





ಕಾರು-ಬೈಕ್ ನಡುವೆ ಭೀಕರ ಮುಖಾಮುಖಿ ಡಿಕ್ಕಿ; ಯುವಕನ ಸ್ಥಿತಿ ಗಂಭೀರ
Severe car-bike accident near Ripponpet’s Siddappanagudi. Bike rider Pradeep from Kundur critically injured after a head-on collision due to reckless overtaking.
ರಿಪ್ಪನ್ಪೇಟೆ: ಪಟ್ಟಣದ ಸಮೀಪವಿರುವ ಶಿವಮೊಗ್ಗ ರಸ್ತೆಯ ಸಿದ್ದಪ್ಪನಗುಡಿ ಬಳಿ ವೇಗವಾಗಿ ಬಂದ ಕಾರೊಂದು ಬೈಕ್ಗೆ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ, ಬೈಕ್ ಸವಾರನಿಗೆ ಗಂಭೀರ ಗಾಯಗಳಾಗಿರುವ ಘಟನೆ ವರದಿಯಾಗಿದೆ.
ರಸ್ತೆಯಲ್ಲಿ ಸಾಗುತ್ತಿದ್ದ ಲಾರಿಯನ್ನು ಹಿಂದಿಕ್ಕುವ (ಓವರ್ಟೇಕ್) ಭರದಲ್ಲಿ ಕಾರು ಚಾಲಕನ ಅಜಾಗರೂಕತೆಯಿಂದ ಈ ಭೀಕರ ಅಪಘಾತ ಸಂಭವಿಸಿದೆ ಎಂದು ಸ್ಥಳದಲ್ಲಿದ್ದ ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದಾರೆ.
ಗಾಯಗೊಂಡ ಯುವಕನನ್ನು ಹೊನ್ನಾಳಿ ತಾಲೂಕು ಸಮೀಪದ ಕುಂದೂರು ಗ್ರಾಮದ ನಿವಾಸಿ ಪ್ರದೀಪ್ ಎಂದು ಗುರುತಿಸಲಾಗಿದೆ. ಅಪಘಾತದ ಭೀಕರತೆಗೆ ಪ್ರದೀಪ್ ಅವರ ತಲೆ ಹಾಗೂ ಕಾಲಿಗೆ ತೀವ್ರ ಸ್ವರೂಪದ ಪೆಟ್ಟಾಗಿದ್ದು, ತಕ್ಷಣವೇ ಸ್ಥಳೀಯರು ಸ್ಪಂದಿಸಿ ಗಾಯಾಳುವನ್ನು ಶಿವಮೊಗ್ಗದ ಆಸ್ಪತ್ರೆಗೆ ರವಾನಿಸಿದ್ದಾರೆ.
ಘಟನೆಯ ವಿವರ:
ಶಿವಮೊಗ್ಗ ಮೂಲದವರಿಗೆ ಸೇರಿದ ಟಾಟಾ ಕರ್ವ್ (Tata Curvv) ಕಾರು ರಿಪ್ಪನ್ಪೇಟೆ ಮಾರ್ಗವಾಗಿ ಸಂಚರಿಸುತ್ತಿತ್ತು. ಈ ವೇಳೆ ಸಿದ್ದಪ್ಪನಗುಡಿ ಬಳಿ ಮುಂದಿದ್ದ ಲಾರಿಯೊಂದನ್ನು ಓವರ್ಟೇಕ್ ಮಾಡಲು ಕಾರು ಚಾಲಕ ಯತ್ನಿಸಿದ್ದಾನೆ. ಇದೇ ವೇಳೆ ಎದುರಿನಿಂದ ಬರುತ್ತಿದ್ದ ಪ್ರದೀಪ್ ಅವರ ಬೈಕ್ಗೆ ಕಾರು ನೇರವಾಗಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಕಾರಿನ ಮುಂಭಾಗದ ಗಾಜು (ವಿಂಡ್ ಶೀಲ್ಡ್) ಸಂಪೂರ್ಣವಾಗಿ ನಜ್ಜುಗುಜ್ಜಾಗಿದ್ದು, ಅಪಘಾತದ ತೀವ್ರತೆಯನ್ನು ಎತ್ತಿ ತೋರಿಸುತ್ತಿದೆ.
ಬೈಕ್ ಸವಾರ ಪ್ರದೀಪ್ ಕಾರ್ಯಕ್ರಮವೊಂದರಲ್ಲಿ ಭಾಗವಹಿಸುವ ನಿಮಿತ್ತ ಬಾಳೂರು ಸಮೀಪದ ಕಾಳೇಶ್ವರ ಗ್ರಾಮದಲ್ಲಿರುವ ತನ್ನ ಸಂಬಂಧಿಕರ ಮನೆಗೆ ತೆರಳುತ್ತಿದ್ದರು. ಮಾರ್ಗಮಧ್ಯೆ ಈ ಅನಿರೀಕ್ಷಿತ ದುರಂತ ಸಂಭವಿಸಿದೆ.
ಘಟನೆಯ ಮಾಹಿತಿ ತಿಳಿದ ತಕ್ಷಣ ರಿಪ್ಪನ್ಪೇಟೆ ಪೊಲೀಸ್ ಠಾಣೆಯ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ..