Headlines

ರಿಪ್ಪನ್‌ಪೇಟೆಯಲ್ಲಿ ಚೆನ್ನಮ್ಮ ದೇವೇಗೌಡರಿಗೆ ಶ್ರದ್ಧಾಂಜಲಿ: ಒಕ್ಕಲಿಗರ ಸಂಘ ಹಾಗೂ ಜೆಡಿಎಸ್‌ನಿಂದ ಸಂತಾಪ ಸಭೆ

ರಿಪ್ಪನ್‌ಪೇಟೆಯಲ್ಲಿ ಚೆನ್ನಮ್ಮ ದೇವೇಗೌಡರಿಗೆ ಶ್ರದ್ಧಾಂಜಲಿ: ಒಕ್ಕಲಿಗರ ಸಂಘ ಹಾಗೂ ಜೆಡಿಎಸ್‌ನಿಂದ ಸಂತಾಪ ಸಭೆ

Ripponpet witnessed a condolence meeting organized by the Hosanagara Taluk Vokkaligara Sangha and JDS leaders to pay tribute to late Chennamma, wife of former Prime Minister H.D. Deve Gowda.

ರಿಪ್ಪನ್‌ಪೇಟೆ: ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರ ಪತ್ನಿ ಚೆನ್ನಮ್ಮ ಅವರ ನಿಧನದ ಹಿನ್ನೆಲೆಯಲ್ಲಿ ಹೊಸನಗರ ತಾಲ್ಲೂಕು ಒಕ್ಕಲಿಗರ ಸಂಘ ಹಾಗೂ ತಾಲ್ಲೂಕು ಜೆಡಿಎಸ್ ಘಟಕದ ವತಿಯಿಂದ ರಿಪ್ಪನ್‌ಪೇಟೆಯ ವಿಶ್ವಮಾನವ ಒಕ್ಕಲಿಗರ ಸಭಾಭವನದಲ್ಲಿ ಸೋಮವಾರ ಸಂತಾಪ ಸಭೆ ನಡೆಯಿತು.

ಸಭೆಯಲ್ಲಿ ಪಕ್ಷದ ಮುಖಂಡರು, ಕಾರ್ಯಕರ್ತರು ಹಾಗೂ ಒಕ್ಕಲಿಗರ ಸಂಘದ ಪದಾಧಿಕಾರಿಗಳು ಚೆನ್ನಮ್ಮ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ, ಒಂದು ನಿಮಿಷ ಮೌನಾಚರಣೆ ನಡೆಸುವ ಮೂಲಕ ಗೌರವ ನಮನ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಹೊಸನಗರ ತಾಲ್ಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಎಂ.ಬಿ. ಲಕ್ಷ್ಮಣಗೌಡ, ಯಶಸ್ವಿ ಪುರುಷನ ಹಿಂದೆ ಮಹಿಳೆಯ ತ್ಯಾಗ ಮತ್ತು ಬೆಂಬಲ ಅಡಗಿರುತ್ತದೆ ಎಂಬ ಮಾತಿಗೆ ಚೆನ್ನಮ್ಮ ಅವರು ಜೀವಂತ ಉದಾಹರಣೆ ಎಂದು ಹೇಳಿದರು.

“ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರ ರಾಜಕೀಯ ಬದುಕಿನ ಪ್ರತಿ ಯಶಸ್ಸಿನ ಹಿಂದೆ ಚೆನ್ನಮ್ಮ ಅವರ ಪ್ರೋತ್ಸಾಹ, ಸಹನೆ ಮತ್ತು ತ್ಯಾಗ ಅಡಗಿತ್ತು. ಅವರು ಅಪಾರ ದೈವಭಕ್ತೆಯಾಗಿದ್ದು, ದೊಡ್ಡ ಕುಟುಂಬವನ್ನು ಪ್ರೀತಿಯಿಂದ ಸಾಕಿ-ಸಲಹಿದ ಆದರ್ಶ ತಾಯಿಯಾಗಿದ್ದರು. ದೇವೇಗೌಡರು, ಕುಮಾರಸ್ವಾಮಿ, ರೇವಣ್ಣ ಸೇರಿದಂತೆ ಇಡೀ ಕುಟುಂಬದ ಏಳ್ಗೆಗೆ ಅವರ ಪರಿಶ್ರಮ ಪ್ರಮುಖ ಕಾರಣವಾಗಿತ್ತು” ಎಂದು ಅವರು ಹೇಳಿದರು.

ಇತ್ತೀಚೆಗೆ ಅವರು ಆಸ್ಪತ್ರೆಯಿಂದ ಗುಣಮುಖರಾಗಿ ಮನೆಗೆ ಮರಳುತ್ತಾರೆ ಎಂಬ ವಿಶ್ವಾಸ ಎಲ್ಲರಲ್ಲೂ ಇತ್ತು. ಆದರೆ ಆ ನಿರೀಕ್ಷೆ ಈಡೇರದಿರುವುದು ದುಃಖಕರ ಸಂಗತಿ ಎಂದು ಲಕ್ಷ್ಮಣಗೌಡ ಸಂತಾಪ ವ್ಯಕ್ತಪಡಿಸಿದರು.

ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಆರ್.ಎ. ಚಾಬುಸಾಬ್ ಮಾತನಾಡಿ, ದೇವೇಗೌಡರು ದೇಶದ ಅತ್ಯುನ್ನತ ರಾಜಕೀಯ ಸ್ಥಾನವನ್ನು ಅಲಂಕರಿಸುವ ಹಾದಿಯಲ್ಲಿ ಚೆನ್ನಮ್ಮ ಅವರು ಶಕ್ತಿಯಾಗಿ ನಿಂತಿದ್ದರು. ಅವರ ಸಹನೆ, ಸಹಕಾರ ಹಾಗೂ ನಿಸ್ವಾರ್ಥ ಸೇವಾ ಮನೋಭಾವವೇ ದೇವೇಗೌಡರ ಯಶಸ್ಸಿನ ಹಿಂದಿನ ಮಹಾಶಕ್ತಿ ಎಂದು ಹೇಳಿದರು.

“ಅವರ ಮನೆಗೆ ಹೋದಾಗಲೆಲ್ಲ ತಾಯಿಯ ಪ್ರೀತಿಯಿಂದ ಆತಿಥ್ಯ ನೀಡುತ್ತಿದ್ದರು. ‘ಊಟ ಮಾಡದೆ ಹೋಗಬೇಡ’ ಎಂದು ಆತ್ಮೀಯವಾಗಿ ಒತ್ತಾಯಿಸುತ್ತಿದ್ದ ಅವರ ಮಮತೆ ಮರೆಯಲಾಗದು. ಅದು ಕೇವಲ ಔಪಚಾರಿಕ ಆತಿಥ್ಯವಲ್ಲ, ನಿಜವಾದ ತಾಯಿಯ ಪ್ರೀತಿ” ಎಂದು ಸ್ಮರಿಸಿದರು.

ಇಳಿವಯಸ್ಸಿನಲ್ಲಿ ಪತ್ನಿಯನ್ನು ಕಳೆದುಕೊಂಡಿರುವ ದೇವೇಗೌಡರು ಹಾಗೂ ಅವರ ಕುಟುಂಬಕ್ಕೆ ಈ ದುಃಖವನ್ನು ಭರಿಸುವ ಶಕ್ತಿ ದೇವರು ನೀಡಲಿ ಹಾಗೂ ಚೆನ್ನಮ್ಮ ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ ಎಂದು ಅವರು ಪ್ರಾರ್ಥಿಸಿದರು.

ಸಂತಾಪ ಸಭೆಯಲ್ಲಿ ಹೊಸನಗರ ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಎನ್. ವರ್ತೇಶ್, ಎಂ.ಎಂ. ಪರಮೇಶ್, ಅಶೋಕ್ ಗೌಡ, ಈರಣ್ಣ ಕಲ್ಲೂರು, ವಿಶ್ವನಾಥ್, ಷಣ್ಮುಖ ಬೈರಾಪುರ, ಹರೀಶ್ ಗೌಡ, ಚಿಂತು, ರಾಜಣ್ಣ, ದಯಾಕರ್ ಸೇರಿದಂತೆ ಹಲವು ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

About The Author