ಸಾಗರ: ಕಸ್ತೂರಿ ರಂಗನ್ ವರದಿ ವಿರುದ್ಧ ರೈತರ ಆಕ್ರೋಶ; ಬ್ಯಾರಿಕೇಡ್ ಕಿತ್ತೆಸೆದು ಪ್ರತಿಭಟನೆ
Farmers staged a massive protest in Sagara against the 7th draft notification of the Kasturirangan report, demanding a fresh physical survey and exclusion of inhabited and agricultural areas.
ಸಾಗರ: ಕಸ್ತೂರಿ ರಂಗನ್ ವರದಿಯ 7ನೇ ಕರಡು ಅಧಿಸೂಚನೆ ಹೊರಡಿಸಿರುವುದನ್ನು ವಿರೋಧಿಸಿ ಶಿವಮೊಗ್ಗ ಜಿಲ್ಲಾ ರೈತ ಸಂಘದ ವತಿಯಿಂದ ಗುರುವಾರ ಸಾಗರದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಯಿತು.
ನಗರದ ಮಹಾಗಣಪತಿ ದೇವಸ್ಥಾನದಿಂದ ಆರಂಭವಾದ ಮೆರವಣಿಗೆ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಉಪವಿಭಾಗಾಧಿಕಾರಿ ಕಚೇರಿಯತ್ತ ಸಾಗಿತು. ಬಳಿಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಪ್ರತಿಭಟನೆಯಲ್ಲಿ ಮಾತನಾಡಿದ ಮಾಜಿ ಸಚಿವ ಎಚ್. ಹಾಲಪ್ಪ, ಕಸ್ತೂರಿ ರಂಗನ್ ವರದಿ ಅನುಷ್ಠಾನದ ಹೆಸರಿನಲ್ಲಿ ಮಲೆನಾಡು ರೈತರ ಬದುಕಿಗೆ ತೊಂದರೆ ಉಂಟುಮಾಡುವ ಯಾವುದೇ ಕ್ರಮವನ್ನು ಸಹಿಸುವುದಿಲ್ಲ ಎಂದು ಹೇಳಿದರು.
ರಾಜ್ಯದ 20,668 ಎಕರೆ ಪ್ರದೇಶ ಪರಿಸರ ಸೂಕ್ಷ್ಮ ವ್ಯಾಪ್ತಿಗೆ ಒಳಪಡಲಿದ್ದು, 1,449 ಗ್ರಾಮಗಳು ಇದರ ವ್ಯಾಪ್ತಿಗೆ ಬರುತ್ತವೆ. ಶಿವಮೊಗ್ಗ ಜಿಲ್ಲೆಯ 449 ಗ್ರಾಮಗಳು ಕೂಡ ಇದರಲ್ಲಿ ಸೇರಿವೆ. ಹೀಗಾಗಿ ಮಲೆನಾಡು ಭಾಗದ ರೈತರು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಅವರು ಮನವಿ ಮಾಡಿದರು.
ಕೇರಳದಲ್ಲಿ ಸರ್ಕಾರ, ವಿವಿಧ ರಾಜಕೀಯ ಪಕ್ಷಗಳು ಹಾಗೂ ಸರ್ಕಾರಿ ನೌಕರರು ಒಗ್ಗಟ್ಟಾಗಿ ವರದಿ ವಿರುದ್ಧ ಧ್ವನಿ ಎತ್ತಿದ್ದರಿಂದ ಪರಿಷ್ಕೃತ ವರದಿ ಜಾರಿಗೊಳಿಸಲಾಯಿತು. ಅಲ್ಲದೆ, ಸ್ಥಳೀಯವಾಗಿ ದೈಹಿಕ ಸಮೀಕ್ಷೆ ನಡೆಸಿ ಹಲವು ಪ್ರದೇಶಗಳನ್ನು ಪರಿಸರ ಸೂಕ್ಷ್ಮ ವ್ಯಾಪ್ತಿಯಿಂದ ಕೈಬಿಡಲಾಗಿತ್ತು. ಕರ್ನಾಟಕದಲ್ಲಿಯೂ ಇದೇ ರೀತಿಯಲ್ಲಿ ಎಲ್ಲರೂ ಒಗ್ಗಟ್ಟಾಗಿ ಹೋರಾಟ ನಡೆಸಬೇಕು ಎಂದು ಹಾಲಪ್ಪ ಹೇಳಿದರು.
“ಕಸ್ತೂರಿ ರಂಗನ್ ವರದಿ ಕುರಿತು ಮುಖ್ಯಮಂತ್ರಿಯವರು ವಿಶೇಷ ಅಧಿವೇಶನ ಕರೆಯುತ್ತೇನೆ ಎಂದಿರುವುದನ್ನು ಸ್ವಾಗತಿಸುತ್ತೇನೆ. ವರದಿಯನ್ನು ಸಾರಾಸಗಟಾಗಿ ತಿರಸ್ಕರಿಸುವುದರಿಂದ ಸಮಸ್ಯೆ ಮತ್ತೊಂದು ರೂಪದಲ್ಲಿ ಎದುರಾಗುವ ಸಾಧ್ಯತೆಯಿದೆ. ಜನವಸತಿ, ಕೃಷಿ ಚಟುವಟಿಕೆ ಸೇರಿದಂತೆ ಬಳಕೆಯಲ್ಲಿರುವ ಭೂಮಿಯನ್ನು ಹೊರತುಪಡಿಸಿ ಮತ್ತೊಮ್ಮೆ ದೈಹಿಕ ಸಮೀಕ್ಷೆ ನಡೆಸಿ ವರದಿ ಸಿದ್ಧಪಡಿಸಬೇಕು. ಇದರಿಂದ ಮಲೆನಾಡು ರೈತರ ಆತಂಕವನ್ನು ದೂರ ಮಾಡಬೇಕು,” ಎಂದು ಎಚ್. ಹಾಲಪ್ಪ ಒತ್ತಾಯಿಸಿದರು.
ರೈತ ಸಂಘದ ಜಿಲ್ಲಾಧ್ಯಕ್ಷ ದಿನೇಶ್ ಶಿರವಾಳ ಮಾತನಾಡಿ, ಕಸ್ತೂರಿ ರಂಗನ್ ವರದಿ ಜಾರಿಯಾದರೆ ಜಿಲ್ಲೆಗೆ ಶಾಪವಾಗಲಿದೆ. ವರದಿ ಯಥಾವತ್ತಾಗಿ ಅನುಷ್ಠಾನಗೊಂಡರೆ ಮಲೆನಾಡಿನ ಜನರಿಗೆ ಮರಣ ಶಾಸನವಾಗಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ವರದಿ ವಿರುದ್ಧ ನಿರಂತರ ಹೋರಾಟ ನಡೆಯುತ್ತಿದ್ದು, ರೈತ ಸಂಘವು ಮುಂದಿನ ಎಲ್ಲ ಹೋರಾಟಗಳಿಗೂ ಕೈಜೋಡಿಸಲಿದೆ. ಪಕ್ಷಭೇದ ಮರೆತು ಎಲ್ಲರೂ ಒಗ್ಗಟ್ಟಾಗಿ ಹೋರಾಟ ನಡೆಸಿದರೆ ಮಾತ್ರ ವರದಿಯಿಂದ ಮಲೆನಾಡು ಭಾಗವನ್ನು ರಕ್ಷಿಸಲು ಸಾಧ್ಯ ಎಂದು ಹೇಳಿದರು.
ಕಸ್ತೂರಿ ರಂಗನ್ ವರದಿಯನ್ನು ಪುನರ್ ಪರಿಶೀಲಿಸಬೇಕು. ಜನವಸತಿ ಪ್ರದೇಶಗಳನ್ನು ಹೊರಗಿಟ್ಟು ದೈಹಿಕ ಸಮೀಕ್ಷೆ ನಡೆಸಿ ಹೊಸದಾಗಿ ವರದಿ ಸಿದ್ಧಪಡಿಸಬೇಕು. ವರದಿ ಜಾರಿಯಾದಲ್ಲಿ ರಾಜ್ಯದಲ್ಲಿ ಉಂಟಾಗಬಹುದಾದ ಸಮಸ್ಯೆಗಳ ಕುರಿತು ಕೇಂದ್ರ ಸರ್ಕಾರಕ್ಕೆ ಮುಖ್ಯಮಂತ್ರಿ ಸಮಗ್ರ ಮನವಿ ಸಲ್ಲಿಸಬೇಕು ಎಂದು ದಿನೇಶ್ ಶಿರವಾಳ ಒತ್ತಾಯಿಸಿದರು.
ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಪ್ರತಿಭಟನಾ ಮೆರವಣಿಗೆಗೆ ಚಾಲನೆ ನೀಡಿದರು. ಪ್ರತಿಭಟನೆಯಲ್ಲಿ ಮಲ್ಲಿಕಾರ್ಜುನ ಹಕ್ರೆ, ಟಿ.ಡಿ. ಮೇಘರಾಜ್, ಚೇತನರಾಜ ಕಣ್ಣೂರು, ರಮೇಶ್ ಕೆಳದಿ, ಡಾ. ರಾಮಚಂದ್ರಪ್ಪ ಮನೆಘಟ್ಟ, ಶಿವು ಮೈಲಾರಿಕೊಪ್ಪ, ಪ್ರಸನ್ನ ಕೆರೆಕೈ, ಸೋಮಶೇಖರ್, ಸಂತೋಷ್ ಚಿಕ್ಕನೆಲ್ಲೂರು, ಸುನೀಲ್, ಚಂದ್ರು ಪೂಜಾರಿ ಸೇರಿದಂತೆ ರೈತ ಸಂಘದ ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.
ಪ್ರತಿಭಟನಾ ಮೆರವಣಿಗೆ ಉಪವಿಭಾಗಾಧಿಕಾರಿ ಕಚೇರಿ ಆವರಣಕ್ಕೆ ಪ್ರವೇಶಿಸದಂತೆ ಪೊಲೀಸ್ ಇಲಾಖೆ ಬ್ಯಾರಿಕೇಡ್ ಅಳವಡಿಸಿತ್ತು. ಇದರಿಂದ ಆಕ್ರೋಶಗೊಂಡ ರೈತರು ಬ್ಯಾರಿಕೇಡ್ ಕಿತ್ತೆಸೆದು ಪ್ರತಿಭಟನೆ ನಡೆಸಿದರು.
ರೈತರನ್ನು ಬ್ಯಾರಿಕೇಡ್ ಹಾಕಿ ತಡೆಯುವ ಮೂಲಕ ಅವಮಾನಿಸಲಾಗುತ್ತಿದೆ ಎಂದು ಆರೋಪಿಸಿದ ಪ್ರತಿಭಟನಾಕಾರರು, ಪೊಲೀಸರ ಕ್ರಮದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ಕೆಲಕಾಲ ವಾಗ್ವಾದವೂ ನಡೆಯಿತು.
ರಿಪ್ಪನ್ಪೇಟೆಯಲ್ಲಿ ಮೋದಿ ಜನ್ಮದಿನಾಚರಣೆ : ವರಸಿದ್ದಿವಿನಾಯಕ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ Special pooja was offered at Varasiddhi…
ಪ್ರಧಾನಿ ಮೋದಿ ಜನ್ಮದಿನ: ಶಿವಮೊಗ್ಗದಲ್ಲಿ ‘ಸೇವಾ ಸಂಕಲ್ಪ ಅಭಿಯಾನ’ಕ್ಕೆ ಚಾಲನೆ BJP launches a month-long Seva Sankalpa Abhiyan…
ಮೋದಿ ಹುಟ್ಟುಹಬ್ಬ ‘ನಿರುದ್ಯೋಗಿಗಳ ದಿನ’ವಾಗಿ ಆಚರಣೆ; ಯುವ ಕಾಂಗ್ರೆಸ್ ಪ್ರತಿಭಟನೆ Youth Congress and NSUI workers in Shivamogga…
ಶಿವಮೊಗ್ಗ ಲೋಕಾಯುಕ್ತ ಎಸ್ಪಿಯಾಗಿ ಆಂಟನಿ ಜಾನ್ ನೇಮಕ Anthony John has been appointed as the new Lokayukta…
ಕಡವೆ ಬೇಟೆ ಮಾಡಿ ಮಾಂಸ ಕತ್ತರಿಸುತ್ತಿದ್ದಾಗಲೇ ದಾಳಿ! ಮೂವರ ಬಂಧನ | 70 ಕೆ.ಜಿ. ಮಾಂಸ , ಬಂದೂಕು ಜಪ್ತಿ…
ಬೇಕರಿ ಉತ್ಪನ್ನಗಳ ತಯಾರಿಕೆಯಲ್ಲಿ ಕೌಶಲ್ಯಾಭಿವೃದ್ಧಿ ತರಬೇತಿ: ಅರ್ಜಿ ಆಹ್ವಾನ One-month skill development training on bakery product preparation…