ನೀರಿನ ಪಂಪ್ ಕೇಬಲ್ ಕಳ್ಳತನ ಪ್ರಕರಣ ಭೇದಿಸಿದ ಪೊಲೀಸರು; ₹1.23 ಲಕ್ಷ ಮೌಲ್ಯದ ವಸ್ತುಗಳ ಜಪ್ತಿ
Maluru Police cracked a series of motor cable theft cases in Thirthahalli and arrested a Shivamogga man. Stolen copper cables worth ₹93,000 and a Bajaj Pulsar bike were seized.
ತೀರ್ಥಹಳ್ಳಿ: ತಾಲೂಕಿನ ತುಂಗಾ ನದಿ ತೀರದ ತೋಟಗಳಲ್ಲಿ ರೈತರಿಗೆ ತಲೆನೋವಾಗಿದ್ದ ನೀರಿನ ಪಂಪ್ ಕೇಬಲ್ ಕಳ್ಳತನ ಪ್ರಕರಣವನ್ನು ಮಾಳೂರು ಪೊಲೀಸರು ಭೇದಿಸಿದ್ದು, ಆರೋಪಿಯನ್ನು ಬಂಧಿಸಿ ಕಳವು ಮಾಡಿದ್ದ ಕೇಬಲ್ಗಳು ಹಾಗೂ ಕೃತ್ಯಕ್ಕೆ ಬಳಸಿದ್ದ ಬೈಕ್ನ್ನು ವಶಪಡಿಸಿಕೊಂಡಿದ್ದಾರೆ.
ತೀರ್ಥಹಳ್ಳಿ ತಾಲೂಕಿನ ನಿಡಗಳಲೆ ಗ್ರಾಮದ ಮುಡುಬಾ, ಮುಂಡುವಳ್ಳಿ ಗ್ರಾಮದ ಹೊಸಳ್ಳಿ ಹಾಗೂ ತೂದೂರು ಸುತ್ತಮುತ್ತಲಿನ ಪ್ರದೇಶಗಳಲ್ಲಿ ರೈತರು ತಮ್ಮ ತೋಟಗಳಿಗೆ ನೀರು ಹಾಯಿಸಲು ತುಂಗಾ ನದಿಯಲ್ಲಿ ಮೋಟಾರ್ ಅಳವಡಿಸಿದ್ದರು. ಕಳೆದ ಕೆಲವು ದಿನಗಳಿಂದ ಈ ಮೋಟಾರ್ಗಳಿಗೆ ಸಂಪರ್ಕ ಕಲ್ಪಿಸಲಾಗಿದ್ದ ಬೆಲೆಬಾಳುವ ಕಾಪರ್ ಕೇಬಲ್ಗಳನ್ನು ಕತ್ತರಿಸಿ ಕಳ್ಳತನ ಮಾಡಲಾಗುತ್ತಿತ್ತು.
ಸತತ ಕಳ್ಳತನದಿಂದ ಆತಂಕಗೊಂಡ ರೈತರು ಮಾಳೂರು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ವಿಶೇಷ ತನಿಖಾ ತಂಡ ರಚಿಸಿ ಆರೋಪಿಯ ಪತ್ತೆಗೆ ಕಾರ್ಯಾಚರಣೆ ನಡೆಸಿದರು.
ತನಿಖೆಯ ವೇಳೆ ಶಿವಮೊಗ್ಗ ನಗರದ ರಾಗಿಗುಡ್ಡ 4ನೇ ಕ್ರಾಸ್ ನಿವಾಸಿ ಕುಮಾರ ಎಸ್.ಕೆ. (31) ಎಂಬಾತನನ್ನು ಬಂಧಿಸಲಾಗಿದೆ. ಆರೋಪಿಯಿಂದ ಅಂದಾಜು ₹93 ಸಾವಿರ ಮೌಲ್ಯದ 750 ಮೀಟರ್ ಉದ್ದದ ಕಾಪರ್ ಮೋಟಾರ್ ಕೇಬಲ್ಗಳನ್ನು ಜಪ್ತಿ ಮಾಡಲಾಗಿದೆ. ಅಲ್ಲದೇ ಕಳ್ಳತನಕ್ಕೆ ಬಳಸಿದ್ದ ₹30 ಸಾವಿರ ಮೌಲ್ಯದ ಬಜಾಜ್ ಪಲ್ಸರ್ ಬೈಕ್ನ್ನೂ ವಶಪಡಿಸಿಕೊಳ್ಳಲಾಗಿದೆ.
ಪ್ರಕರಣದ ಮುಂದಿನ ತನಿಖೆಯನ್ನು ಮಾಳೂರು ಪೊಲೀಸರು ಮುಂದುವರಿಸಿದ್ದಾರೆ.