ರಿಪ್ಪನ್ ಪೇಟೆ : ಕೆಳಜಾತಿ ಮಹಿಳೆ ಅಂಗನವಾಡಿ ಸಹಾಯಕಿಯಾಗಿ ನೇಮಕ – ಮಕ್ಕಳನ್ನು ಕಳುಹಿಸಲು ಗ್ರಾಮಸ್ಥರ ಹಿಂದೇಟು ಆರೋಪ , ಸ್ಥಳಕ್ಕೆ ಅಧಿಕಾರಿಗಳ ದೌಡು
Controversy erupts over Anganwadi helper appointment in Mugudthi village of Shivamogga district as some villagers reportedly hesitate to send children. Officials visit and hold a meeting.
ಶಿವಮೊಗ್ಗ: ಹೊಸನಗರ ತಾಲೂಕಿನ ರಿಪ್ಪನಪೇಟೆ ಸಮೀಪದ ಹೆದ್ದಾರಿಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೂಗುಡ್ತಿ ಗ್ರಾಮದಲ್ಲಿ ಅಂಗನವಾಡಿ ಸಹಾಯಕಿ ನೇಮಕಾತಿಗೆ ಸಂಬಂಧಿಸಿದಂತೆ ವಿವಾದ ಉಂಟಾಗಿದೆ.
ಅರ್ಹತೆ ಆಧಾರದ ಮೇಲೆ ಕೆಳ ಸಮುದಾಯಕ್ಕೆ ಸೇರಿದ ಮಹಿಳೆಯೊಬ್ಬರನ್ನು ಅಂಗನವಾಡಿ ಸಹಾಯಕಿಯಾಗಿ ನೇಮಕ ಮಾಡಲಾಗಿದ್ದು, ಇದನ್ನು ವಿರೋಧಿಸಿ ಕೆಲ ಗ್ರಾಮಸ್ಥರು ತಮ್ಮ ಮಕ್ಕಳನ್ನು ಅಂಗನವಾಡಿಗೆ ಕಳುಹಿಸಲು ಹಿಂದೇಟು ಹಾಕುತ್ತಿದ್ದಾರೆ ಎನ್ನುವ ಮಾಹಿತಿ ಅಧಿಕಾರಿಗಳ ಗಮನಕ್ಕೆ ಬಂದಿದೆ.
ಜಿಲ್ಲಾಧಿಕಾರಿಗಳಿಗೆ ಮಾಹಿತಿ – ಸ್ಥಳಕ್ಕೆ ಅಧಿಕಾರಿಗಳ ದೌಡು
ಮಕ್ಕಳನ್ನು ಅಂಗನವಾಡಿಗೆ ಕಳುಹಿಸದಿರುವ ಕುರಿತು ಗ್ರಾಮಸ್ಥರೊಬ್ಬರು ಶಿವಮೊಗ್ಗ ಜಿಲ್ಲಾಧಿಕಾರಿಗಳಿಗೆ ಕರೆ ಮಾಡಿ ಮಾಹಿತಿ ನೀಡಿದ್ದರು. ವಿಷಯವನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾಧಿಕಾರಿಗಳು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳಿಗೆ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸುವಂತೆ ಸೂಚಿಸಿದರು.
ಜಿಲ್ಲಾಧಿಕಾರಿಗಳ ಸೂಚನೆಯ ಮೇರೆಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಿಡಿಪಿಒ (CDPO) ಗಾಯತ್ರಿ ರಾಮಚಂದ್ರ ಹಾಗೂ ರಿಪ್ಪನಪೇಟೆ ಪೊಲೀಸ್ ಠಾಣೆಯ ಸಿಬ್ಬಂದಿ ಮೂಗುಡ್ತಿ ಗ್ರಾಮಕ್ಕೆ ಭೇಟಿ ನೀಡಿ ಗ್ರಾಮಸ್ಥರೊಂದಿಗೆ ಸಭೆ ನಡೆಸಿದರು.
ನಿಯಮದ ಪ್ರಕಾರವೇ ನೇಮಕಾತಿ ನಡೆದಿದೆ – ಸಿಡಿಪಿಓ
ಸಭೆಯಲ್ಲಿ ಮಾತನಾಡಿದ ಸಿಡಿಪಿಓ ಗಾಯತ್ರಿ ರಾಮಚಂದ್ರ ರವರು ಸರ್ಕಾರದ ನಿಯಮಾವಳಿ ಹಾಗೂ ಅರ್ಹತೆ ಆಧಾರದ ಮೇಲೆಯೇ ಅಂಗನವಾಡಿ ಸಹಾಯಕಿ ನೇಮಕಾತಿ ನಡೆದಿದ್ದು, ಯಾವುದೇ ಗೊಂದಲಗಳಿಗೆ ಅವಕಾಶ ನೀಡಬಾರದು ಎಂದು ತಿಳಿಸಿದರು.
“ನೇಮಕಾತಿ ಪ್ರಕ್ರಿಯೆ ಕಾನೂನುಬದ್ಧವಾಗಿ ನಡೆದಿದೆ. ಸಮಸ್ಯೆ ಇದ್ದರೆ ಸ್ಪಷ್ಟವಾಗಿ ತಿಳಿಸಬೇಕು. ಮಕ್ಕಳಿಗೆ ಅಂಗನವಾಡಿ ಸೌಲಭ್ಯದಿಂದ ವಂಚನೆ ಆಗಬಾರದು” ಎಂದು ಅಧಿಕಾರಿಗಳು ಗ್ರಾಮಸ್ಥರಿಗೆ ಸೂಚನೆ ನೀಡಿದರು.
ಗ್ರಾಮದಲ್ಲಿ ಯಾವುದೇ ಜಾತಿ ಭಿನ್ನಾಭಿಪ್ರಾಯ ಇಲ್ಲ ಎಂದ ಗ್ರಾಮಸ್ಥರು
ಅಧಿಕಾರಿಗಳೊಂದಿಗೆ ನಡೆದ ಚರ್ಚೆಯಲ್ಲಿ ಗ್ರಾಮಸ್ಥರು, “ನಮ್ಮ ಗ್ರಾಮದಲ್ಲಿ ಜಾತಿ ಆಧಾರಿತ ಯಾವುದೇ ಸಮಸ್ಯೆ ಇಲ್ಲ. ಎಲ್ಲರೂ ಒಗ್ಗಟ್ಟಿನಿಂದ ಇದ್ದೇವೆ. ಯಾವುದೇ ಗೊಂದಲವಿಲ್ಲ” ಎಂದು ತಿಳಿಸಿದರು.
ಮೂಗೂಡ್ತಿ ಗ್ರಾಮದ ಬಲಮುರಿ ಗಣಪತಿ ದೇವಸ್ಥಾನದ ಅಧ್ಯಕ್ಷ ಗುರುರಾಜ್ ಮಾತನಾಡಿ “ನಮ್ಮಲ್ಲಿ ಯಾವುದೇ ಗೊಂದಲವಿಲ್ಲ. ಅಂಗನವಾಡಿ ಸಹಾಯಕಿ ನೇಮಕಾತಿ ವಿಚಾರದಲ್ಲಿ ಗ್ರಾಮದಲ್ಲಿ ಯಾವುದೇ ರೀತಿಯ ಜಾತಿ ಭೇದಭಾವ ಅಥವಾ ವಿರೋಧದ ವಾತಾವರಣವಿಲ್ಲ. ಎಲ್ಲ ಸಮುದಾಯದವರೂ ಪರಸ್ಪರ ಸಹಕಾರದಿಂದ ಹಾಗೂ ಸೌಹಾರ್ದಯುತವಾಗಿ ಜೀವನ ನಡೆಸುತ್ತಿದ್ದೇವೆ. ಈ ವಿಚಾರದಲ್ಲಿ ಕೆಲವರಿಗೆ ತಪ್ಪು ಮಾಹಿತಿ ಅಥವಾ ಅನುಮಾನ ಉಂಟಾಗಿರಬಹುದು. ಆದರೆ ಗ್ರಾಮದಲ್ಲಿ ಅಂತಹ ಯಾವುದೇ ಸಮಸ್ಯೆ ಇಲ್ಲ. ಮಕ್ಕಳ ಶಿಕ್ಷಣ ಮತ್ತು ಆರೋಗ್ಯದ ಹಿತದೃಷ್ಟಿಯಿಂದ ಎಲ್ಲರೂ ಸಹಕರಿಸಬೇಕು. ಅಧಿಕಾರಿಗಳು ನಡೆಸಿದ ಸಭೆಯಲ್ಲಿಯೂ ಗ್ರಾಮದ ವಾಸ್ತವ ಪರಿಸ್ಥಿತಿಯನ್ನು ಸ್ಪಷ್ಟಪಡಿಸಲಾಗಿದೆ” ಎಂದು ಹೇಳಿದರು.
ಸದ್ಯ ಅಧಿಕಾರಿಗಳ ಮಧ್ಯಸ್ಥಿಕೆಯಿಂದ ಗ್ರಾಮದಲ್ಲಿ ಪರಿಸ್ಥಿತಿ ತಿಳಿಗೊಳ್ಳುವ ನಿರೀಕ್ಷೆ ವ್ಯಕ್ತವಾಗಿದೆ.