ಬಸ್ ಹತ್ತುವಾಗ ಮಹಿಳೆಯ ಬ್ಯಾಗ್ ನಲ್ಲಿದ್ದ ಚಿನ್ನಾಭರಣ, ಎಟಿಎಂ ಕಾರ್ಡ್ ಕಳ್ಳತನ
ಶಿವಮೊಗ್ಗ : ಬಸ್ ಹತ್ತುವಾಗ ಮಹಿಳೆಯರ ವ್ಯಾನಿಟಿ ಬ್ಯಾಗ್ನಿಂದ ಚಿನ್ನಾಭರಣ, ನಗದು ಕಳ್ಳತನ ಮುಂದುವರೆದಿದೆ. ನಗರದ KSRTC ಬಸ್ ನಿಲ್ದಾಣದಲ್ಲಿ ಶಿಕಾರಿಪುರ ಬಸ್ ಹತ್ತುವಾಗ ವ್ಯಾನಿಟಿ ಬ್ಯಾಗ್ನಿಂದ ಕಳ್ಳತನವಾಗಿದೆ.
ಮೆಗ್ಗಾನ್ ಆಸ್ಪತ್ರೆಗೆ ದಾಖಲಾಗಿದ್ದ ಸಂಬಂಧಿಯ ಆರೋಗ್ಯ ವಿಚಾರಿಸಿದ್ದ ಗೀತಾ ಎಂಬುವವರು ನ್ಯಾಮತಿಗೆ ಹಿಂತಿರುಗುತ್ತಿದ್ದರು. ಶಿವಮೊಗ್ಗದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ಶಿಕಾರಿಪುರ ಬಸ್ ಹತ್ತಿದ್ದರು. ಟಿಕೆಟ್ ಮಾಡಿಸಲು ವ್ಯಾನಿಟಿ ಬ್ಯಾಗ್ ಗಮನಿಸಿದಾಗ ಜಿಪ್ ತೆರೆದಿರುವುದು ಗೊತ್ತಾಗಿದೆ. ಒಳಗಿದ್ದ ಪರ್ಸ್ ನಾಪತ್ತೆಯಾಗಿತ್ತು. ಅದರಲ್ಲಿ 75 ಸಾವಿರ ರೂ. ಮೌಲ್ಯದ ಚಿನ್ನದ ಮಾಂಗಲ್ಯ ಸರ, 1500 ರೂ. ನಗದು, ವಿವಿಧೆ ಬ್ಯಾಂಕುಗಳ ಎಟಿಎಂ ಕಾರ್ಡುಗಳಿದ್ದವು ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಬಸ್ ಹತ್ತುವಾಗ ಹೆಚ್ಚು ಜನ ದಟ್ಟಣೆ ಇತ್ತು. ಈ ಸಂದರ್ಭ ಕಳ್ಳರು ವ್ಯಾನಿಟಿ ಬ್ಯಾಗ್ ಜಿಪ್ ತೆಗೆದು ಕಳ್ಳತನ ಮಾಡಿದ್ದಾರೆ ಎಂದು ಗೀತಾ ಅವರು ಆರೋಪಿಸಿದ್ದಾರೆ.
ಘಟನೆ ಸಂಬಂಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

