ತೀರ್ಥಹಳ್ಳಿ ಪೊಲೀಸ್ ಠಾಣೆಯ ಗಣಪತಿ ವಿಸರ್ಜನೆ ; ಚಂಡೆ ಸದ್ದಿಗೆ ಡಿವೈಎಸ್‌ಪಿ ಭಾನುಪ್ರಕಾಶ್, ಸಿಪಿಐ ಇಮ್ರಾನ್ ಹೆಜ್ಜೆ

ತೀರ್ಥಹಳ್ಳಿ ಪೊಲೀಸ್ ಠಾಣೆಯ ಗಣಪತಿ ವಿಸರ್ಜನೆ ; ಚಂಡೆ ಸದ್ದಿಗೆ ಡಿವೈಎಸ್‌ಪಿ ಭಾನುಪ್ರಕಾಶ್, ಸಿಪಿಐ ಇಮ್ರಾನ್ ಹೆಜ್ಜೆ

Thirthahalli police celebrated Ganesh Visarjan with simplicity as DySP Bhanu Prakash, CPI Imran Baig and other policemen danced to Chende and Nashik Band beats.

ತೀರ್ಥಹಳ್ಳಿ: ಪಟ್ಟಣದ ರಥಬೀದಿಯಲ್ಲಿರುವ ಪೊಲೀಸ್ ಠಾಣೆಯಲ್ಲಿ ಕಳೆದ ಮೂರು ವರ್ಷಗಳಿಂದ ಗಣೇಶ ಚತುರ್ಥಿಯಂದು ಗಣಪತಿ ಪ್ರತಿಷ್ಠಾಪಿಸಿ, ಸರಳವಾಗಿ ವಿಸರ್ಜನೆ ಮಾಡುವ ಸಂಪ್ರದಾಯ ಮುಂದುವರಿದಿದೆ.

ಈ ಬಾರಿಯೂ ಪೊಲೀಸ್ ಠಾಣೆಯಲ್ಲಿ ಪ್ರತಿಷ್ಠಾಪಿಸಲಾಗಿದ್ದ ಗಣಪತಿಯನ್ನು ಬುಧವಾರ ಮಧ್ಯಾಹ್ನದೊಳಗೆ ವಿಸರ್ಜನೆ ಮಾಡಲಾಯಿತು.
ತೀರ್ಥಹಳ್ಳಿ ಪಟ್ಟಣದ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮೂರನೇ ದಿನದಂದು 70ಕ್ಕೂ ಹೆಚ್ಚು ಗಣಪತಿ ಮೂರ್ತಿಗಳ ವಿಸರ್ಜನೆ ನಡೆಯಲಿರುವ ಹಿನ್ನೆಲೆಯಲ್ಲಿ, ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರು ಬಂದೋಬಸ್ತ್ ಹಾಗೂ ಸಂಚಾರ ನಿಯಂತ್ರಣ ಕರ್ತವ್ಯಕ್ಕೆ ನಿಯೋಜಿತರಾಗಬೇಕಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸ್ ಠಾಣೆಯಲ್ಲಿ ಪ್ರತಿಷ್ಠಾಪಿಸಿದ್ದ ಗಣಪತಿಯನ್ನು ಮಧ್ಯಾಹ್ನದೊಳಗೆ ವಿಸರ್ಜನೆ ಮಾಡಲಾಯಿತು.

ಪೊಲೀಸ್ ಠಾಣೆಯಿಂದ ಆಗುಂಬೆ ಬಸ್ ನಿಲ್ದಾಣದವರೆಗೆ ಗಣಪತಿ ಮೂರ್ತಿಯನ್ನು ಮೆರವಣಿಗೆಯಲ್ಲಿ ಕೊಂಡೊಯ್ದು, ಬಳಿಕ ತುಂಗಾ ನದಿಯಲ್ಲಿ ವಿಸರ್ಜನೆ ಮಾಡಲಾಯಿತು. ಮೆರವಣಿಗೆಯಲ್ಲಿ ಚಂಡೆ ಹಾಗೂ ನಾಸಿಕ್ ಬ್ಯಾಂಡ್‌ಗಳ ಸದ್ದು ಮೊಳಗುತ್ತಿದ್ದಂತೆ ಪೊಲೀಸರು ಕೂಡ ಸಂಭ್ರಮದಿಂದ ಹೆಜ್ಜೆ ಹಾಕಿದರು.

ನೂತನ ಡಿವೈಎಸ್‌ಪಿ ಭಾನುಪ್ರಕಾಶ್ ಹಾಗೂ ಸಿಪಿಐ ಇಮ್ರಾನ್ ಬೇಗ್ ಸೇರಿದಂತೆ ಹಲವು ಪೊಲೀಸರು ಚಂಡೆ-ನಾಸಿಕ್ ಬ್ಯಾಂಡ್‌ಗಳ ತಾಳಕ್ಕೆ ಕುಣಿದು ಸಂಭ್ರಮಿಸಿದ್ದು, ಸಾರ್ವಜನಿಕರ ಗಮನ ಸೆಳೆಯಿತು. ಕರ್ತವ್ಯದ ಒತ್ತಡದ ನಡುವೆಯೂ ಪೊಲೀಸರ ಈ ಸರಳ ಹಾಗೂ ಸೌಹಾರ್ದಯುತ ಗಣೇಶೋತ್ಸವದ ಕ್ಷಣಗಳು ಗಮನಾರ್ಹವಾಗಿದ್ದವು.

ಸಾರ್ವಜನಿಕರ ಸುರಕ್ಷತೆ ಹಾಗೂ ಗಣೇಶೋತ್ಸವದ ಬಂದೋಬಸ್ತ್ ಕರ್ತವ್ಯದಲ್ಲಿ ನಿರತರಾಗಬೇಕಿರುವ ಪೊಲೀಸರು, ತಮ್ಮ ಠಾಣೆಯ ಗಣಪತಿ ವಿಸರ್ಜನೆಯನ್ನು ಸರಳವಾಗಿ ನೆರವೇರಿಸಿ, ಬಳಿಕ ಕರ್ತವ್ಯಕ್ಕೆ ತೆರಳಿದರು. ಈ ಮೂಲಕ ಪೊಲೀಸ್ ಠಾಣೆಯಲ್ಲಿ ನಡೆದ ಗಣೇಶೋತ್ಸವಕ್ಕೆ ಸಂಭ್ರಮದ ವಾತಾವರಣದಲ್ಲಿ ತೆರೆ ಬಿದ್ದಿತು.

About The Author