Headlines

ಭಾರಿ ಮಳೆ–ಗಾಳಿಗೆ ಮನೆ ಮೇಲೆ ಬಿದ್ದ ತೆಂಗಿನ ಮರ: ಸ್ಥಳಕ್ಕೆ ತಹಶೀಲ್ದಾರ್ ಭೇಟಿ, ಶಾಸಕರಿಂದ ವೈಯಕ್ತಿಕ ಪರಿಹಾರ

A coconut tree fell on a house in Belluru village of Hosanagara taluk due to heavy rain and strong winds. Tahsildar Bharat Raj inspected the spot, and MLA Belur Gopalakrishna’s aide Sinnakki Manju provided personal compensation to the affected family.

ಹೊಸನಗರ: ತಾಲೂಕಿನ ಬೆಳ್ಳೂರು ಗ್ರಾಮದಲ್ಲಿ ಭಾನುವಾರ ಸಂಜೆ ಸುರಿದ ಭಾರಿ ಮಳೆಯೊಂದಿಗೆ ಬಿರುಸಿನ ಗಾಳಿ ಬೀಸಿದ ಪರಿಣಾಮ ಮನೆಯ ಮೇಲೆ ತೆಂಗಿನ ಮರ ಬಿದ್ದ ಘಟನೆ ಸಂಭವಿಸಿದೆ.

ಘಟನೆ ಕುರಿತು ಮಾಹಿತಿ ತಿಳಿದ ತಕ್ಷಣ ಹೊಸನಗರ ತಹಶೀಲ್ದಾರ್ ಭರತ್ ರಾಜ್ ಹಾಗೂ ಸಾಗರ ವಿಧಾನಸಭಾ ಕ್ಷೇತ್ರದ ಶಾಸಕ ಬೇಳೂರು ಗೋಪಾಲಕೃಷ್ಣ ಅವರ ಸೂಚನೆ ಮೇರೆಗೆ ಅವರ ಆಪ್ತ ಕಾರ್ಯದರ್ಶಿ ಸಣ್ಣಕ್ಕಿ ಮಂಜು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಈ ಘಟನೆಯಲ್ಲಿ ಅದೃಷ್ಟವಶಾತ್ ಮನೆಯಲ್ಲಿದ್ದ ಐವರು ಸದಸ್ಯರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಬೆಳ್ಳೂರು ಗ್ರಾಮದ ನಿವಾಸಿ ರತ್ನಮ್ಮ ಅವರಿಗೆ ಸೇರಿದ ಹಂಚಿನ ಮನೆಯ ಮುಂದೆ ನಿಂತಿದ್ದ ದೊಡ್ಡ ತೆಂಗಿನ ಮರ ಭಾರಿ ಮಳೆ ಹಾಗೂ ಗಾಳಿಯ ತೀವ್ರತೆಗೆ ತಾಳಲಾರದೆ ಏಕಾಏಕಿ ಮನೆ ಮೇಲೆ ಬಿದ್ದಿದೆ. ಇದರ ಪರಿಣಾಮವಾಗಿ ಮನೆಯ ಮೇಲ್ಛಾವಣಿಗೆ ಹಾನಿಯಾಗಿದ್ದು, ಹಂಚುಗಳು ಜಾರಿಬಿದ್ದಿವೆ. ನಂತರವೂ ಮಳೆ ಮುಂದುವರಿದ ಪರಿಣಾಮ ಮನೆಯೊಳಗೆ ನೀರು ನುಗ್ಗಿ ಒಳಗಿದ್ದ ಗೃಹೋಪಯೋಗಿ ಸಾಮಾನುಗಳಿಗೆ ಹಾನಿಯಾಗಿದೆ. ಮನೆಯ ಕೆಲವು ಭಾಗಗಳು ಭಾಗಶಃ ಹಾನಿಗೊಳಗಾಗಿರುವುದರಿಂದ ಕುಟುಂಬಸ್ಥರು ಆತಂಕದಲ್ಲಿ ಕಾಲಕಳೆಯುವಂತಾಗಿದೆ.

ಘಟನೆ ಕುರಿತು ಮಾಹಿತಿ ಪಡೆದ ತಹಶೀಲ್ದಾರ್ ಭರತ್ ರಾಜ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಸರ್ಕಾರದ ವತಿಯಿಂದ ಅಗತ್ಯ ಪರಿಹಾರ ದೊರಕಿಸುವ ಭರವಸೆ ನೀಡಿದರು. ಇದೇ ವೇಳೆ ಶಾಸಕ ಬೇಳೂರು ಗೋಪಾಲಕೃಷ್ಣ ಅವರ ಪರವಾಗಿ ಆಪ್ತ ಕಾರ್ಯದರ್ಶಿ ಸಣ್ಣಕ್ಕಿ ಮಂಜು ಅವರು ರತ್ನಮ್ಮ ಅವರಿಗೆ ವೈಯಕ್ತಿಕ ಪರಿಹಾರವನ್ನು ವಿತರಿಸಿದರು.

ಈ ಸಂಧರ್ಭದಲ್ಲಿ ರಾಜಸ್ವ ನಿರೀಕ್ಷಕ ಅಪ್ರೋಜ್ ಅಹಮದ್ , ಗ್ರಾಮ ಲೆಕ್ಕಿಗ ಜಾಕೀರ್ , ಪ್ರಮುಖರಾದ ಯೋಗೇಶ್ ಬೆಳ್ಳೂರು ಹಾಗೂ ಇನ್ನಿತರರು ಇದ್ದರು

About The Author