Headlines

ಬಸ್ ನಿಲ್ಲಿಸದಿದ್ದಕ್ಕೆ ಅಡ್ಡಗಟ್ಟಿ ಚಾಲಕ-ನಿರ್ವಾಹಕನ ಮೇಲೆ ಹಲ್ಲೆ; ಜೀವ ಬೆದರಿಕೆ ಆರೋಪ

ಬಸ್ ನಿಲ್ಲಿಸದಿದ್ದಕ್ಕೆ ಅಡ್ಡಗಟ್ಟಿ ಚಾಲಕ-ನಿರ್ವಾಹಕನ ಮೇಲೆ ಹಲ್ಲೆ; ಜೀವ ಬೆದರಿಕೆ ಆರೋಪ

Private express bus driver and conductor were allegedly assaulted after refusing to stop at a non-designated bus stop near Shivamogga. A case has been registered at Shivamogga Rural Police Station.

ಶಿವಮೊಗ್ಗ, ಜುಲೈ 5: ಎಕ್ಸ್‌ಪ್ರೆಸ್ ಬಸ್‌ಗೆ ನಿಗದಿತ ನಿಲುಗಡೆ ಇಲ್ಲದ ಕಾರಣ ಬಸ್ ನಿಲ್ಲಿಸದಿದ್ದಕ್ಕೆ ಸಿಟ್ಟಿಗೆದ್ದ ವ್ಯಕ್ತಿಯೊಬ್ಬ ತನ್ನ ಸಹಚರರೊಂದಿಗೆ ಸೇರಿ ಖಾಸಗಿ ಬಸ್ ಚಾಲಕ ಹಾಗೂ ನಿರ್ವಾಹಕನ ಮೇಲೆ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿರುವ ಘಟನೆ ಶಿವಮೊಗ್ಗ ತಾಲೂಕಿನ ಮೇಲಿನ ಕುಂಚೇನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಹಲ್ಲೆಗೊಳಗಾದವರು ವಿಜಯ ಮೋಟಾರ್ಸ್ ಸಂಸ್ಥೆಯ ನಿರ್ವಾಹಕ ಲೋಕೇಶ್ ಡಿ.ಕೆ. (42) ಎಂದು ಗುರುತಿಸಲಾಗಿದೆ. ಅವರು ಚಾಲಕ ಮಂಜುನಾಥ್ ಅವರೊಂದಿಗೆ ಶಿವಮೊಗ್ಗದಿಂದ ಶಿಕಾರಿಪುರಕ್ಕೆ ಸಂಚರಿಸುತ್ತಿದ್ದ ಎಕ್ಸ್‌ಪ್ರೆಸ್ ಬಸ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.

ದೂರಿನ ಪ್ರಕಾರ, ಈ ಎಕ್ಸ್‌ಪ್ರೆಸ್ ಬಸ್‌ಗೆ ಸವಳಂಗದಲ್ಲಿ ಮಾತ್ರ ಅಧಿಕೃತ ನಿಲುಗಡೆ ಇದ್ದು, ಮೇಲಿನ ಕುಂಚೇನಹಳ್ಳಿಯಲ್ಲಿ ಬಸ್ ನಿಲ್ಲಿಸಲು ಅವಕಾಶವಿಲ್ಲ. ಗ್ರಾಮದ ನಿವಾಸಿ ಲೋಕೇಶ್ ನಾಯ್ಕ್ ಹಾಗೂ ಅವರ ಪತ್ನಿ ಕಳೆದ 15 ದಿನಗಳಿಂದ ತಮ್ಮ ಗ್ರಾಮದಲ್ಲಿ ಬಸ್ ನಿಲ್ಲಿಸುವಂತೆ ಒತ್ತಾಯಿಸುತ್ತಿದ್ದರು. ಆದರೆ, ನಿಲುಗಡೆ ಇಲ್ಲದ ಕಾರಣ ಸಾಧ್ಯವಿಲ್ಲ ಎಂದು ತಿಳಿಸಲಾಗಿತ್ತು. ಬದಲಾಗಿ, ಸುಮಾರು 10 ನಿಮಿಷ ಮೊದಲು ಬರುವ ಮತ್ತೊಂದು ಬಸ್‌ನಲ್ಲಿ ಪ್ರಯಾಣಿಸಲು ಬಸ್ ಸಿಬ್ಬಂದಿ ಹಾಗೂ ಮಾಲೀಕರು ಸಲಹೆ ನೀಡಿದ್ದರು.

ಮೊನ್ನೆ ಬೆಳಿಗ್ಗೆ ಬಸ್ ಮೇಲಿನ ಕುಂಚೇನಹಳ್ಳಿಗೆ ತಲುಪಿದ ವೇಳೆ ಲೋಕೇಶ್ ನಾಯ್ಕ್ ಹಾಗೂ 5 ರಿಂದ 6 ಮಂದಿ ಬಸ್‌ಗೆ ಅಡ್ಡಗಟ್ಟಿದ್ದಾರೆ ಎನ್ನಲಾಗಿದೆ. ಬಳಿಕ ಬಸ್ ಒಳಗೆ ನುಗ್ಗಿದ ಲೋಕೇಶ್ ನಾಯ್ಕ್, ನಿರ್ವಾಹಕ ಲೋಕೇಶ್ ಡಿ.ಕೆ. ಅವರ ಮೂಗಿಗೆ ಗುದ್ದಿ ಗಾಯಗೊಳಿಸಿದ್ದು, ತಲೆಯ ಹಿಂಭಾಗಕ್ಕೂ ಮುಷ್ಟಿಯಿಂದ ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಇದೇ ವೇಳೆ ಚಾಲಕ ಮಂಜುನಾಥ್ ಅವರ ಮೇಲೂ ಹಲ್ಲೆ ನಡೆಸಲಾಗಿದೆ ಎಂದು ತಿಳಿದುಬಂದಿದೆ.

ಬಸ್‌ನಲ್ಲಿದ್ದ ಪ್ರಯಾಣಿಕರು ಮಧ್ಯಪ್ರವೇಶಿಸಿ ಜಗಳವನ್ನು ಶಮನಗೊಳಿಸಿದ್ದಾರೆ. ಬಳಿಕ ಆರೋಪಿಗಳು ಚಾಲಕ ಹಾಗೂ ನಿರ್ವಾಹಕರಿಗೆ ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಈ ಸಂಬಂಧ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

About The Author