ಬಟಾಣಿಜಡ್ಡು, ತಮ್ಮಡಿಕೊಪ್ಪ ಭಾಗದಲ್ಲಿ ಆನೆಗಳ ಸಂಚಾರ – ತೋಟಗಳಿಗೆ ಹಾನಿ , ಜನರಿಗೆ ಅರಣ್ಯ ಇಲಾಖೆ ಎಚ್ಚರಿಕೆ
Wild elephant attack reported near Ripponpete in Arasalu Gram Panchayat limits, damaging arecanut and banana crops. Forest officials inspect the affected areas and alert villagers.
ರಿಪ್ಪನ್ಪೇಟೆ: ರಿಪ್ಪನ್ಪೇಟೆ ಸಮೀಪದ ಅರಸಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಮ್ಮಡಿಕೊಪ್ಪ, ಬಟಾಣಿಜಡ್ಡು ಹಾಗೂ 9ಎಂಎಸ್ ಭಾಗಗಳಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗಿದ್ದು, ಹಲವು ಕಡೆಗಳಲ್ಲಿ ಆನೆ ದಾಳಿ ನಡೆಸಿರುವ ಘಟನೆ ವರದಿಯಾಗಿದೆ.
ಬಟಾಣಿಜಡ್ಡು ಗ್ರಾಮದ ಸುತ್ತಮುತ್ತ ಕಾಡಾನೆಗಳು ಸಂಚರಿಸುತ್ತಿರುವುದು ಸ್ಥಳೀಯರಲ್ಲಿ ಆತಂಕಕ್ಕೆ ಕಾರಣವಾಗಿದೆ. ಗ್ರಾಮದ ಮೂರ್ತಿ ಆಚಾರ್ ಹಾಗೂ ಮಂಜಪ್ಪ ಎಂಬುವವರ ತೋಟಗಳಿಗೆ ಆನೆಗಳು ದಾಳಿ ನಡೆಸಿದ್ದು, ತೋಟದಲ್ಲಿದ್ದ ಅಡಿಕೆ ಹಾಗೂ ಬಾಳೆ ಗಿಡಗಳಿಗೆ ಹಾನಿಯಾಗಿದೆ ಎಂದು ತಿಳಿದುಬಂದಿದೆ.
ಆನೆಗಳ ಹಾವಳಿ ಕುರಿತು ಮಾಹಿತಿ ಲಭ್ಯವಾಗುತ್ತಿದ್ದಂತೆ ಸಿರಿಗೆರೆ ವಲಯ ಅರಣ್ಯಾಧಿಕಾರಿ ಸವಿನಯ್ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಆನೆಗಳ ಚಲನವಲನ ಹಾಗೂ ಹಾನಿಯಾಗಿರುವ ಪ್ರದೇಶಗಳ ಕುರಿತು ಅಧಿಕಾರಿಗಳು ಮಾಹಿತಿ ಪಡೆದುಕೊಂಡಿದ್ದಾರೆ.
ಅರಸಾಳು ಗ್ರಾಪಂ ವ್ಯಾಪ್ತಿಯ ವಿವಿಧ ಪ್ರದೇಶಗಳಲ್ಲಿ ಕಾಡಾನೆಗಳ ಸಂಚಾರ ಕಂಡುಬರುತ್ತಿರುವ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಮುನ್ನೆಚ್ಚರಿಕೆ ವಹಿಸಿದೆ. ಆಲುವಳ್ಳಿ, ಗಾಳಿಬೈಲು ಹಾಗೂ ಕೆಂಚನಾಲ ವ್ಯಾಪ್ತಿಯ ಜನರು ಆನೆಗಳ ಬಗ್ಗೆ ಎಚ್ಚರಿಕೆಯಿಂದ ಇರುವಂತೆ ಅರಣ್ಯ ಇಲಾಖೆ ಮನವಿ ಮಾಡಿದೆ.
ರಾತ್ರಿ ಹಾಗೂ ಮುಂಜಾನೆ ಸಮಯದಲ್ಲಿ ತೋಟ, ಗದ್ದೆ ಸೇರಿದಂತೆ ಅರಣ್ಯ ಪ್ರದೇಶದಂಚಿನ ಪ್ರದೇಶಗಳಿಗೆ ತೆರಳುವಾಗ ಹೆಚ್ಚಿನ ಜಾಗ್ರತೆ ವಹಿಸುವಂತೆ ಸ್ಥಳೀಯರಿಗೆ ಸೂಚಿಸಲಾಗಿದೆ. ಆನೆಗಳು ಕಾಣಿಸಿಕೊಂಡಲ್ಲಿ ಅವುಗಳನ್ನು ಹತ್ತಿರದಿಂದ ಹಿಂಬಾಲಿಸುವುದು, ಕಿರಿಕಿರಿ ಉಂಟುಮಾಡುವುದು ಅಥವಾ ಅವುಗಳನ್ನು ಓಡಿಸಲು ಪ್ರಯತ್ನಿಸದೆ ತಕ್ಷಣ ಅರಣ್ಯ ಇಲಾಖೆಗೆ ಮಾಹಿತಿ ನೀಡುವಂತೆ ಮನವಿ ಮಾಡಲಾಗಿದೆ.
ಕಾಡಾನೆಗಳ ಹಾವಳಿಯಿಂದ ಬೆಳೆ ಹಾನಿಗೊಳಗಾಗಿರುವ ರೈತರು ಆತಂಕದಲ್ಲಿದ್ದು, ಅರಣ್ಯ ಇಲಾಖೆ ಮುಂದಿನ ದಿನಗಳಲ್ಲಿ ಆನೆಗಳ ಚಲನವಲನದ ಮೇಲೆ ಹೆಚ್ಚಿನ ನಿಗಾ ವಹಿಸಿ, ಜನರ ಸುರಕ್ಷತೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.