ಅಂಧರ ಕ್ರಿಕೆಟ್ ವಿಶ್ವಕಪ್ ಗೆದ್ದ ತಂಡದಲ್ಲಿ ರಿಪ್ಪನ್ ಪೇಟೆಯ ಕಾವ್ಯಾ ವಿ ಅವರ ಮಿಂಚು – ಹೆಮ್ಮೆಯ ಕ್ಷಣ
ಮೋದಿ–ಸಿದ್ದರಾಮಯ್ಯ ಸೇರಿದಂತೆ ಗಣ್ಯರಿಂದ ಅಭಿನಂದನೆ
ಶಿವಮೊಗ್ಗ/ಕೊಲಂಬೊ : ಭಾರತ ಮಹಿಳಾ ತಂಡ ಏಕದಿನ ವಿಶ್ವಕಪ್ ಕಪ್ ಗೆದ್ದ ಹರ್ಷ ಇನ್ನೂ ತಣ್ಣಗಾಗುವ ಮೊದಲೇ, ಮತ್ತೊಂದು ಐತಿಹಾಸಿಕ ಕ್ಷಣ—ಮಹಿಳಾ ಅಂಧರ T20 ವಿಶ್ವಕಪ್ ಪ್ರಶಸ್ತಿಯನ್ನು ಭಾರತದ ಮಹಿಳಾ ಅಂಧರ ಕ್ರಿಕೆಟ್ ತಂಡ ಮೊದಲ ಬಾರಿಗೆ ಮುಡಿಗೇರಿಸಿಕೊಂಡಿದೆ.
ಈ ಸಾಧನೆಗೆ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ಸೇರಿ ಅನೇಕ ಗಣ್ಯರು ಹರ್ಷ ವ್ಯಕ್ತಪಡಿಸಿ ಅಭಿನಂದನೆ ಸಲ್ಲಿಸಿದ್ದಾರೆ.
ಭಾನುವಾರ ಶ್ರೀಲಂಕಾದ ಕೊಲಂಬೊದಲ್ಲಿ ನಡೆದ ರೋಚಕ ಫೈನಲ್ನಲ್ಲಿ ದೀಪಿಕಾ ಟಿ.ಸಿ. ಅವರ ನಾಯಕತ್ವದ ಭಾರತ ತಂಡ ನೇಪಾಳವನ್ನು ಏಳು ವಿಕೆಟ್ಗಳಿಂದ ಮಣಿಸುವ ಮೂಲಕ ಐತಿಹಾಸಿಕ ಜಯ ಸಾಧಿಸಿದೆ. ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿದ ಭಾರತ ತಂಡ ನೇಪಾಳವನ್ನು 114/5 ರನ್ಗಳಿಗೆ ಸೀಮಿತಗೊಳಿಸಿದ ಬಳಿಕ ಕೇವಲ 12 ಓವರ್ಗಳಲ್ಲಿ 117/3 ರನ್ ಬಾರಿಸಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು.
ವಿಶೇಷವೆಂದರೆ—ನವಿ ಮುಂಬೈನಲ್ಲಿ ಮಹಿಳಾ ವಿಶ್ವಕಪ್ 2025 ಗೆದ್ದು ಕೇವಲ ಮೂರು ವಾರಗಳಲ್ಲಿ ಮತ್ತೊಂದು ವಿಶ್ವಕಪ್—ಇದು ಭಾರತೀಯ ಮಹಿಳಾ ಕ್ರಿಕೆಟ್ ವಲಯಕ್ಕೆ ದ್ವಿಗುಣ ಗೌರವ ತಂದುಕೊಟ್ಟಿದೆ.
ಕರ್ಣಾಟಕದಿಂದ ಮೂವರು — ರಿಪ್ಪನ್ ಪೇಟೆಯ ಕಾವ್ಯಾ ವಿ ಗಮನ ಸೆಳೆದು
ಈ ಜಯಶೀಲ ವಿಶ್ವಕಪ್ ತಂಡದಲ್ಲಿ ಕರ್ನಾಟಕದಿಂದ ಮೂವರು ಆಟಗಾರ್ತಿಯರು ಆಯ್ಕೆಯಾಗಿದ್ದು, ಅವರಲ್ಲಿ ರಿಪ್ಪನ್ ಪೇಟೆಯ ಪ್ರತಿಭೆ ಕಾವ್ಯಾ ವಿ ತನ್ನ ಆಲ್ರೌಂಡರ್ ಸಾಮರ್ಥ್ಯದಿಂದ ತಂಡದ ಗೆಲುವಿಗೆ ಕೈಜೋಡಿಸಿದ್ದಾರೆ. ಏಳು ಪಂದ್ಯಗಳ ವಿಶ್ವಕಪ್ ಶ್ರೇಣಿಯಲ್ಲಿ ಮೂರು ಪಂದ್ಯಗಳಲ್ಲಿ ಅವರು ಆಟವಾಡಿರುವುದು ಗಣನೀಯ.
ಕಾವ್ಯಾ ವಿ ರಿಪ್ಪನ್ ಪೇಟೆಯ ಬರುವೆ ಗ್ರಾಮದ ಆಚಾರ್ ಕೇರಿ ನಿವಾಸಿಗಳಾದ ಜಯಮ್ಮ–ವೆಂಕಟೇಶ್ ಆಚಾರ್ ದಂಪತಿಯ ಪುತ್ರಿ. ನಾಲ್ಕನೇ ತರಗತಿಯವರೆಗೂ ಪಟ್ಟಣದ ಬರುವೆ ಶಾಲೆಯಲ್ಲಿ ವ್ಯಾಸಾಂಗ ಮಾಡಿದ ಕಾವ್ಯಾ ದೃಷ್ಟಿಯಲ್ಲಿ ಸಮಸ್ಯೆಯುಂಟಾದ ಕಾರಣ ಶಿವಮೊಗ್ಗದ ಗೋಪಾಲ ಬಡಾವಣೆಯ ಶಾರದ ಅಂಧರ ಶಾಲೆಯಲ್ಲಿ 2009–2015 ರವರೆಗೆ ಶಿಕ್ಷಣ ಪಡೆದರು. ಬಳಿಕ ಬೆಂಗಳೂರಿನ ಸಮರ್ಥನಂ ಅಂಧರ ವಿಕಾಸ ಕೇಂದ್ರದಲ್ಲಿ ಬಿ.ಎ ಪದವಿ ಪೂರೈಸಿ ಪ್ರಸ್ತುತ ಜ್ಞಾನಭಾರತಿ ಎಜುಕೇಶನ್ ಸೊಸೈಟಿಯಲ್ಲಿ ಎಂ.ಎ ವ್ಯಾಸಾಂಗ ಮಾಡುತ್ತಿದ್ದಾರೆ.
ಕಾವ್ಯಾಳ ಕ್ರೀಡಾ ಜೀವನಕ್ಕೆ ಶಿವಮೊಗ್ಗದ ಅಂಧರ ವಿಕಾಸ ಕೇಂದ್ರದ ಶಿಕ್ಷಕರಾದ ಸುರೇಶ್ ಹಾಗೂ ಈಶ್ವರ್ ನೀಡಿದ ಪ್ರೇರಣೆ ಮತ್ತು ಮಾರ್ಗದರ್ಶನ ಮಹತ್ತರವಾದದ್ದು. ಜೊತೆಗೆ ಬೆಂಗಳೂರಿನ ಶಿಕಾ ಶೆಟ್ಟಿ ಮತ್ತು ಚಂದು ನೀಡಿದ ಕೋಚಿಂಗ್ ಅವರ ಆಟಕ್ಕೆ ಬಲ ತುಂಬಿದೆ. ಜ್ಞಾನಭಾರತಿ ಎಜುಕೇಶನ್ ಸೊಸೈಟಿಯ ಸಹಕಾರವು ಸಹ ಕಾವ್ಯಾಳ ಕ್ರೀಡಾ ಬೆಳವಣಿಗೆಯಲ್ಲಿ ಮುಖ್ಯ ಪಾತ್ರ ವಹಿಸಿದೆ.
ಐದು ಹೆಣ್ಣುಮಕ್ಕಳ ಬಡ ಕುಟುಂಬದಲ್ಲಿ ಬೆಳೆಯುತ್ತಿದ್ದ ಕಾವ್ಯಾ ವಿಶ್ವಕಪ್ ನಲ್ಲಿ ಭಾರತ ಸಾಧಿಸಿದ ಅಭೂತಪೂರ್ವ ಜಯದಲ್ಲಿ ಹಂಚಿಕೊಂಡ ಪಾತ್ರಕ್ಕಾಗಿ ಇದೀಗ ರಾಜ್ಯದ ಮಟ್ಟದಲ್ಲೂ, ದೇಶದ ಮಟ್ಟದಲ್ಲೂ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ಅಂಧರ ಕ್ರಿಕೆಟ್ ವಿಶ್ವಕಪ್ ಗೆಲುವಿನಲ್ಲಿ ರಿಪ್ಪನ್ ಪೇಟೆಯ ಕಾವ್ಯಾಳ ಮಿಂಚು — ಕರ್ನಾಟಕಕ್ಕೆ ಹೆಮ್ಮೆಯ ಕ್ಷಣ!

ಅಂಧರ ಕ್ರಿಕೆಟ್ ವಿಶ್ವಕಪ್ ಗೆಲ್ಲುವ ಮೂಲಕ ರಿಪ್ಪನ್ ಪೇಟೆ ಪಟ್ಟಣಕ್ಕೂ , ಕರ್ನಾಟಕ ರಾಜ್ಯಕ್ಕೂ , ದೇಶಕ್ಕೂ ಹೆಮ್ಮೆ ತಂದ ಕಾವ್ಯಾ ವಿ ರವರ ಪೋಷಕರನ್ನು ಪೋಸ್ಟ್ ಮ್ಯಾನ್ ನ್ಯೂಸ್ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಲಾಯಿತು.ಈ ಸಂಧರ್ಭದಲ್ಲಿ ಗ್ರಾಪಂ ಉಪಾಧ್ಯಕ್ಷ ಸುಧೀಂದ್ರ ಪೂಜಾರಿ , ಸಂಪಾದಕರಾದ ರಫ಼ಿ ರಿಪ್ಪನ್ ಪೇಟೆ ಇದ್ದರು.


