೇಳಿದ್ದಾರೆ.
ಸದರಿ ಸ್ವೀಟ್ ಬಾಕ್ಸ್ ನಲ್ಲಿ ತಮ್ಮ ಹೆಸರು – ಭಾವಚಿತ್ರ ಮುದ್ರಿಸಿರುವ ನಕಲಿ ಪತ್ರವಿರಿಸಿರುವುದು ಕಂಡುಬಂದಿದೆ. ಯಾರೋ ಉದ್ದೇಶಪೂರ್ವಕವಾಗಿಯೇ ಈ ದುಷ್ಕೃತ್ಯ ಎಸಗಿದ್ದಾರೆ. ಆರೋಪಿಗಳು ಪತ್ತೆಯಾಗಬೇಕು. ಜೊತೆಗೆ ಅವರಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದ್ದಾರೆ.