ತೀರ್ಥಹಳ್ಳಿ : ಗೋಹತ್ಯಾ ನಿಷೇಧ ಕಾಯ್ದೆ ಜಾರಿಯಲ್ಲಿದ್ದರೂ ಕೂಡಾ ದನಗಳ್ಳರ ಮತ್ತು ಖದೀಮರ ಅಟ್ಟಹಾಸ ದಿನದಿಂದ ದಿನಕ್ಕೆ ಮಿತಿ ಮೀರುತ್ತಿದೆ. ಸ್ವಲ್ಪ ದಿನಗಳ ಹಿಂದೆ ಮಂಡಗದ್ದೆಯ ಸಮೀಪ ದನ ಕಟುಕನೋರ್ವನನ್ನು ಮಾಳೂರು ಸಬ್ ಇನ್ಸ್ ಸೆಕ್ಟರ್ ನವೀನ್ ಮಠಪತಿಯವರು ಹಿಡಿದು ಜೈಲಿಗಟ್ಟಿದ್ದರೂ ಕೂಡಾ ಪುನಃ ದನಗಳ್ಳರು ಬಾಲಬಿಚ್ಚುತ್ತಿರುವುದು ತೀರ್ಥಹಳ್ಳಿ ತಾಲೂಕಿಗೆ ದೊಡ್ಡ ದುರಂತವೇ ಸರಿ.
ಗುರುವಾರ ರಾತ್ರಿ ಹೆದ್ದೂರು ಹೊಸಳ್ಳಿ ಪರಿಸರದಲ್ಲಿ ಜಾನುವಾರುಗಳನ್ನು ಕದ್ದು ಪಿಕಪ್ ವಾಹನಗಳಲ್ಲಿ ಸಾಗಿಸುವಾಗ ಅನುಮಾನ ಬಂದು ಭಜರಂಗದಳದ ಕಾರ್ಯಕರ್ತರು ಹಾಗೂ ಊರಿನ ಗ್ರಾಮಸ್ಥರು ಅಡ್ಡಗಟ್ಟಿದ ತಕ್ಷಣ ಮೂರು ಜನ ದನಗಳ್ಳರು ವಾಹನ ಮತ್ತು ದನಗಳನ್ನು ಬಿಟ್ಟು ಪರಾರಿಯಾಗಿದ್ದಾರೆ. ವಿಷಯ ತಿಳಿದ ಮಾಳೂರು ಸಬ್ ಇನ್ಸ್ಪೆಕ್ಟರ್ ನವೀನ ಮಠಪತಿ ಮತ್ತು ಸಿಬ್ಬಂದಿ ವರ್ಗದವರು ತಕ್ಷಣ ಸ್ಥಳಕ್ಕೆ ಧಾವಿಸಿ ಜಾನುವಾರು ಕಳ್ಳತನಕ್ಕೆ ಉಪಯೋಗಿಸಿದ KA I4 B 8139 ಪಿಕಪ್ ವಾಹನ ಮತ್ತು ಜಾನುವಾರುಗಳನ್ನು ತಮ್ಮ ವಶಕ್ಕೆ ಪಡೆದು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.
ಗೃಹ ಸಚಿವರಾದ ಆರಗ ಜ್ಞಾನೇಂದ್ರರವರ ಕ್ಷೇತ್ರದಲ್ಲಿ ಪುನಃ ಪುನಃ ಜಾನುವಾರು ಕಳ್ಳರ ಅಟ್ಟಹಾಸ ಮಿತಿ ಮೀರುತ್ತಿದ್ದು ಇದಕ್ಕೆ ಕಡಿವಾಣ ಹಾಕಲು ತೀರ್ಥಹಳ್ಳಿ ಪೊಲೀಸರು ಲಾಠಿಯ ಜೊತೆಯಲ್ಲಿ ಕೇವಲ ಆಯುಧ ಪೂಜೆಗೆ ಮೀಸಲಿಡುವ ಬಂದೂಕುಗಳಿಗೆ ಕೆಲಸ ಕೊಟ್ಟರೆ ಮಾತ್ರ ಜಾನುವಾರು ಕಳ್ಳರ ಹಾವಳಿ ನಿಲ್ಲುತ್ತದೆ ಹಾಗೂ ತೀರ್ಥಹಳ್ಳಿ ಕ್ಷೇತ್ರದಲ್ಲಿ ಶಾಂತಿ ನೆಮ್ಮದಿ ನೆಲಸುತ್ತದೆ ಎಂಬುದು ಸಾರ್ವಜನಿಕರ ಮಾತಾಗಿದೆ.